ಕೊಲಂಬೊ: ಭಾರತ ಮತ್ತು ಪಾಕಿಸ್ತಾನ ನಡುವಿನ ಪಂದ್ಯವೆಂದರೆ ಅಲ್ಲಿ ಕೇವಲ ಬ್ಯಾಟ್ ಮತ್ತು ಚೆಂಡಿನ ನಡುವಿನ ಹೋರಾಟ ಮಾತ್ರ ಇರುವುದಿಲ್ಲ, ಬದಲಿಗೆ ಆಟಗಾರರ ಭಾವನೆಗಳು ಮತ್ತು ತೀವ್ರವಾದ ಪೈಪೋಟಿಯೂ ಮನೆಮಾಡಿರುತ್ತದೆ. ಭಾನುವಾರ ಕೊಲಂಬೊದ ಆರ್. ಪ್ರೇಮದಾಸ ಕ್ರೀಡಾಂಗಣದಲ್ಲಿ ನಡೆದ ಟಿ20 ವಿಶ್ವಕಪ್ ಪಂದ್ಯದಲ್ಲಿ ಇಂತಹದ್ದೇ ಒಂದು ಘಟನೆ ಜರುಗಿದೆ. ಟೀಮ್ ಇಂಡಿಯಾ ನಾಯಕ ಸೂರ್ಯಕುಮಾರ್ ಯಾದವ್ ಅವರ ವಿಕೆಟ್ ಪಡೆದ ಪಾಕಿಸ್ತಾನದ ಸ್ಪಿನ್ನರ್ ಉಸ್ಮಾನ್ ತಾರಿಕ್, ವಿನೂತನ ಶೈಲಿಯಲ್ಲಿ ಸಂಭ್ರಮಿಸುವ ಮೂಲಕ ನಾಯಕನಿಗೆ ಬೀಳ್ಕೊಡುಗೆ ನೀಡಿದ್ದು ಈಗ ಭಾರಿ ಚರ್ಚೆಗೆ ಕಾರಣವಾಗಿದೆ.

ಇಡೀ ಇನ್ನಿಂಗ್ಸ್ನಲ್ಲಿ ಅತ್ಯಂತ ಮಿತವ್ಯಯಕಾರಿ ಬೌಲಿಂಗ್ ಪ್ರದರ್ಶಿಸಿದ ಉಸ್ಮಾನ್ ತಾರಿಕ್, ತಮ್ಮ ಸ್ಪೆಲ್ನ ಕೊನೆಯ ಹಂತದಲ್ಲಿ ಭಾರತದ ಬ್ಯಾಟಿಂಗ್ ಬೆನ್ನೆಲುಬು ಸೂರ್ಯಕುಮಾರ್ ಯಾದವ್ ಅವರನ್ನು ಔಟ್ ಮಾಡುವಲ್ಲಿ ಯಶಸ್ವಿಯಾದರು. ಸ್ಮಾರ್ಟ್ ಬೌಲಿಂಗ್ ಮಾಡಿದ ತಾರಿಕ್, ಎಸೆತದ ವೇಗವನ್ನು ತಗ್ಗಿಸಿ ಸೂರ್ಯ ಅವರನ್ನು ಗೊಂದಲಕ್ಕೀಡು ಮಾಡಿದರು. ಸೂರ್ಯಕುಮಾರ್ ದೊಡ್ಡ ಹೊಡೆತಕ್ಕೆ ಕೈಹಾಕಿ ಬೌಂಡರಿ ಗೆರೆಯಲ್ಲಿ ಸೈಮ್ ಅಯೂಬ್ಗೆ ಕ್ಯಾಚ್ ನೀಡಿದರು. 32 ರನ್ ಗಳಿಸಿದ್ದ ಸೂರ್ಯ ಔಟಾಗುತ್ತಿದ್ದಂತೆ ತಾರಿಕ್ ಮೈದಾನದಲ್ಲಿ ವಿಶಿಷ್ಟವಾಗಿ ಸಂಭ್ರಮಿಸಿದರು.
ಉಸ್ಮಾನ್ ತಾರಿಕ್ ಅವರು ಸೂರ್ಯಕುಮಾರ್ ಯಾದವ್ ಕಡೆಗೆ ತಿರುಗಿ, ತಲೆಬಾಗಿ ನಮಸ್ಕರಿಸುವ ಮೂಲಕ ಗಮನ ಸೆಳೆದರು. ಈ ಸಂಭ್ರಮವು 2007ರ ಚೊಚ್ಚಲ ಟಿ20 ವಿಶ್ವಕಪ್ನಲ್ಲಿ ಪಾಕಿಸ್ತಾನದ ವಿರುದ್ಧದ ಬೌಲ್-ಔಟ್ ಗೆಲುವಿನ ನಂತರ ರಾಬಿನ್ ಉತ್ತಪ್ಪ ಮಾಡಿದ್ದ ಐಕಾನಿಕ್ ಸೆಲೆಬ್ರೇಶನ್ ಅನ್ನು ನೆನಪಿಸುವಂತಿತ್ತು. ಅಷ್ಟೇ ಅಲ್ಲದೆ, ನಿರ್ಗಮಿಸುತ್ತಿದ್ದ ಭಾರತೀಯ ನಾಯಕನ ಕಡೆಗೆ ಫ್ಲೈಯಿಂಗ್ ಕಿಸ್ ಕೊಟ್ಟು ತಾರಿಕ್ ಪಂದ್ಯದ ಕಾವು ಏರಿಸಿದರು.
ಪಾಕಿಸ್ತಾನ ತಂಡವು ಈ ಪಂದ್ಯದಲ್ಲಿ ಸ್ಪಿನ್ನರ್ಗಳ ಮೇಲೆ ಅತಿಯಾದ ನಂಬಿಕೆ ಇಟ್ಟಿದ್ದು ಫಲ ನೀಡಿತ್ತು. ನಾಯಕ ಸಲ್ಮಾನ್ ಅಲಿ ಅಘಾ ಇಡೀ ಇನ್ನಿಂಗ್ಸ್ನಲ್ಲಿ ಕೇವಲ ಎರಡು ಓವರ್ಗಳನ್ನು ಮಾತ್ರ ವೇಗಿಗಳಿಗೆ ನೀಡಿ, ಉಳಿದ 18 ಓವರ್ಗಳನ್ನು ಸ್ಪಿನ್ನರ್ಗಳಿಂದಲೇ ಮಾಡಿಸಿದರು. ಈ ತಂತ್ರದಿಂದ ಭಾರತದ ರನ್ ವೇಗಕ್ಕೆ ಬ್ರೇಕ್ ಹಾಕಲು ಸಾಧ್ಯವಾಯಿತು. ಸೈಮ್ ಅಯೂಬ್ 25 ರನ್ ನೀಡಿ 3 ವಿಕೆಟ್ ಪಡೆದು ಯಶಸ್ವಿ ಬೌಲರ್ ಎನಿಸಿಕೊಂಡರೆ, ಉಸ್ಮಾನ್ ತಾರಿಕ್ ಅವರ ಶಿಸ್ತಿನ ಬೌಲಿಂಗ್ ಸೂರ್ಯಕುಮಾರ್ ಅಂತಹ ಅಪಾಯಕಾರಿ ಬ್ಯಾಟರ್ ಅನ್ನು ಕಟ್ಟಿಹಾಕುವಲ್ಲಿ ಪ್ರಮುಖ ಪಾತ್ರ ವಹಿಸಿತು.
ಇದನ್ನೂ ಓದಿ : ಟಿ20 ವಿಶ್ವಕಪ್ 2026 : ಪಾಕಿಸ್ತಾನಕ್ಕೆ ಹೊರಬೀಳುವ ಭೀತಿ ; ಅಮೆರಿಕಾ ಹಾದಿ ಸುಗಮ?



















