ಬಾಗಲಕೋಟೆ: ಬಾಗಲಕೋಟೆ ಪ್ರವಾಸೋದ್ಯಮ ಇಲಾಖೆಯ(Bagalkot Tourism Department Scam)ಲ್ಲಿ ಅಕ್ರಮದ ಆರೋಪ ಕೇಳಿ ಬಂದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಇಲ್ಲಿಯವರೆಗೆ ಬರೋಬ್ಬರಿ 19 ಜನರನ್ನು ಬಂಧಿಸಲಾಗಿದೆ.
ಇಲಾಖೆಗೆ ಸಂಬಂಧಿಸಿದ 2 ಕೋಟಿ 47 ಲಕ್ಷ ಅಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿದಂತೆ ತನಿಖೆ ಚುರುಕುಗೊಂಡಿದ್ದು, ಇಲ್ಲಿಯವರೆಗೆ ಒಟ್ಟು 19 ಜನರನ್ನು ಬಂಧಿಸಲಾಗಿದೆ. ತನಿಖೆ ಬಗೆದಷ್ಟು ಹುಳುಕು ಹೊರ ಬರುತ್ತಿದ್ದು, ಸಿಐಡಿಗೆ ಪ್ರಕರಣ ಹಸ್ತಾಂತರಿಸುವ ಚಿಂತನೆ ಕೂಡ ನಡೆದಿದೆ.
2021 ರಿಂದ 2024 ರವರೆಗೆ 54 ಬಾರಿ 33 ಖಾತೆಗೆ ಅಕ್ರಮ ಹಣ ವರ್ಗಾವಣೆ ಮಾಡಲಾಗಿದೆ. ಈ ಪ್ರಕರಣದಲ್ಲಿ ಬಾಗಲಕೋಟೆ ಐಡಿಬಿಐ ಬ್ಯಾಂಕ್ ಗುತ್ತಿಗೆ ನೌಕರ ಸೇಲ್ಸ್ ಎಕ್ಸಿಕ್ಯೂಟಿವ್, ಕಿಂಗ್ ಪಿನ್ ಸೂರಜ್ ಸಗರ, ಐಡಿಬಿಐ ಬ್ಯಾಂಕ್ ಅಸಿಸ್ಟೆಂಟ್ ಮ್ಯಾನೇಜರ್ ಗಳಾದ ನಿಶಾ ಹಾಗೂ ಸರಸ್ವತಿ, ಬ್ಯಾಂಕ್ ಪಬ್ಲಿಕ್ ರಿಲೇಷನ್ಶಿಪ್ ಆಫಿಸರ್ ವಿದ್ಯಾಧರ ಹಿರೆಮಠ, ಲೋನ್ ವಿಭಾಗದ ಅಸಿಸ್ಟೆಂಟ್ ಮ್ಯಾನೇಜರ್ ರೋಹಿತ್, ಹಣ ಹಾಕಿಸಿಕೊಂಡ 14 ಜನರು ಸೇರಿದಂತೆ ಒಟ್ಟು 19 ಜನರನ್ನು ಬಂಧಿಸಲಾಗಿದೆ.
ಹಣ ಹಾಕಿಸಿಕೊಂಡ ಖಾತೆದಾರರು ಶೇ. 30 ರಿಂದ 50ರಷ್ಟು ಕಮೀಷನ್ ಪಡೆದು ಮರಳಿ ಸೂರಜ್ ಗೆ ಹಣ ಮರಳಿಸುತ್ತಿದ್ದರು ಎಂದು ತಿಳಿದು ಬಂದಿದೆ. ನಂತರ ಸೂರಜ್ ಹಾಗೂ ಆರೋಪಿ ಬ್ಯಾಂಕ್ ಸಿಬ್ಬಂದಿ ಹಣ ಹಂಚಿಕೊಳ್ಳುತ್ತಿದ್ದರು ಎನ್ನಲಾಗಿದೆ.
ಬಂಧಿತ ಆರೋಪಿಗಳು ಪ್ರವಾಸೋದ್ಯಮ ಇಲಾಖೆ ಜೊತೆಗೆ ಇನ್ನಿತರ ನಾಲ್ಕು ಇಲಾಖೆ ಹಣ ಕೂಡ ಅಕ್ರಮ ವರ್ಗಾವಣೆ ಮಾಡಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ. ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯಿಂದ 79 ಲಕ್ಷ 75 ಸಾವಿರ, ಪಂಚಾಯತ್ ರಾಜ್ ಇಂಜಿನಿಯರಿಂಗ್ ವಿಭಾಗದ 86 ಲಕ್ಷದ 40 ಸಾವಿರ, ಕೈಮಗ್ಗ ಮತ್ತು ಜವಳಿ ಇಲಾಖೆಯ 18 ಲಕ್ಷದ 15 ಸಾವಿರ, ಹಿಂದುಳಿದ ವರ್ಗ ಕಲ್ಯಾಣ ಇಲಾಖೆಯ 1 ಕೋಟಿ 76 ಲಕ್ಷದ 58 ಸಾವಿರ ಸೇರಿದಂತೆ 5 ಇಲಾಖೆಯ 6 ಕೋಟಿ ರೂ. ವಂಚನೆ ನಡೆದಿದೆ ಎಂದು ತಿಳಿದು ಬಂದಿದೆ. ತನಿಖೆಯ ನಂತರ ಎಲ್ಲ ವಿಷಯ ಬಹಿರಂಗವಾಗಲಿದೆ.