ನವದೆಹಲಿ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ಶುಕ್ರವಾರ ನಡೆದ ಮತದಾನದಲ್ಲಿ ಭಾರತವು ಪ್ಯಾಲೆಸ್ತೀನ್ ಸಮಸ್ಯೆಯ ಶಾಂತಿಯುತ ಪರಿಹಾರವನ್ನು ಬೆಂಬಲಿಸುವ ನಿರ್ಣಯಕ್ಕೆ ಅನುಮೋದನೆ ನೀಡಿದೆ. ಇದು ಗಾಜಾ ವಿಷಯದಲ್ಲಿ ಭಾರತ ಇತ್ತೀಚೆಗೆ ತೋರಿದ್ದ ನಿಲುವಿನಲ್ಲಿ ಆದ ಬದಲಾವಣೆಯನ್ನು ಸೂಚಿಸುತ್ತದೆ. ಕಳೆದ ಮೂರು ವರ್ಷಗಳಲ್ಲಿ ವಿಶ್ವಸಂಸ್ಥೆಯಲ್ಲಿ ನಾಲ್ಕು ಬಾರಿ ಗಾಜಾ ಯುದ್ಧವಿರಾಮಕ್ಕೆ ಕರೆ ನೀಡುವ ನಿರ್ಣಯಗಳಿಂದ ಭಾರತ ದೂರ ಉಳಿದಿತ್ತು.
ಫ್ರಾನ್ಸ್ ಮಂಡಿಸಿದ ನಿರ್ಣಯವು ಭಾರೀ ಬಹುಮತದೊಂದಿಗೆ ಅಂಗೀಕರಿಸಲ್ಪಟ್ಟಿದ್ದು, 142 ರಾಷ್ಟ್ರಗಳು ಬೆಂಬಲಿಸಿದರೆ, 10 ವಿರೋಧಿಸಿದವು ಮತ್ತು 12 ದೇಶಗಳು ಮತದಾನದಿಂದ ದೂರ ಉಳಿದವು. ಭಾರತ ಸೇರಿದಂತೆ ಎಲ್ಲಾ ಗಲ್ಫ್ ಅರಬ್ ರಾಷ್ಟ್ರಗಳು ಬೆಂಬಲ ನೀಡಿದರೆ, ಇಸ್ರೇಲ್, ಅಮೆರಿಕ, ಅರ್ಜೆಂಟಿನಾ, ಹಂಗೇರಿ ಸೇರಿದಂತೆ 10 ರಾಷ್ಟ್ರಗಳು ವಿರೋಧಿಸಿದವು.
ಘೋಷಣೆಯ ಮುಖ್ಯಾಂಶಗಳು:
ಈ ಘೋಷಣೆಯು ಗಾಜಾ ಯುದ್ಧವನ್ನು ತಕ್ಷಣ ಕೊನೆಗೊಳಿಸುವಂತೆ ಕರೆ ನೀಡಿದ್ದು, ಇಸ್ರೇಲ್-ಪ್ಯಾಲೆಸ್ತೀನ್ ಸಂಘರ್ಷಕ್ಕೆ ನ್ಯಾಯಯುತ, ಶಾಂತಿಯುತ ಮತ್ತು ದೀರ್ಘಕಾಲೀನ ಪರಿಹಾರಕ್ಕಾಗಿ “ಎರಡು ದೇಶಗಳ ಪರಿಹಾರ”ವನ್ನು ಅಳವಡಿಸಿಕೊಳ್ಳುವಂತೆ ಒತ್ತಾಯಿಸಿದೆ.
ಅಕ್ಟೋಬರ್ 7ರ ಹಮಾಸ್ ದಾಳಿಯನ್ನು ಖಂಡಿಸಿದ ಘೋಷಣೆಯು ಇಸ್ರೇಲ್ನ ಪ್ರತೀಕಾರ ಕಾರ್ಯಾಚರಣೆಯನ್ನೂ ಟೀಕಿಸಿದ್ದು, ನಾಗರಿಕ ಸಾವುಗಳು, ಮೂಲಸೌಕರ್ಯ ಹಾನಿ ಮತ್ತು ಮಾನವೀಯ ದುರಂತವನ್ನು ಉಲ್ಲೇಖಿಸಿದೆ.
ಇಸ್ರೇಲ್ ನಾಯಕತ್ವವು ಪ್ಯಾಲೆಸ್ತೀನ್ ಸಾರ್ವಭೌಮ ಮತ್ತು ಸ್ವತಂತ್ರ ದೇಶಕ್ಕೆ ಸ್ಪಷ್ಟ ಬೆಂಬಲ ನೀಡಬೇಕು ಎಂದು ಕರೆ ನೀಡಿದ್ದು, ಪ್ಯಾಲೆಸ್ತೀನ್ ಜನರ ವಿರುದ್ಧ ಹಿಂಸೆ, ಭೂಕಬಳಿಕೆ ಮತ್ತು ಆಕ್ರಮಣ ಕಾರ್ಯಕ್ರಮಗಳನ್ನು ತಕ್ಷಣ ನಿಲ್ಲಿಸುವಂತೆ ಒತ್ತಾಯಿಸಿದೆ.
“ಗಾಜಾ ಪ್ಯಾಲೆಸ್ತೀನ್ನ ಅವಿಭಾಜ್ಯ ಭಾಗವಾಗಿದ್ದು, ವೆಸ್ಟ್ ಬ್ಯಾಂಕ್ನೊಂದಿಗೆ ಒಂದಾಗಬೇಕು. ಆಕ್ರಮಣ, ಮುತ್ತಿಗೆ, ಬಲವಂತದ ಸ್ಥಳಾಂತರಕ್ಕೆ ಅವಕಾಶವಿಲ್ಲ” ಎಂದು ಘೋಷಣೆ ಒತ್ತಿ ಹೇಳಿದೆ.
ಇಸ್ರೇಲ್ ಮತ್ತು ಅಮೆರಿಕದ ಪ್ರತಿಕ್ರಿಯೆ:
ಇಸ್ರೇಲ್ ವಿದೇಶಾಂಗ ಸಚಿವಾಲಯದ ವಕ್ತಾರ ಓರೆನ್ ಮಾರ್ಮೋರ್ಸ್ಟೈನ್ ನಿರ್ಣಯವನ್ನು “ರಾಜಕೀಯ ಸರ್ಕಸ್” ಎಂದು ಕರೆದಿದ್ದು, ಹಮಾಸ್ನ್ನು ಭಯೋತ್ಪಾದಕ ಸಂಘಟನೆ ಎಂದು ಉಲ್ಲೇಖಿಸದಿರುವುದನ್ನು ಟೀಕಿಸಿದ್ದಾರೆ. ಅಮೆರಿಕ ಕೂಡ ವಿಶ್ವಸಂಸ್ಥೆಯ ನಿರ್ಣಯವನ್ನು ವಿರೋಧಿಸಿ, “ಇದು ಹಮಾಸ್ಗೆ ಉಡುಗೊರೆಯಾಗಿದೆ” ಎಂದು ಹೇಳಿದೆ.



















