ಲಖನೌ: ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್ಸಿಬಿ) ಮತ್ತು ಲಖನೌ ಸೂಪರ್ ಜಯಂಟ್ಸ್ (ಎಲ್ಎಸ್ಜಿ) ನಡುವಿನ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್ 2025) ಟೂರ್ನಿಯ ಕೊನೆಯ ಲೀಗ್ ಪಂದ್ಯದಲ್ಲಿ ದಿಗ್ವೇಶ್ ಸಿಂಗ್ ರಾಠಿ ಅವರು ಮಾಡಿದ್ದ ವಿವಾದಾತ್ಮಕ ರನ್ಔಟ್ ಸಂಬಂಧ ಎಲ್ಎಸ್ಜಿ ನಾಯಕ ರಿಷಭ್ ಪಂತ್ ಅವರನ್ನು ಚೆನ್ನೈ ಸೂಪರ್ ಕಿಂಗ್ಸ್ ಸ್ಪಿನ್ನರ್ ರವಿಚಂದ್ರನ್ ಅಶ್ವಿನ್ ಟೀಕಿಸಿದ್ದಾರೆ.
ಟೂರ್ನಿಯ ಮೊದಲನೇ ಕ್ವಾಲಿಫೈಯರ್ಗೆ ಅರ್ಹತೆ ಪಡೆಯುವ ಸಲುವಾಗಿ ಆರ್ಸಿಬಿಗೆ ಈ ಪಂದ್ಯದ ಗೆಲುವು ಬಹಳ ಮುಖ್ಯವಾಗಿತ್ತು. ಅದರಂತೆ ಈ ಪಂದ್ಯದಲ್ಲಿ 228 ರನ್ಗಳ ಬೃಹತ್ ಗುರಿಯನ್ನು ಬೆನ್ನಟ್ಟುತ್ತಿದ್ದ ಆರ್ಸಿಬಿ ತಂಡ ಗೆಲ್ಲುವ ಸನಿಹದಲ್ಲಿ ಸಾಗುತ್ತಿದ್ದಾಗ, ದಿಗ್ವೇಶ್ ಸಿಂಗ್ ಬೌಲಿಂಗ್ ಸಮಯದಲ್ಲಿ ನಾನ್ಸ್ಟ್ರೈಕ್ ಕಡೆ ಜಿತೇಶ್ ಶರ್ಮಾ ಅವರು ಕ್ರೀಸ್ ತೊರೆದು ಮುಂದೆ ಸಾಗುತ್ತಿದ್ದರು. ಈ ವೇಳೆ ದಿಗ್ವೇಶ್ ರಾಠಿ ಬೌಲಿಂಗ್ ಮುಗಿಸದೆ ಅವರನ್ನು ರನ್ಔಟ್ ಮಾಡಿದ್ದರು.
ಈ ಸನ್ನಿವೇಶದಲ್ಲಿ ದಿಗ್ವೇಶ್ ಸಿಂಗ್ ಅಂಪೈರ್ಗೆ ಮನವಿ ಸಲ್ಲಿಸಿದ್ದರು. ಆದರೆ, ಎಲ್ಎಸ್ಜಿ ನಾಯಕ ರಿಷಭ್ ಪಂತ್, ‘ಔಟ್’ ಮನವಿಯನ್ನು ವಾಪಸ್ ತೆಗೆದುಕೊಂಡು ಕ್ರೀಡಾ ಸ್ಪೂರ್ತಿ ಮೆರೆದಿದ್ದರು. ಈ ನಿರ್ಧಾರಕ್ಕಾಗಿ ಆರ್ಸಿಬಿ ಅಭಿಮಾನಿಗಳು ಕೂಡ ರಿಷಭ್ ಪಂತ್ ಅವರನ್ನು ಮುಕ್ತಕಂಠದಿಂದ ಗುಣಗಾನ ಮಾಡಿದ್ದರು.
ಅಶ್ವಿನ್ ಟೀಕೆ
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿದ ಸ್ಪಿನ್ ದಿಗ್ಗಜ ಆರ್. ಅಶ್ವಿನ್, ನಾಯಕ ರಿಷಭ್ ಪಂತ್ ಅವರ ಕಾರ್ಯವು ತಮ್ಮ ಆಟಗಾರ ದಿಗ್ವೇಶ್ ಸಿಂಗ್ ಅವರನ್ನು ಬೆಂಬಲಿಸುವುದು, ಅದು ಬಿಟ್ಟು ಅವರಿಗೆ ಹಿನ್ನಡೆ ತಂದುಕೊಡುವುದು ಅಲ್ಲ ಎಂದು ಹೇಳಿದ್ದಾರೆ. ಇಂತಹ ಸನ್ನಿವೇಶದಲ್ಲಿ ಬೌಲರ್ ಜೊತೆ ಮಾತನಾಡಬೇಕಾಗಿತ್ತು ಎಂದು ಅವರು ತಿಳಿಸಿದ್ದಾರೆ.
“ಆಟಗಾರನನ್ನು ಬೆಂಬಲಿಸುವುದು ನಾಯಕನ ಕರ್ತವ್ಯವಾಗಿದೆ. ಒಬ್ಬ ಬೌಲರ್ ಅನ್ನು ಸಣ್ಣವನೆಂದು ಭಾವಿಸುವುದು ನಾಯಕನ ಕೆಲಸವಲ್ಲ. ಅಪೀಲ್ ಅನ್ನು ಹಿಂದಕ್ಕೆ ತೆಗೆದುಕೊಳ್ಳುವುದಕ್ಕೂ ಮುನ್ನ ಒಮ್ಮೆ ಬೌಲರ್ ಜೊತೆ ಆರಂಭದಲ್ಲಿ ಚರ್ಚೆ ನಡೆಸಬೇಕಾಗಿತ್ತು” ಎಂದು ಅಶ್ವಿನ್ ಹೇಳಿದ್ದಾರೆ. ಈ ಮೂಲಕ, ಪಂತ್ ಅವರ ಕ್ರೀಡಾ ಸ್ಪೂರ್ತಿಯ ನಿರ್ಧಾರದ ಹಿಂದೆ ತಮ್ಮದೇ ಆಟಗಾರನ ಆತ್ಮಾಭಿಮಾನಕ್ಕೆ ಧಕ್ಕೆ ತಂದಿದ್ದಾರೆ ಎಂದು ಅಶ್ವಿನ್ ಪರೋಕ್ಷವಾಗಿ ಟೀಕಿಸಿದ್ದಾರೆ.