ಸಿಎಂ ಸಿದ್ದರಾಮಯ್ಯ( CM Siddaramaiah) ಅವರ ಕನಸಿನ ಯೋಜನೆಗೆ ಸ್ವತಃ ಸಿಎಂ ಎಳನೀರು ಬಿಡಲು ಮುಂದಾಗಿದ್ದಾರಾ ಎಂಬ ಪ್ರಶ್ನೆಯೊಂದು ಈಗ ಕಾಡುತ್ತಿದೆ.
ಬಡವರ ಪಾಲಿನ “ಅನ್ನ”ರಾಮಯ್ಯ ಜಾರಿಗೆ ತಂದ ಇಂದಿರಾ ಕ್ಯಾಂಟೀನ್ ಈಗ ಖಾಸಗಿ ಸಂಸ್ಥೆಗಳ ಪಾಲಾಗುತ್ತಿದೆ.
ಹೌದು!! ಬಡವರ ಪಾಲಿನ ಅನ್ನಪೂರ್ಣೇಶ್ವರಿ ಅಂತ ಕರೆಸಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕೂಸು ಅಂತ ಹೆಸರು ಪಡೆದಿದ್ದ ಇಂದಿರಾ ಕ್ಯಾಂಟೀನ್( Indira Canteen) ನಿರ್ವಹಣೆ ಜವಾಬ್ದಾರಿಯನ್ನು ಖಾಸಗಿ ಮಹಿಳಾ ಸಂಸ್ಥೆಗೆ ವಹಿಸಲು ಸಿಎಂ ತೀರ್ಮಾನ ಮಾಡಿದ್ದಾರೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ನಿನ್ನೆ ನಡೆದ ಇಲಾಖೆವಾರು ಸಭೆಯಲ್ಲಿ ಖುದ್ದು ಸಿಎಂ ಈ ಹೇಳಿಕೆ ನೀಡಿ ಅಚ್ಚರಿ ಮೂಡಿಸಿದ್ದಾರೆ. ಬಡವರ ಪಾಲಿಗೆ ಕಡಿಮೆ ಬೆಲೆಯಲ್ಲಿ ಊಟ, ತಿಂಡಿ ಸಿಗಬೇಕು ಅಂತ ಕಳೆದ ಬಾರಿ ಸಿಎಂ ಅಗಿದ್ದ ವೇಳೆ ಇಂದಿರಾ ಕ್ಯಾಂಟೀನ್ ತೆರೆದು, ಒಪನ್ ಮಾಡಿ ಬಡವರ ಪಾಲಿನ ಸಂಜೀವಿನಿ ಅಗಿದ್ದರು. ನಗರದಲ್ಲಿ 175 ಇಂದಿರಾ ಕ್ಯಾಂಟೀನ್ ಗಳು ಇದ್ದು, ಉಳಿದ 52 ವಾರ್ಡ್ ಗಳು ಹೊಸದಾಗಿ ಇಂದಿರಾ ಕ್ಯಾಂಟೀನ್ ನಿರ್ಮಾಣಕ್ಕೆ ಮುಂದಾಗಿದ್ದರು. ಆದರೆ, ಈಗ ಏಕಾಏಕಿ ಖಾಸಗಿಯತ್ತ ಮುಖ ಮಾಡಿರುವುದು ದೊಡ್ಡ ಆತಂಕಕ್ಕೆ ಕಾರಣವಾಗುತ್ತಿದೆ.
ಕಳೆದ 10 ವರ್ಷಗಳಿಂದ ಕ್ಯಾಂಟೀನ್ ಗಳನ್ನು ಟೆಂಡರ್( Tender) ಮೂಲಕ ನಿರ್ವಹಣೆ ಮಾಡಲಾಗುತ್ತಿತ್ತು. ಈಗ ಹೊಸದಾಗಿ ನಿರ್ಮಾಣ ಮಾಡುತ್ತಿರುವ 52 ಇಂದಿರಾ ಕ್ಯಾಂಟೀನ್ ಗಳನ್ನು ಪ್ರಾಯೋಗಿಕವಾಗಿ ಮಹಿಳಾ ಸಬಲೀಕರಣದ ಹೆಸರಿನಲ್ಲಿ ಮಹಿಳಾ ಸ್ವಸಹಾಯ ಸಂಸ್ಥೆಗಳಿಗೆ ನಿರ್ವಹಣೆಗೆ ನೀಡಲು ಮುಂದಾಗಿದೆ. ಉಳಿದಂತೆ ನಾಲ್ಕು ವಲಯಗಳಲ್ಲಿ ಕ್ಯಾಂಟೀನ್ ಗಳ ನಿರ್ವಹಣೆಯನ್ನು ಟೆಂಡರ್ ಕರೆಯಲಾಗಿದೆ. ಸದ್ಯ ಸರ್ಕಾರದ ಅದೇಶದಂತೆ ಹೊಸ ಕ್ಯಾಂಟೀನ್ ಗಳನ್ನು ಮಾತ್ರ ಮಹಿಳಾ ಸ್ವಸಹಾಯ ಸಂಸ್ಥೆಗಳಿಗೆ ನೀಡುತ್ತೇವೆ ಎಂದು ಪಾಲಿಕೆ ಆಯುಕ್ತರು ಹೇಳಿದ್ದಾರೆ.
ಸಿಎಂ ಸಿದ್ದರಾಮಯ್ಯ ಅವರ ಕನಸಿನ ಕ್ಯಾಂಟೀನ್ ನಿರ್ವಹಣೆಗೆ ಅಧಿಕಾರಿಗಳು ಸರಿಯಾಗಿ ಸ್ವಂದನೆ ಮಾಡದಿರುವುದರಿಂದಾಗಿ ಕ್ಯಾಂಟೀನ್ ಗಳನ್ನು ಮಹಿಳಾ ಸಂಸ್ಥೆಗಳಿಗೆ ನೀಡಲು ಸರ್ಕಾರ ಚಿಂತಿಸಿದೆ ಎನ್ನಲಾಗಿದೆ.


















