ನವದೆಹಲಿ: ಕಾಂಗ್ರೆಸ್ ವಂದೇ ಮಾತರಂ ಅನ್ನು ತುಷ್ಟೀಕರಣಕ್ಕಾಗಿ ವಿಭಜಿಸದಿದ್ದರೆ, ದೇಶವು ಎರಡು ಭಾಗವಾಗುತ್ತಿರಲಿಲ್ಲ. ವಂದೇ ಮಾತರಂ ಘೋಷಣೆಯನ್ನು ಪ್ರಚಾರ ಮಾಡಿದ ಮತ್ತು ಕೂಗಿದವರನ್ನು ಇಂದಿರಾ ಗಾಂಧಿ ಜೈಲಿಗೆ ಹಾಕಿದರು ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.
ವಂದೇ ಮಾತರಂಗೆ 150 ವರ್ಷ ಪೂರ್ಣ ಹಿನ್ನೆಲೆ ರಾಜ್ಯಸಭೆಯಲ್ಲಿ ನಡೆದ ಚರ್ಚೆಯಲ್ಲಿ ಭಾಗಿಯಾಗಿ ಮಾತನಾಡಿದ ಅವರು, ವಂದೇ ಮಾತರಂ 100 ವರ್ಷಗಳನ್ನು ಪೂರೈಸಿದಾಗ ದೇಶವು ತುರ್ತು ಪರಿಸ್ಥಿತಿಯನ್ನು ಎದುರಿಸುತ್ತಿದ್ದ ಕಾರಣ ಸರಿಯಾದ ಮನ್ನಣೆ ಸಿಗಲಿಲ್ಲ ವಂದೇ ಮಾತರಂ 50 ವರ್ಷಗಳನ್ನು ಪೂರೈಸಿದ ನಂತರ ಸೀಮಿತಗೊಳಿಸಲ್ಪಟ್ಟಾಗಲೇ ತುಷ್ಟೀಕರಣ ಪ್ರಾರಂಭವಾಯಿತು. ಆ ತುಷ್ಟೀಕರಣವು ದೇಶದ ವಿಭಜನೆಗೆ ಕಾರಣವಾಯಿತು ಎಂದು ವಾಗ್ದಾಳಿ ನಡೆಸಿದ್ದಾರೆ.
ಲೋಕಸಭೆಯಲ್ಲಿ ವಂದೇ ಮಾತರಂ ಕುರಿತು ಚರ್ಚೆಗಳು ನಡೆಯುತ್ತಿದ್ದಾಗ ಗಾಂಧಿ ಕುಟುಂಬದ ಇಬ್ಬರು ಸದಸ್ಯರು ಸದನದಲ್ಲಿ ಇರಲಿಲ್ಲ, ಜವಾಹರಲಾಲ್ ನೆಹರೂ ಅವರಿಂದ ಹಿಡಿದು ಪ್ರಸ್ತುತ ನಾಯಕತ್ವದವರೆಗೂ ಕಾಂಗ್ರೆಸ್ ವಂದೇ ಮಾತರಂ ಅನ್ನು ವಿರೋಧಿಸುತ್ತಲೇ ಇದೆ ಎಂದು ಕಿಡಿಕಾರಿದರು.
ಮಾಜಿ ಪ್ರಧಾನಿ ಜವಾಹರಲಾಲ್ ನೆಹರು ಅವರು ವಂದೇ ಮಾತರಂ ಅನ್ನು ಅದರ ಸುವರ್ಣ ಮಹೋತ್ಸವದಂದು ಎರಡು ಚರಣಗಳಿಗೆ ಇಳಿಸಿದರು. ವಂದೇ ಮಾತರಂ ಬಗ್ಗೆ ಚರ್ಚಿಸುವ ಮೂಲಕ ಬಿಜೆಪಿ ನಿಜವಾದ ಸಮಸ್ಯೆಗಳಿಂದ ಬೇರೆಡೆಗೆ ತಿರುಗುತ್ತಿದೆ ಎಂಬ ವಿರೋಧ ಪಕ್ಷದ ಸಂಸದರ ಹೇಳಿಕೆಗೆ ಪ್ರತಿಕ್ರಿಯಿಸಿದ ಅಮಿತ್ ಶಾ, ಸರ್ಕಾರ ಯಾವುದೇ ವಿಷಯದ ಬಗ್ಗೆ ಚರ್ಚೆ ನಡೆಸಲು ಸಿದ್ಧವಾಗಿದೆ. ಆದರೆ ವಿರೋಧ ಪಕ್ಷಗಳು ಮೊದಲು ಚರ್ಚೆಗಳನ್ನು ಬಹಿಷ್ಕರಿಸುವುದನ್ನು ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದರು.
ಇದನ್ನೂ ಓದಿ : ನಾಳೆ ಬೆಂಗಳೂರಿನ ಈ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ



















