ಬೆಂಗಳೂರು: ಕೆಂಪೇಗೌಡ ನಗರ ಇನ್ಸ್ ಪೆಕ್ಟರ್, ಹಾಗೂ ಸಬ್ ಇನ್ಸ್ ಪೆಕ್ಟರ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಇನ್ಸ್ ಪೆಕ್ಟರ್ ಶಿವಾಜಿರಾವ್, PSI ಶಿವಾನಂದ್ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ಪ್ರಕರಣವೊಂದಕ್ಕೆ ಸಂಬಂಧಿಸಿದಂತೆ 6 ಲಕ್ಷಕ್ಕೆ ಅಧಿಕಾರಿಗಳು ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಮುಂಗಡವಾಗಿ ಒಂದು ಲಕ್ಷ ಪಡೆಯುತ್ತಿದ್ದಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಕೇಶವಮೂರ್ತಿ ಎಂಬುವವರ ದೂರಿನ ಮೇರೆಗೆ ದಾಳಿ ನಡೆಸಿದ್ದ ಲೋಕಾಯುಕ್ತ ಎಸ್ಪಿ ಶ್ರೀನಾಥ್ ಜೋಶಿ ಹಾಗೂ ತಂಡ ಪೊಲೀಸ್ ಅಧಿಕಾರಿಗಳನ್ನು ವಶಕ್ಕೆ ಪಡೆದಿದ್ದಾರೆ. ಲಂಚ ಪಡೆದಿದ್ದ ಒಂದು ಲಕ್ಷ ರೂ. ಹಣವನ್ನು ಕೂಡ ವಶಕ್ಕೆ ಪಡೆದಿದ್ದಾರೆ.
ವಂಚನೆ ಕೇಸ್ ಗೆ ಸಂಬಂಧಿಸಿದಂತೆ ಆರೋಪಿಯಿಂದ ಅಧಿಕಾರಿಗಳು ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಕೇಶವಮೂರ್ತಿ 2020ರಲ್ಲಿ ಉತ್ತಮ್ ಚಂದ್ ಎಂಬುವವರಿಗೆ ವಂಚಿಸಿದ್ದ. ಕೇಶವಮೂರ್ತಿ ಅಬಕಾರಿ ಇಲಾಖೆಯಲ್ಲಿ ಕೆಲಸ ಮಾಡುತ್ತಿದ್ದೇನೆಂದು ಹೇಳಿ ಬಾರ್ ಲೈಸೆನ್ಸ್ ಕೊಡಿಸುವುದಾಗಿ 1.30 ಕೋಟಿ ರೂ. ಹಣ ಹಾಗೂ 1 ಕೆಜಿ ಚಿನ್ನ ಪಡೆದು ವಂಚಿಸಿದ್ದ ಎನ್ನಲಾಗಿದೆ. ಆದರೆ ಲೈಸೆನ್ಸ್ ಕೊಡಿಸದೆ ಹಣ ವಾಪಸ್ ನೀಡದೆ ವಂಚಿಸಿದ್ದ.
ಹಣ ಕೇಳಿದಾಗ ಪ್ರಾಣ ಬೆದರಿಕೆ ಹಾಕಿದ್ದ. ಈ ಬಗ್ಗೆ ಕಳೆದ ಫೆಬ್ರವರಿಯಲ್ಲಿ ಉತ್ತಮ್ ಚಂದ್ ಕೆಂಪೇಗೌಡ ನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಹೀಗಾಗಿ ಎಫ್ ಐಆರ್ ದಾಖಲಿಸಲಾಗಿತ್ತು.
ಆರೋಪಿಗೆ ಸಹಾಯ ಮಾಡುವ ಉದ್ಧೇಶದಿಂದ 6 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದರು ಎನ್ನಲಾಗಿದೆ. ಸದ್ಯ ಅಧಿಕಾರಿಗಳನ್ನು ವಶಕ್ಕೆ ಪಡೆದಿರುವ ಲೋಕಾಯುಕ್ತ, ತನಿಖೆ ನಡೆಸಿದೆ.