ಬಾರ್ಡರ್ ಗವಾಸ್ಕರ್ ಟ್ರೋಫಿ ಕ್ರಿಕೆಟ್ನಲ್ಲಿ ಶತಕ ಬಾರಿಸಿದ್ದ ಆಲ್ರೌಂಡರ್ ನಿತೀಶ್ ರೆಡ್ಡಿ ((Nitish Kumar Reddy ) ) ಕ್ರಿಕೆಟ್ ಪ್ರೇಮಿಗಳ ಗಮನ ಸೆಳೆದಿದ್ದಾರೆ. ಅವರು ಭವಿಷ್ಯದ ಕ್ರಿಕೆಟ್ ತಾರೆ ಎಂಬೆಲ್ಲ ಮಾತುಗಳು ಕೇಳಿಬರುತ್ತಿವೆ. ಅವರು ಶತಕ ಬಾರಿಸಿದಾಗ ಅವರ ತಂದೆ ಆನಂದ ಭಾಷ್ಪ ಸುರಿಸಿದ ವಿಡಿಯೊಗಳು ಕೂಡ ವೈರಲ್ ಆಗಿದ್ದರು. ಇದೀಗ ಅವರ ಮತ್ತೊಂದು ವಿಡಿಯೊ ವೈರಲ್ ಆಗಿದೆ. ಅದು ಅವರ ಭಕ್ತಿ ಪ್ರಧಾನ ವಿಡಿಯೊ.]
ನಿತೀಶ್ ಕುಮಾರ್ ರೆಡ್ಡಿ (Nitish Kumar Reddy ) ಆಸ್ಟ್ರೇಲಿಯಾದಿಂದ ವಾಪಸ್ ಬಂದ ಬಳಿಕ ತಿರುಮಲಕ್ಕೆ ಭೇಟಿ ನೀಡಿ ತಿಮ್ಮಪ್ಪನ ದರ್ಶನ ಪಡೆದಿದ್ದಾರೆ. ವಿಶೇಷ ಏನೆಂದರೆ, ನಿತೀಶ್ ಕುಮಾರ್ ಅವರು ಕಾಲ್ನಡಿಗೆಯಲ್ಲಿ ಬೆಟ್ಟಕ್ಕೆ ಹೋಗಿ ಮೊಣಕಾಲುಗಳಲ್ಲೇ ಮೆಟ್ಟಿಲುಗಳನ್ನು ಹತ್ತಿದ್ದಾರೆ. ಅದರ ವಿಡಿಯೋವನ್ನು ತಮ್ಮ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಇದಕ್ಕೆ ಲೈಕ್ಗಳ ಮಹಾಪೂರವೇ ಹರಿದು ಬಂದಿದೆ.
ಪ್ರತಿಷ್ಠಿತ ಬಾರ್ಡರ್ ಗವಾಸ್ಕರ್ ಟ್ರೋಫಿಯ ಅಂಗವಾಗಿ ಆಸ್ಟ್ರೇಲಿಯಾ ಪ್ರವಾಸದ ಸಮಯದಲ್ಲಿ ಆಂಧ್ರ ಮೂಲದ ಆಟಗಾರ ನಿತೀಶ್ ಕುಮಾರ್ ರೆಡ್ಡಿ ಅವರು ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ್ದರು. ಆಲ್ರೌಂಡರ್ ವಿಭಾಗದಲ್ಲಿ ಟೀಮ್ ಇಂಡಿಯಾ ಸೇರಿಕೊಂಡಿದ್ದ ನಿತೀಶ್ , ಮೆಲ್ಬೋರ್ನ್ನಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ 171 ಎಸೆತಗಳಲ್ಲಿ 114 ರನ್ ಗಳಿಸುವ ಮೂಲಕ ಚೊಚ್ಚಲ ಶತಕವನ್ನು ಗಳಿಸಿದರು.
ಇದನ್ನೂ ಓದಿ: ರೋಹಿತ್, ಸೂರ್ಯ ಮುಂಬಯಿ ತಂಡ ತೊರೆಯುವರೇ?
ಈ ಪಂದ್ಯದಲ್ಲಿ ಎಂಟನೇ ಸ್ಥಾನದಲ್ಲಿ ಬ್ಯಾಟಿಂಗ್ ಮಾಡಿದ ನಿತೀಶ್, ಮೊದಲ ಎಸೆತದಿಂದಲೇ ಸ್ಥಿರ ಪ್ರದರ್ಶನ ನೀಡಿದರು. 8ನೇ ಸ್ಥಾನದಲ್ಲಿ ಬಂದು ಶತಕ ಗಳಿಸುವ ಮೂಲಕ ಆಸ್ಟ್ರೇಲಿಯಾ ನೆಲದಲ್ಲಿ 8ನೇ ಕ್ರಮಾಂಕದಲ್ಲಿ ಅತಿ ಹೆಚ್ಚು ರನ್ ಗಳಿಸಿದ ಭಾರತೀಯ ಬ್ಯಾಟ್ಸ್ಮನ್ ಎನಿಸಿಕೊಂಡರು. ಇದಕ್ಕೂ ಮೊದಲು ಈ ದಾಖಲೆ ಸ್ಪಿನ್ ದಂತಕಥೆ ಅನಿಲ್ ಕುಂಬ್ಳೆ (87) ಅವರ ಹೆಸರಿನಲ್ಲಿತ್ತು. ಆ ದಾಖಲೆಯನ್ನು ನಿತೀಶ್ ಮುರಿದಿದ್ದಾರೆ. ಬಾರ್ಡರ್ ಗವಾಸ್ಕರ್ ಟ್ರೋಫಿಯ ಐದು ಟೆಸ್ಟ್ ಪಂದ್ಯದಲ್ಲಿ ನಿತೀಶ್ ಅವರು 37.25 ಸರಾಸರಿಯಲ್ಲಿ 298 ರನ್ ಗಳಿಸಿದರು. ಬೌಲಿಂಗ್ನಲ್ಲಿಯೂ 5 ವಿಕೆಟ್ಗಳೊಂದಿಗೆ ಮಿಂಚಿದರು.
ನಿತೀಶ್ ಕುಮಾರ್ ರೆಡ್ಡಿ ಅವರು ಆಸ್ಟ್ರೇಲಿಯಾ ಪ್ರವಾಸವನ್ನು ಮುಗಿಸಿ ತಮ್ಮ ತವರು ವಿಶಾಖಪಟ್ಟಣಂ ತಲುಪಿದಾಗ, ಅವರಿಗೆ ವಿಮಾನ ನಿಲ್ದಾಣದಲ್ಲಿ ಭವ್ಯ ಸ್ವಾಗತ ದೊರೆಯಿತು. ಕುಟುಂಬ ಸದಸ್ಯರು ಮತ್ತು ಅಭಿಮಾನಿಗಳು ನಿತೀಶ್ಗೆ ಹೂಮಾಲೆ ಮತ್ತು ಹೂಗುಚ್ಛಗಳನ್ನು ಅರ್ಪಿಸಿ ಬರಮಾಡಿಕೊಂಡರು. ಅನೇಕ ಅಭಿಮಾನಿಗಳು ಆಟೋಗ್ರಾಫ್ ಮತ್ತು ಫೋಟೋಗಳನ್ನು ತೆಗೆದುಕೊಂಡರು.