ನವದೆಹಲಿ : ಕಾಂಬೋಡಿಯಾ-ಥಾಯ್ಲೆಂಡ್ ಸಂಘರ್ಷ ತೀವ್ರ ಸ್ವರೂಪಕ್ಕೆ ತಿರುಗಿದ್ದು, ಇತ್ತೀಚೆಗೆ ಕಾಂಬೋಡಿಯಾದಲ್ಲಿನ ವಿಷ್ಣುವಿನ ಪ್ರತಿಮೆಯನ್ನು ಥಾಯ್ಲೆಂಡ್ ಸೇನೆ ಧ್ವಂಸಗೊಳಿಸಿದೆ ಎಂಬ ಆರೋಪದ ಬಗ್ಗೆ ಭಾರತ ಸರ್ಕಾರ ತೀವ್ರ ಆಕ್ರೋಶ ವ್ಯಕ್ತಪಡಿಸಿದೆ. ಈ ಕೃತ್ಯವು ಜಗತ್ತಿನಾದ್ಯಂತ ಇರುವ ಭಕ್ತರ ಧಾರ್ಮಿಕ ಭಾವನೆಗಳಿಗೆ ಧಕ್ಕೆ ತಂದಿದೆ ಎಂದು ವಿದೇಶಾಂಗ ಸಚಿವಾಲಯ ಕಟುವಾಗಿ ಪ್ರತಿಕ್ರಿಯಿಸಿದೆ.
ಕಾಂಬೋಡಿಯಾ ಮತ್ತು ಥಾಯ್ಲೆಂಡ್ ನಡುವಿನ ಗಡಿ ಸಂಘರ್ಷವಿರುವ ಪ್ರದೇಶದಲ್ಲೇ ಈ ಘಟನೆ ನಡೆದಿದೆ. 2014ರಲ್ಲಿ ಕಾಂಬೋಡಿಯಾ ಭೂಪ್ರದೇಶದ ಆನ್ ಸೆಸ್ ಪ್ರದೇಶದಲ್ಲಿ ನಿರ್ಮಿಸಲಾಗಿದ್ದ ವಿಷ್ಣು ದೇವರ ಪ್ರತಿಮೆಯನ್ನು ಜೆಸಿಬಿ ಬಳಸಿ ಕೆಡವಿ ಹಾಕುವ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಭಾರತದ ಖಡಕ್ ಪ್ರತಿಕ್ರಿಯೆ
ಈ ಘಟನೆ ಬಗ್ಗೆ ಪ್ರತಿಕ್ರಿಯೆ ನೀಡಿರುವ ವಿದೇಶಾಂಗ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, “ಗಡಿ ವಿವಾದದ ನೆಪದಲ್ಲಿ ಧಾರ್ಮಿಕ ನಂಬಿಕೆಯ ಪ್ರತೀಕವಾದ ದೇವರ ಪ್ರತಿಮೆಯನ್ನು ಧ್ವಂಸಗೊಳಿಸಿರುವುದು ಖಂಡನೀಯ. ಹಿಂದೂ ಮತ್ತು ಬೌದ್ಧ ದೇವತೆಗಳು ಈ ಪ್ರಾಂತ್ಯದ ಜನರ ಆರಾಧ್ಯ ದೈವಗಳಾಗಿವೆ ಹಾಗೂ ಇದು ನಮ್ಮ ಹಂಚಿಕೆಯ ನಾಗರಿಕ ಪರಂಪರೆಯ ಭಾಗವಾಗಿದೆ,” ಎಂದು ಹೇಳಿದ್ದಾರೆ. ಇಂತಹ ಅಗೌರವದ ಕೃತ್ಯಗಳು ನಡೆಯಬಾರದು ಎಂದು ಭಾರತ ಎಚ್ಚರಿಸಿದೆ.
ಏನಿದು ಸಂಘರ್ಷ?
ಥಾಯ್ಲೆಂಡ್ ಮತ್ತು ಕಾಂಬೋಡಿಯಾ ನಡುವೆ ಕಳೆದ ಜುಲೈನಿಂದ ಗಡಿ ವಿವಾದಕ್ಕೆ ಸಂಬಂಧಿಸಿದಂತೆ ಸಂಘರ್ಷ ನಡೆಯುತ್ತಿದೆ. ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯಲ್ಲಿ ಕದನ ವಿರಾಮ ಏರ್ಪಟ್ಟಿದ್ದರೂ, ಈ ತಿಂಗಳು ಮತ್ತೆ ಸಂಘರ್ಷ ಭುಗಿಲೆದ್ದಿದೆ.
ಪ್ರತಿಮೆ ಧ್ವಂಸದ ಬಗ್ಗೆ ಪ್ರತಿಕ್ರಿಯಿಸಿರುವ ಪ್ರೀ ವಿಹಿಯರ್ (Preah Vihear) ವಕ್ತಾರ ಲಿಮ್ ಚಾನ್ಪನ್ಹಾ, “ಥಾಯ್ಲೆಂಡ್ ಗಡಿಯಿಂದ ಕೇವಲ 100 ಮೀಟರ್ ದೂರದಲ್ಲಿ, ಕಾಂಬೋಡಿಯಾ ಭೂಪ್ರದೇಶದಲ್ಲಿದ್ದ ಪ್ರತಿಮೆಯನ್ನು ಸೋಮವಾರ ಧ್ವಂಸಗೊಳಿಸಲಾಗಿದೆ. ಹಿಂದೂ ಮತ್ತು ಬೌದ್ಧ ಅನುಯಾಯಿಗಳು ಪೂಜಿಸುವ ಪುರಾತನ ದೇವಾಲಯಗಳು ಹಾಗೂ ಪ್ರತಿಮೆಗಳನ್ನು ನಾಶಮಾಡುವುದನ್ನು ನಾವು ಖಂಡಿಸುತ್ತೇವೆ,” ಎಂದು ತಿಳಿಸಿದ್ದಾರೆ.
ಶಾಂತಿ ಕಾಪಾಡಲು ಮತ್ತು ಪ್ರಾಣಹಾನಿ ತಪ್ಪಿಸಲು ಎರಡೂ ರಾಷ್ಟ್ರಗಳು ಮಾತುಕತೆ ಮತ್ತು ರಾಜತಾಂತ್ರಿಕ ಮಾರ್ಗವನ್ನು ಬಳಸುವಂತೆ ಭಾರತ ಸಲಹೆ ನೀಡಿದೆ.
ಇದನ್ನೂ ಓದಿ : ‘ಲಯನ್ ಕಿಂಗ್’ ಖ್ಯಾತಿಯ ನಟಿ ಇಮಾನಿ ಸ್ಮಿತ್ ಬರ್ಬರ ಹತ್ಯೆ | ಪ್ರಿಯಕರನ ಬಂಧನ



















