ದೇಶದ ಮೊದಲ ಅಕ್ಕಿ ಎಟಿಎಂಗೆ ಚಾಲನೆ ನೀಡಲಾಗಿದೆ. ಈ ಮೂಲಕ ಪಡಿತರ ಚೀಟಿದಾರರು ಕೂಡ ಹೈಟೆಕ್ ಟಚ್ ಗೆ ಬಂದಿದ್ದಾರೆ.
ಒಡಿಶಾ ಆಹಾರ ಸರಬರಾಜು ಮತ್ತು ಗ್ರಾಹಕರ ಕಲ್ಯಾಣ ಸಚಿವ ಕೃಷ್ಣ ಚಂದ್ರ ಪಾತ್ರ ಅವರು ಭುವನೇಶ್ವರದಲ್ಲಿ ದೇಶದ ಮೊದಲ ಅಕ್ಕಿ ಎಟಿಎಂಗೆ ಚಾಲನೆ ನೀಡಿದ್ದಾರೆ. ಮಂಚೇಶ್ವರದಲ್ಲಿನ ಗೋದಾಮಿನಲ್ಲಿ ಅಳವಡಿಸಲಾಗಿರುವ ಈ ಯಂತ್ರವನ್ನು ಸಾರ್ವಜನಿಕರಿಗೆ ವಿತರಿಸಲಾಗುವ ಪಡಿತರ ವ್ಯವಸ್ಥೆಗಾಗಿ ವಿನ್ಯಾಸಗೊಳಿಸಲಾಗಿದೆ.
ಅಕ್ಕಿ ಎಟಿಎಂ ಪಡಿತರ ಚೀಟಿದಾರರು ತಮ್ಮ ಪಡಿತರ ಚೀಟಿ ಸಂಖ್ಯೆಯನ್ನು ಟಚ್ ಸ್ಕ್ರೀನ್ ನಲ್ಲಿ ನಮೂದಿಸಿದಾಗ 25 ಕೆಜಿ ವರೆಗೆ ಅಕ್ಕಿಯನ್ನು ವಿತರಿಸಲು ಅನುಮತಿ ಸಿಗಲಿದೆ. ಆನಂತರ ಬಯೋಮೆಟ್ರಿಕ್ ದೃಢೀಕರಣ ಮಾಡಬೇಕು. ಅಕ್ಕಿ ವಿತರಣೆಯ ಈ ಹೊಸ ವ್ಯವಸ್ಥೆಯಿಂದಾಗಿ ಸಾರ್ವಜನಿಕರು ಸರತಿಯಲ್ಲಿ ನಿಲ್ಲುವ ಕಷ್ಟ ತಪ್ಪಿದಂತಾಗಿದೆ.
ಈ ಎಟಿಎಂನಿಂದ ಸಬ್ಸಿಡಿ ಅಕ್ಕಿಯ ಕಳ್ಳತನ ಹಾಗೂ ಬ್ಲ್ಯಾಕ್ ಮಾರ್ಕೆಟ್ ಗೆ ಸಂಬಂಧಿಸಿದ ಸಮಸ್ಯೆಗಳನ್ನು ಗಣನೀಯವಾಗಿ ಕಡಿಮೆ ಮಾಡುವ ನಿರೀಕ್ಷೆ ಇದೆ. ದೇಶದಲ್ಲಿಯೇ ಪ್ರಾಯೋಗಿಕವಾಗಿ ಮೊದಲ ಎಟಿಎಂನ್ನು ಈಗ ಲೋಕಾರ್ಪಣೆ ಮಾಡಲಾಗಿದ್ದು, ಇದರ ಪ್ರಯೋಗದ ಯಸಸ್ಸಿನ ನಂತರ ದೇಶದಲ್ಲಿ ಅಕ್ಕಿ ಎಟಿಎಂಗಳು ತಲೆ ಎತ್ತಲಿವೆ.
ಇದರ ಯಶಸ್ಸಿನ ನಂತರ ಒಡಿಶಾದ ಎಲ್ಲಾ 30 ಜಿಲ್ಲೆಗಳಿಗೆ ವಿಸ್ತರಿಸಲಾಗುವುದು. ಈ ಮಾದರಿಯನ್ನು ಒನ್ ನೇಷನ್ ಒನ್ ರೇಷನ್ ಕಾರ್ಡ್ ಯೋಜನೆಯಡಿ ಇತರ ರಾಜ್ಯಗಳಿಗೆ ವಿಸ್ತರಿಸಬಹುದು.