ಬೆಂಗಳೂರು : ಮಧ್ಯಪ್ರಾಚ್ಯ ದೇಶಗಳಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮ ಭಾರತದಲ್ಲಿಯೂ ಕಾಣಿಸಿಕೊಳ್ಳಲು ಆರಂಭವಾಗಿದ್ದು, ಆಮದು–ರಫ್ತು ವ್ಯವಹಾರದಲ್ಲಿ ವ್ಯತ್ಯಯ ಉಂಟಾಗಿ ಇಂಧನ ಹಾಗೂ ಅನಿಲ ಸರಬರಾಜಿನಲ್ಲಿ ಸಮಸ್ಯೆ ಎದುರಾಗುತ್ತಿದೆ. ಇದರ ಪರಿಣಾಮವಾಗಿ ವಾಣಿಜ್ಯ ಬಳಕೆಯ ಗ್ಯಾಸ್ ಸಿಲಿಂಡರ್ಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಹೊಟೇಲ್ ಉದ್ಯಮಕ್ಕೂ ಸಂಕಷ್ಟ ಎದುರಾಗುವ ಸ್ಥಿತಿ ನಿರ್ಮಾಣವಾಗಿರುವುದು ಈಗಾಗಲೇ ತಿಳಿದುಬಂದಿದೆ. ಇದೀಗ ಇಂದಿರಾ ಕ್ಯಾಂಟೀನ್ ಹಾಗೂ ಶಾಲಾ-ಕಾಲೇಜುಗಳಲ್ಲಿ ನೀಡುವ ಬಿಸಿಯೂಟದ ಮೇಲೂ ಪರಿಣಾಮ ಬೀರಿದೆ.
ನಗರದ ಹಲವು ಹೊಟೇಲ್ಗಳಿಗೆ ಕಳೆದ ಎರಡು–ಮೂರು ದಿನಗಳಿಂದ ವಾಣಿಜ್ಯ ಗ್ಯಾಸ್ ಸರಿಯಾದ ಪ್ರಮಾಣದಲ್ಲಿ ಪೂರೈಕೆಯಾಗುತ್ತಿಲ್ಲ ಎಂದು ತಿಳಿದುಬಂದಿದೆ. ಇದೇ ಪರಿಸ್ಥಿತಿ ಮುಂದುವರಿದರೆ ಹೊಟೇಲ್ಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡುವ ಪರಿಸ್ಥಿತಿ ಎದುರಾಗಬಹುದು ಎಂದು ಹೊಟೇಲ್ ಮಾಲೀಕರು ಆತಂಕ ವ್ಯಕ್ತಪಡಿಸಿದ್ದಾರೆ.
ಇತ್ತ ಗ್ಯಾಸ್ ಕೊರತೆಯ ಪರಿಣಾಮ ಇಂದಿರಾ ಕ್ಯಾಂಟೀನ್ಗಳಿಗೂ ತಟ್ಟಿದೆ. ಬೆಂಗಳೂರು ನಗರದಲ್ಲಿ ಸುಮಾರು 170ಕ್ಕೂ ಹೆಚ್ಚು ಇಂದಿರಾ ಕ್ಯಾಂಟೀನ್ಗಳು ಕಾರ್ಯನಿರ್ವಹಿಸುತ್ತಿದ್ದು, ಈ ಕ್ಯಾಂಟೀನ್ಗಳಿಗೆ ಆಹಾರ ಪೂರೈಕೆ ಮಾಡುವ ಕೇಂದ್ರ ಅಡುಗೆಮನೆಗಳಲ್ಲಿ ಸಿಲಿಂಡರ್ ಕೊರತೆ ಎದುರಾಗುತ್ತಿದೆ.
ಕೆಲವು ಇಂದಿರಾ ಕಿಚನ್ಗಳಲ್ಲಿ ಈಗಾಗಲೇ ಸಿಲಿಂಡರ್ಗಳು ಖಾಲಿಯಾಗಿದ್ದು, ಉಳಿದ ಕೆಲವು ಅಡುಗೆಮನೆಗಳಲ್ಲಿ ಮೂರು–ನಾಲ್ಕು ದಿನಗಳಿಗೆ ಸಾಕಾಗುವಷ್ಟು ಮಾತ್ರ ಗ್ಯಾಸ್ ಇರುವುದಾಗಿ ತಿಳಿದುಬಂದಿದೆ. ಯುದ್ಧ ಇದೇ ರೀತಿ ಮುಂದುವರಿದರೆ ಮುಂದಿನ ದಿನಗಳಲ್ಲಿ ವಾಣಿಜ್ಯ ಗ್ಯಾಸ್ ದೊರಕುವಲ್ಲಿ ಇನ್ನಷ್ಟು ಸಮಸ್ಯೆ ಉಂಟಾಗುವ ಸಾಧ್ಯತೆ ಇದೆ ಎಂದು ಕ್ಯಾಂಟೀನ್ಗಳಿಗೆ ಆಹಾರ ಪೂರೈಕೆ ಮಾಡುವ ಗುತ್ತಿಗೆದಾರರು ತಿಳಿಸಿದ್ದಾರೆ.
ಈ ಸಮಸ್ಯೆ ಶಾಲಾ–ಕಾಲೇಜುಗಳ ಮಧ್ಯಾಹ್ನದ ಊಟ ಯೋಜನೆಗೂ ಪರಿಣಾಮ ಬೀರುವ ಸಾಧ್ಯತೆ ಇದೆ. ಬೆಂಗಳೂರು ನಗರದಲ್ಲಿನ ಅನೇಕ ಸರ್ಕಾರಿ ಹಾಗೂ ಜಿಬಿಎ ವ್ಯಾಪ್ತಿಯ ಶಾಲಾ–ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿದೆ. ಆದರೆ ಊಟ ತಯಾರಿಸಲು ಅಗತ್ಯವಿರುವ ಗ್ಯಾಸ್ ಸಿಲಿಂಡರ್ ಕೊರತೆ ಎದುರಾಗುತ್ತಿರುವುದರಿಂದ ಮುಂದಿನ ದಿನಗಳಲ್ಲಿ ಮಕ್ಕಳಿಗೆ ಊಟ ಪೂರೈಕೆ ಮಾಡುವಲ್ಲಿ ತೊಂದರೆ ಉಂಟಾಗುವ ಆತಂಕ ವ್ಯಕ್ತವಾಗಿದೆ.
ಜಿಬಿಎ ವ್ಯಾಪ್ತಿಯ ಶಾಲಾ–ಕಾಲೇಜುಗಳಲ್ಲಿ ಸುಮಾರು 24 ಸಾವಿರಕ್ಕೂ ಹೆಚ್ಚು ವಿದ್ಯಾರ್ಥಿಗಳು ಇದ್ದು, ನಗರದಲ್ಲಿನ ಸರ್ಕಾರಿ ಶಾಲೆಗಳಲ್ಲಿ 30 ಸಾವಿರಕ್ಕೂ ಹೆಚ್ಚು ಮಕ್ಕಳು ವಿದ್ಯಾಭ್ಯಾಸ ಮಾಡುತ್ತಿದ್ದಾರೆ. ಇವರಿಗೆ ಸರ್ಕಾರದಿಂದ ಪ್ರತಿದಿನ ಉಚಿತ ಮಧ್ಯಾಹ್ನದ ಊಟ ವ್ಯವಸ್ಥೆ ಮಾಡಲಾಗಿದೆ.
ಆದರೆ ಗ್ಯಾಸ್ ಕೊರತೆ ಮುಂದುವರಿದರೆ ಮಕ್ಕಳ ಊಟದ ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಊಟ ಸರಬರಾಜು ಮಾಡುವ ಗುತ್ತಿಗೆದಾರರು ತಿಳಿಸಿದ್ದಾರೆ. ಸದ್ಯ ಇರುವ ಸಿಲಿಂಡರ್ಗಳನ್ನು ಬಳಸಿ ಇನ್ನೂ ಒಂದು ವಾರದವರೆಗೆ ವ್ಯವಸ್ಥೆ ಮಾಡಬಹುದು. ಆದರೆ ಬಳಿಕ ಪರಿಸ್ಥಿತಿ ಹೇಗಿರುತ್ತದೆ ಎಂಬ ಆತಂಕ ಕ್ಯಾಂಟೀನ್ ಗುತ್ತಿಗೆದಾರರಲ್ಲಿ ಹೆಚ್ಚಾಗಿದೆ.
ಇದನ್ನೂ ಓದಿ : ಯುದ್ಧದ ಬಿಸಿ.. ಬೆಂಗಳೂರಲ್ಲಿ LPG ಗ್ಯಾಸ್, ಬಂಕ್ಗಳು ಬಂದ್ | ದೇವಸ್ಥಾನದ ಪ್ರಸಾದಕ್ಕೂ ಎಫೆಕ್ಟ್



















