ಮೈಸೂರು: ಪ್ರೇಮಿಗಳಿಬ್ಬರು ಮಂತ್ರ ಮಾಂಗಲ್ಯದ ಮೂಲಕ ಅಂತರ್ಜಾತಿ ವಿವಾಹ ಮಾಡಿಕೊಂಡಿದ್ದಾರೆ.
ನಂಜನಗೂಡಿನಲ್ಲಿ ಈ ಮಂತ್ರ ಮಾಂಗಲ್ಯ ಮದುವೆ ನಡೆದಿದೆ. ನಂಜನಗೂಡು ತಾಲೂಕಿನ ಮುಳ್ಳೂರು ಗ್ರಾಮದ ಎಂ. ಸಂತೋಷ್ ಹಾಗೂ ಮಂಡ್ಯ ಜಿಲ್ಲೆಯ ಮದ್ದೂರು ತಾಲೂಕಿನ ಹೊಸಗಾವಿ ಗ್ರಾಮದ ಸಿ.ರಂಜಿತಾ ಈ ರೀತಿ ಮದುವೆಯಾದ ಪ್ರೇಮಿಗಳು ಎನ್ನಲಾಗಿದೆ.
ಬೆಂಗಳೂರು ಮಹಾನಗರ ಪಾಲಿಕೆಯಲ್ಲಿ ಸಿವಿಲ್ ಇಂಜಿನಿಯರ್ ಆಗಿ ಸಂತೋಷ್ ಕಾರ್ಯನಿರ್ವಹಿಸುತ್ತಿದ್ದಾರೆ. ರಂಜಿತಾ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಾರೆ. ಪ್ರೇಮಿಗಳಿಬ್ಬರೂ ಎರಡು ಕುಟುಂಬಸ್ಥರ ಒಪ್ಪಿಗೆಯ ಮೇರೆಗೆ ಮಂತ್ರ ಮಾಂಗಲ್ಯ ಮೂಲಕ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.
ಕುವೆಂಪು ಅವರ ಮಂತ್ರ ಮಾಂಗಲ್ಯದ ವಿವಾಹ ಸಂಹಿತೆಯನ್ನು ಮಾನವ ಬಂಧುತ್ವ ವೇದಿಕೆಯ ಮುಖ್ಯಸ್ಥ ಉಗ್ರ ನರಸಿಂಹೇಗೌಡ ಬೋಧಿಸಿದ್ದಾರೆ. ಈ ಸಂದರ್ಭದಲ್ಲಿ ಅನೇಕ ಪ್ರಗತಿಪರ ಚಿಂತಕರು ವೇದಿಕೆಯಲ್ಲಿದ್ದರು.