ಮಂಗಳೂರು: ಬುರುಡೆ ಗ್ಯಾಂಗ್ ಮಹೇಶ್ ಶೆಟ್ಟಿ ತಿಮರೋಡಿಗೆ ಬಂಧನ ಭೀತಿ ಎದುರಾಗಿದೆ. ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿದ್ದ ಹಿನ್ನೆಲೆ ಇಂದು ಬೆಳ್ತಂಗಡಿ ಪೊಲೀಸ್ ಠಾಣೆಗೆ ಹಾಜರಾಗಲು ಪೊಲೀಸರು ಸೂಚಿಸಿದ್ದಾರೆ. ಇಂದು ಹಾಜರಾದರೂ, ಆಗದಿದ್ದರೂ ತಿಮರೋಡಿ ಬಂಧನ ಆಗುವ ಸಾಧ್ಯತೆ ಇದೆ.
ಧರ್ಮಸ್ಥಳ ಗ್ರಾಮದಲ್ಲಿ ಶವ ಹೂತಿಟ್ಟ ಪ್ರಕರಣ ಷಡ್ಯಂತ್ರ ಎನ್ನುವುದು ಇದೀಗ ಸಾಬೀತಾಗುವ ಹಂತಕ್ಕೆ ಬಂದಿದೆ. ಈ ಷಡ್ಯಂತ್ರ ನಡೆಸಿರುವ ಬುರುಡೆ ಗ್ಯಾಂಗ್ನ ಮಹೇಶ್ ಶೆಟ್ಟಿ ತಿಮರೋಡಿಗೆ ಒಂದರ ಮೇಲೊಂದು ಸಂಕಷ್ಟ ಎದುರಾಗಿದೆ. ಒಂದೆಡೆ ಷಡ್ಯಂತ್ರ ನಡೆಸಿರುವ ಪ್ರಕರಣದ ಸೂತ್ರಧಾರಿ ಇದೇ ಮಹೇಶ್ ಶೆಟ್ಟಿ ತಿಮರೋಡಿ ಎನ್ನುವುದು ಭಾಗಶಃ ದೃಢವಾಗಿದ್ದು, ಎಸ್ಐಟಿ ತನಿಖೆಯಲ್ಲೂ ಇದಕ್ಕೆ ಬೇಕಾದ ಸಾಕ್ಷಿ, ದಾಖಲೆಗಳು ಸಿಕ್ಕಿದೆ. ಇನ್ನೊಂದೆಡೆ ಅಕ್ರಮ ಶಸ್ತ್ರಾಸ್ತ್ರ ಸಂಗ್ರಹಿಸಿಟ್ಟಿದ್ದ ಪ್ರಕರಣದಲ್ಲೂ ತಿಮರೋಡಿಗೆ ಬಂಧನ ಆಗುವ ಭೀತಿ ಎದುರಾಗಿದೆ.
ಆರೋಪಿ ಚಿನ್ನಯ್ಯ ಬಂಧನವಾದ ಬಳಿಕ ತನಗೆ ಆಶ್ರಯ ಕೊಟ್ಟಿದ್ದು ಷಡ್ಯಂತ್ರದ ಸೂತ್ರಧಾರಿ ಮಹೇಶ್ ಶೆಟ್ಟಿ ತಿಮರೋಡಿ ಎಂದು ಆತ ಬಾಯ್ಬಿಟ್ಟಿದ್ದ. ಹೀಗಾಗಿ ತಿಮರೋಡಿಯ ಉಜಿರೆಯಲ್ಲಿರುವ ಮನೆಗೆ ಎಸ್ಐಟಿ ಅಧಿಕಾರಿಗಳು ದಾಳಿ ನಡೆಸಿ ಶೋಧ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಮಾರಕಾಸ್ತ್ರಗಳು ಸೇರಿ 5.5 ಎಂಎಂನ ಏರ್ ಗನ್ ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಳ್ಳಲಾಗಿದೆ.
ಇನ್ನು ಶಸ್ತ್ರಾಸ್ತ್ರಗಳನ್ನು ವಶಕ್ಕೆ ಪಡೆದುಕೊಂಡ ಬಳಿಕ ಎಸ್ಐಟಿ ಅಧಿಕಾರಿಗಳು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ತಿಮರೋಡಿ ವಿರುದ್ಧ ಪ್ರಕರಣ ದಾಖಲಿಸಿದ್ದರು. ಈ ಬಗ್ಗೆ ತನಿಖೆಗೆ ಬೆಳ್ತಂಗಡಿ ಪೊಲೀಸ್ ಠಾಣೆಗೆ ವಿಚಾರಣೆಗೆ ಹಾಜರಾಗಲು ಸೂಚಿಸಲಾಗಿದೆ. ವಶಕ್ಕೆ ಪಡೆದ ಗನ್ಗೆ ಲೈಸೆನ್ಸ್ ಇಲ್ಲದಿದ್ದರೆ ತಿಮರೋಡಿಯನ್ನು ಇಂದು ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದು ಬಂದಿದೆ.