ಬೆಂಗಳೂರು | ಅತಿಯಾದ ವೇಗವೋ? ಕ್ರೇಜೋ? ಫ್ಯಾಷನ್ನೋ? ಇತ್ತೀಚೆಗೆ ಜನರಿಗೆ ಭಯವೇ ಇಲ್ಲದಂತಾಗಿದೆ. ಮೀಸೆಯೂ ಚಿಗುರದ ಮಗ, ಮಗಳು ಕೇಳಿದ್ರೆ ಸಾಕು ತಂದೆ-ತಾಯಿಗಳು ಕೀ ಕೊಟ್ಟು ಮನೆಯಲ್ಲಿ ಕೂತು ಬಿಡ್ತಿದ್ದಾರೆ. ಅವರಿಗೆಲ್ಲ ಅದ್ಯಾವ ಮಟ್ಟದ ಧೈರ್ಯವೋ? ತಿಳುವಳಿಕೆಯೋ ಗೊತ್ತಿಲ್ಲ.. ರಸ್ತೆಗಳೆಲ್ಲ ರಕ್ತಸಿಕ್ತವಾಗುತ್ತಿವೆ.. ದೊಡ್ಡವರಂತೆ ಮಕ್ಕಳೂ ಅಪಘಾತಕ್ಕೆ ಬಲಿಯಾಗುತ್ತಿದ್ದಾರೆ.
ಕಾನೂನು ಕಠಿಣವಾಗಿದ್ದರೂ ಸಾವು ಹೆಚ್ಚಳವಾಗುತ್ತಿರುವುದು ನೋವಿನ ಸಂಗತಿಯಾಗುತ್ತಿದೆ. ಭೀಕರ ಅಪಘಾತಗಳು ನೂರಾರು ಕುಟುಂಬಗಳ ಭವಿಷ್ಯದ ಆಧಾರಸ್ತಂಭಗಳನ್ನೇ ಉರುಳಿಸುತ್ತಿವೆ. ರಸ್ತೆಗಳಲ್ಲಿ ಹರಿಯುತ್ತಿರುವ ರಕ್ತದ ಕಲೆಗಳು ಆಡಳಿತ ವ್ಯವಸ್ಥೆಯ ವೈಫಲ್ಯಕ್ಕೆ-ಪೋಷಕರ ನಿರ್ಲಕ್ಷ್ಯಕ್ಕೆ ಕೈನ್ನಡಿಯಾಗುತ್ತಿವೆ.
ಹೌದು.. ರಾಜ್ಯದಲ್ಲಿ ಅಪಘಾತಕ್ಕೆ ಅಪ್ರಾಪ್ತರು ಬಲಿಯಾಗಿರುವ ಅಂಕಿ-ಸಂಖ್ಯೆಗಳನ್ನು ಗಮನಿಸಿದರೆ ಇಂತಹ ನೋವುಗಳು ಕಾಡುತ್ತಿವೆ. ಕಳೆದ ವರ್ಷವೊಂದರಲ್ಲೇ ಬರೋಬ್ಬರಿ 414 ಪ್ರಕರಣಗಳನ್ನು ಬೆಂಗಳೂರು ಸಂಚಾರ ಪೊಲೀಸರು ದಾಖಲಿಸಿಕೊಂಡಿದ್ದಾರೆ. ವರ್ಷದಿಂದ ವರ್ಷಕ್ಕೆ ಈ ಪ್ರಕರಣಗಳು ಏರಿಕೆಯಾಗುತ್ತಿರುವುದು ಕೂಡ ಆತಂಕಕ್ಕೆ ಕಾರಣವಾಗುತ್ತಿದೆ.
ಅಪ್ರಾಪ್ತರಿಂದ ವಾಹನ ಚಾಲನೆ ಪ್ರಕರಣಗಳು :
ವರ್ಷ ಪ್ರಕರಣಗಳು
2023- 95
2024- 197
2025- 414
ಅಷ್ಟೇ ಅಲ್ಲ, ಅಪ್ರಾಪ್ತರು ವ್ಹೀಲಿಂಗ್ ಪುಂಡರಾಗುತ್ತಿರುವುದು ಕೂಡ ದೊಡ್ಡ ಆತಂಕವಾಗುತ್ತಿದೆ. ಕಳೆದ ವರ್ಷ 646 ವ್ಹೀಲಿಂಗ್ ಪ್ರಕರಣಗಳು ದಾಖಲಾಗಿವೆ. ಆ ಪೈಕಿ 159 ಜನ ಪೋಷಕರ ವಿರುದ್ಧ ಕ್ರಮ ಕೈಗೊಳ್ಳಲಾಗಿದೆ. ಪೊಲೀಸ್ ಇಲಾಖೆಯ ಕಣ್ಣಿಗೆ ಬೀಳದ ಅದೆಷ್ಟೋ ಭಯಾನಕ ವ್ಹೀಲಿಂಗ್ ಗಳು ನಡೆಯುತ್ತಿವೆ.
ಪೋಷಕರ ವಿರುದ್ಧ ಕ್ರಮ
2023 242 – 70
2024 532 – 120
2025 646 – 159
18ಕ್ಕಿಂತ ಕಡಿಮೆ ವಯಸ್ಸಿನ ಯುವಕರು ಬಹುತೇಕ ವಿಷಯಗಳಲ್ಲಿ ಸ್ಮಾರ್ಟ್ ಎನಿಸಿದರೂ ವಾಹನ ಚಾಲನೆ ಮಾಡುವಷ್ಟು ಪ್ರಬುದ್ಧರಾಗಿರುವುದಿಲ್ಲ ಮತ್ತು ವಾಹನಗಳನ್ನು ನಿರ್ವಹಿಸುವಷ್ಟು ದೈಹಿಕವಾಗಿ ಹಾಗೂ ರಸ್ತೆ ಸುರಕ್ಷತಾ ನಿಯಮಗಳ ಬಗ್ಗೆ ಅರಿಯುವಷ್ಟು ಮಾನಸಿಕವಾಗಿ ಸದೃಢರಾಗಿರುವುದಿಲ್ಲ. ಈ ಕಾರಣದಿಂದ 18 ವರ್ಷಗಳಿಗಿಂತ ಮೊದಲು ವಾಹನ ಚಾಲನೆ ಮಾಡುವುದು ಕಾನೂನಿನ ಪ್ರಕಾರ ತಪ್ಪು. ಅಪ್ರಾಪ್ತರು ವಾಹನ ಚಲಾಯಿಸುವುದು ಹಾಗೂ ಅವರಿಗೆ ವಾಹನ ಚಾಲನೆಗೆ ಅವಕಾಶ ನೀಡುವುದು ಶಿಕ್ಷಾರ್ಹ ಅಪರಾಧವಾಗಿದೆ.
ಆದರೆ ಪೋಷಕರು ಮಾತ್ರ ತಮ್ಮ ಮಕ್ಕಳ ಮೇಲಿನ ಅತಿಯಾದ ಪ್ರೀತಿ, ಅವರ ಜ್ಞಾನದ ಹೆಮ್ಮೆಯಿಂದ ಚಿಕ್ಕವಯಸ್ಸಿನಲ್ಲೇ ಅವರಿಗೆ ವಾಹನ ಓಡಿಸಲು ಕಲಿಸಿ ಬಿಡುತ್ತಾರೆ. ಆದರೆ, ಯುವಪೀಳಿಗೆಯ ಭವಿಷ್ಯದ ದೃಷ್ಟಿಯಿಂದ ಅಥವಾ ಸುರಕ್ಷತೆಯಿಂದ ಇದು ಸೂಕ್ತವಲ್ಲ. ಕಾನೂನಿನಡಿ ಕೂಡ ಅಪ್ರಾಪ್ತರು ವಾಹನ ಚಲಾಯಿಸಿದರೆ ಆ ವಾಹನಗಳ ಮಾಲೀಕರಿಗೆ ಕಠಿಣ ಶಿಕ್ಷೆ ಇದೆ. ಭಾರತೀಯ ಮೋಟಾರು ವಾಹನಗಳ ಕಾಯ್ದೆ 1988ರಡಿ ವಾಹನಗಳ ಮಾಲೀಕರಿಗೆ (ಸಾಮಾನ್ಯವಾಗಿ ಪೋಷಕರು) 3 ತಿಂಗಳುಗಳವರೆಗೆ ಜೈಲು ಶಿಕ್ಷೆ ಅಥವಾ 25 ಸಾವಿರ ರೂ ಮೇಲ್ಪಟ್ಟ ದಂಡ ಅಥವಾ ಎರಡೂ ಶಿಕ್ಷೆ ವಿಧಿಸುವ ಅವಕಾಶವಿದೆ.
ಇದರೊಂದಿಗೆ ವಾಹನದ ನೋಂದಣಿಯನ್ನು 12 ತಿಂಗಳುಗಳ ಅವಧಿಗೆ ಅಮಾನತಿನಲ್ಲಿರಿಸುವ ಅವಕಾಶವೂ ಇದೆ ಎಂದು ಪೊಲೀಸರು ತಿಳುವಳಿಕೆ ಮೂಡಿಸುತ್ತಲೇ ಇದ್ದಾರೆ. ಆದರೂ ಪೋಷಕರಿಕೆ ಮಾತ್ರ ಬುದ್ಧಿ ಬಾರದಿರುವುದು ವಿಷಾದದ ಸಂಗತಿ. ಅಪಘಾತಗಳಿಗೆ ಕೇವಲ ಚಾಲಕರ ಅತಿವೇಗ ಅಥವಾ ಮದ್ಯಪಾನವಷ್ಟೇ ಕಾರಣವೂ ಅಲ್ಲ. ಅವೈಜ್ಞಾನಿಕವಾಗಿ ನಿರ್ಮಿಸಿರುವ ಸೇತುವೆಗಳು, ಅಪಾಯಕಾರಿ ತಿರುವುಗಳಲ್ಲಿ ದೃಷ್ಟಿ ಮರೆಮಾಚುವ ಗಿಡಗಂಟಿಗಳು, ಕಿರಿದಾದ ಗ್ರಾಮೀಣ ರಸ್ತೆಗಳು ಮೃತ್ಯುವಿಗೆ ಆಹ್ವಾನ ನೀಡುತ್ತಿರುತ್ತವೆ. ಈ ಸಂದರ್ಭದಲ್ಲಿ ಯುವ ಪೀಳಿಗೆ ವಾಹನ ಚಲಾಯಿಸಿದರೆ ಹೇಗಾಗಬೇಡ ಹೇಳಿ? ಇನ್ನಾದರೂ ಪೋಷಕರು ಬುದ್ಧಿ ಕಲಿಯಲಿ ಎನ್ನುವುದೇ ನಮ್ಮ ಆಶಯ.
ಇದನ್ನೂ ಓದಿ : ದುಬೈ ವಿಮಾನ ನಿಲ್ದಾಣದ ಮೇಲೆ ಇರಾನ್ ಬ್ಯಾಲಿಸ್ಟಿಕ್ ಕ್ಷಿಪಣಿ ದಾಳಿ? ವದಂತಿಗಳಿಗೆ ತೆರೆ ಎಳೆದ UAE ಸರ್ಕಾರ!



















