ಚಿತ್ರದುರ್ಗ : ಪಕ್ಕದ ಜಮೀನಿನಲ್ಲಿ ಅಕ್ರಮವಾಗಿ ಮಣ್ಣು ಸಾಗಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನೀಡಿದ ದೂರು ಹಿನ್ನಲೆಯಲ್ಲಿ, ಪೊಲೀಸ್ ಠಾಣೆಯಲ್ಲೇ ಗದ್ದಲ ಉಂಟಾದ ಘಟನೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ನಡೆದಿದೆ. ಅಯ್ಯನಹಳ್ಳಿಯ ಮೀನಾಕ್ಷಮ್ಮ ಎಂಬುವವರು, ತಮ್ಮ ಜಮೀನಿನಿಂದ ಮಣ್ಣು ಸಾಗಿಸಲಾಗಿದೆ ಎಂದು ಹೊಳಲ್ಕೆರೆ ಪೊಲೀಸ್ ಠಾಣೆಯಲ್ಲಿ ಎಎಸ್ಐ ಹನುಮಂತಪ್ಪ ವಿರುದ್ಧ ದೂರು ನೀಡಿದ್ದರು. ಈ ದೂರಿನ ಆಧಾರದ ಮೇಲೆ ಗ್ರಾಮಾಂತರ ಠಾಣೆಯ ಇನ್ಸ್ಪೆಕ್ಟರ್ ಎಎಸ್ಐ ಹನುಮಂತಪ್ಪನನ್ನು ವಿಚಾರಣೆಗೆ ಕರೆಸಿದ್ದರು.
ವಿಚಾರಣೆ ವೇಳೆ ಎಎಸ್ಐ ಹನುಮಂತಪ್ಪ, ಸಿಪಿಐ ಬಾಲಚಂದ್ರ ನಾಯ್ಕ್ ಅವರಿಗೆ ಧಮ್ಕಿ ಹಾಕಿದ್ದು, ಠಾಣೆಯಲ್ಲೇ ಮೇಜು ಕುಟ್ಟಿ ರಂಪಾಟ ನಡೆಸಿದ್ದಾರೆ ಎನ್ನಲಾಗಿದೆ. ಸಿವಿಲ್ ಡಿಸ್ಪೂಟ್ ಇರುವ ಸಂದರ್ಭದಲ್ಲಿ ವಿಚಾರಣೆಗೆ ಹೇಗೆ ಕರೆಸಿದಿರಿ ಎಂದು ಸಿಪಿಐ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದಕ್ಕೆ ಎಎಸ್ಐ ಹನುಮಂತಪ್ಪನ ಸಹಚರರಾದ ಚಿದಾನಂದ, ಮೋಹನ್ ಕುಮಾರ್ ಮತ್ತು ಗುರುಸ್ವಾಮಿ ಸಾಥ್ ನೀಡಿದ್ದು, ಸಿಪಿಐ ಬಾಲಚಂದ್ರ ನಾಯ್ಕ್ ಅವರಿಗೆ ಧಿಕ್ಕಾರ ಕೂಗಿ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಈ ಸಂಬಂಧ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಎಎಸ್ಐ ಹನುಮಂತಪ್ಪ, ರಾಜಪ್ಪ, ಗುರುಸ್ವಾಮಿ ಮತ್ತು ಚಿದಾನಂದ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ. ಘಟನೆ ಪೊಲೀಸ್ ವಲಯದಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಇದನ್ನೂ ಓದಿ : ಕೊಪ್ಪಳ | ಕುಡಿವ ನೀರಿನಲ್ಲಿ ಹುಳುಗಳು ; ಗ್ರಾಮಸ್ಥರಲ್ಲಿ ಆತಂಕ



















