ದುಡ್ಡಿಲ್ಲ ಗ್ಯಾರಂಟಿ..ದುಡ್ಡಿಲ್ಲ ಗ್ಯಾರಂಟಿ..ದುಡ್ಡಿಲ್ಲ ಗ್ಯಾರಂಟಿ…ಹೌದು! ಇದು ಈಗಿನ ಸರ್ಕಾರದ ಪರಿಸ್ಥಿತಿಯಾಗಿದೆ. ವಸತಿ ಇಲಾಖೆಯಲ್ಲಿ ದುಡ್ಡು ಕೊಟ್ಟರೆ ಮಾತ್ರ ಮನೆ…ಸಿದ್ದರಾಮಯ್ಯ ಹತ್ತಿರ ದುಡ್ಡಿಲ್ಲರೀ…ಚರಂಡಿ ಸ್ವಚ್ಛಗೊಳಿಸೋಕೂ ದುಡ್ಡಿಲ್ಲ. ಅಭಿವೃದ್ಧಿಗೆ ನಯಾ ಪೈಸೆ ಬರುತ್ತಿಲ್ಲ… ಇದು ನಾವು ಹೇಳುತ್ತಿರುವ ಮಾತಲ್ಲ. ಕಾಂಗ್ರೆಸ್ ನ ಶಾಸಕರೇ ಬಹಿರಂಗವಾಗಿ ಮಾಡುತ್ತಿರುವ ಟೀಕೆ ಅಥವಾ ಲೇವಡಿ.
ಈ ಟೀಕೆ ಮಾಡಿದವರ ಬಾಯಿ ಮುಚ್ಚಿಸುವಂತೆ ಈಗಾಗಲೇ ಹೈಕಮಾಂಡ್ ಕಟ್ಟಪ್ಪಣೆ ಹೊರಡಿಸಿದೆ. ಇದು ರಾಜಕೀಯ ಪ್ರೇರಿತ ಅಂತ ಕೂಡ ಜನರನ್ನಾಳುವವರು ಹೇಳುತ್ತಿದ್ದಾರೆ. ಆದರೆ, ಅದೇನೇ ಇರಲಿ. ಈ ಹೇಳಿಕೆಗಳನ್ನು ನಿಜವಾಗಿಯೂ ಮತದಾರ ಗಂಭೀರವಾಗಿ ತೆಗೆದುಕೊಳ್ಳಲೇಬೇಕು!
ಬೆಂಕಿ ಇಲ್ಲದೆ ಹೊಗೆಯಾಡುವುದಿಲ್ಲ. ಹೀಗಾಗಿ ಆರೋಪಗಳ ಹಿಂದೆ ಅಭಿವೃದ್ಧಿ ಆಗದಿರುವ ಬೇಸರ, ಹತಾಶೆಯ ನೋವು ಇರಬಹುದು. ಇದು ಹೀಗೆ ಮುಂದುವರೆದರೆ ರಾಜ್ಯ ದಿವಾಳಿಯಾಗುವುದು ನಿಶ್ಚಿತ. ಪ್ರಜ್ಞಾವಂತಿಕೆಯನ್ನು ಇಲ್ಲಿ ಮತದಾರ ಮೆರೆಯಲೇಬೇಕಿದೆ. ಇಲ್ಲವಾದರೆ ಕರ್ನಾಟಕದ ಅಭಿವೃದ್ಧಿಯು ದಿಕ್ಕು ತಪ್ಪಬಹುದು.
ಸ್ವಂತ ಪಕ್ಷದವರೇ ಆರೋಪ ಮಾಡಿರುವ ಆರೋಪಗಳು ಉದ್ದೇಶ ಪೂರ್ವಕವಾಗಿಯೋ? ಅಥವಾ ದುರುದ್ದೇಶಪೂರ್ವಕಯೋ? ಗೊತ್ತಿಲ್ಲ. ಒಂದು ವೇಳೆ ಅವರು ಮಾಡಿರುವ ಆರೋಪ ರಾಜಕೀಯ ಪ್ರೇರಿತವಾಗಿದ್ದರೆ, ಖುಷಿ. ಆದರೆ, ನಿಜವಾಗಿಯೂ ಗ್ಯಾರಂಟಿ ಯೋಜನೆಗಳು ಹಾಗೂ ಆರ್ಥಿಕತೆಯ ಹಂಚಿಕೆಯಲ್ಲಿ ಸರ್ಕಾರ ಎಡವಿರುವ ನಿರ್ಧಾರಗಳಿಂದಾಗಿ ಬೇಸತ್ತು ಅವರು ಈ ಮಾತುಗಳನ್ನು ಆಡಿದ್ದರೆ, ಕೂಡಲೇ ಸರ್ಕಾರ ಎಚ್ಚೆತ್ತುಕೊಳ್ಳಲೇಬೇಕು. ಎಚ್ಚೆತ್ತುಕೊಳ್ಳಲೇಬೇಕು. ಇಲ್ಲವಾದರೆ, ರಾಜ್ಯದ ಭವಿಷ್ಯ ಡೋಲಾಯಮಾನವಾಗುತ್ತದೆ. ಇಲ್ಲಿ ಮತದಾರ ಪ್ರಜ್ಞಾವಂತಿಕೆಯನ್ನು ಮೆರೆಯಲೇಬೇಕು..
ಇತ್ತೀಚೆಗಷ್ಟೇ ಆಳಂದ ಶಾಸಕ ಬಿ.ಆರ್. ಪಾಟೀಲ್, ಅರ್ಹ ಬಡವರಿಗೆ ಸೂರು ಸಿಗುತ್ತಿಲ್ಲ. ವಸತಿ ಯೋಜನೆಯಡಿ ದುಡ್ಡು ಕೊಟ್ಟವರಿಗೆ ಮಾತ್ರ ನಿವೇಶನ ಹಂಚಿಕೆ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದರು. ಈ ಮಾತು ರಾಜಕೀಯ ವಲಯದಲ್ಲಿ ದೊಡ್ಡ ಸಂಚಲನವನ್ನೇ ಸೃಷ್ಟಿಸಿ ಬಿಟ್ಟಿತು. ಆಡಳಿತ ಪಕ್ಷದ ಶಾಸಕರಾಗಿದ್ದರೂ ಬಿ.ಆರ್. ಪಾಟೀಲ್ ಆಡಿದ ಮಾತು ವಿರೋಧ ಪಕ್ಷಗಳಿಗೆ ಹೂರಣವನ್ನೇ ನೀಡಿತ್ತಾದರೂ ಕಾಂಗ್ರೆಸ್ ಕೈ ಸುಟ್ಟುಕೊಳ್ಳುವಂತಾಗಿದೆ. ನಂತರ ನಾಯಕರು ಬಿ.ಆರ್. ಪಾಟೀಲ್ ರನ್ನು ತರಾಟೆಗೆ ತೆಗೆದುಕೊಂಡರು. ಈ ರೀತಿ ಮಾತನಾಡದಂತೆ ಹೇಳತೊಡಗಿದರು. ಸ್ವತಃ ವಸತಿ ಸಚಿವರು ನನಗೆ ಜನರ ದುಡ್ಡು ತಿನ್ನುವ ದಾರಿದ್ರ್ಯ ಬಂದಿಲ್ಲ ಎಂತಲೂ ಹೇಳಿದರು. ಆದರೆ, ಇಲ್ಲಿ ವಿಷಯ ಅದಲ್ಲ. ನಿಜವಾಗಿಯೂ ಪರಿಸ್ಥಿತಿ ಹಾಗಿದೆಯಾ? ನಿಜವಾಗಿಯೂ ಅರ್ಹರಿಗೆ ಮನೆ ಸಿಗುತ್ತಿಲ್ಲವಾ? ದುಡ್ಡು ಕೊಟ್ಟರೆ ಮಾತ್ರ ಮನೆ ಸಿಗುತ್ತಿವೆಯಾ? ಹೀಗಾಗಿಯೇ ಬಡವರು ಸೂರಿಲ್ಲದೆ, ನಲುಗಿ ಹೋಗುತ್ತಿದ್ದಾರೆಯೇ? ಅಧಿಕಾರಿಶಾಹಿಗಳು ದುಡ್ಡಿನ ಹಿಂದೆ ಬಿದ್ದಿದ್ದಾರೆಯೇ? ಜನಪ್ರತಿನಿಗಳು ಕೂಡ ಪರ್ಸೆಂಟೀಸ್ ಫಿಕ್ಸ್ ಮಾಡಿದ್ದಾರಾ? ಇದೆಲ್ಲವನ್ನೂ ನಾವೀಗ ಪರಿಶೀಲನೆ ನಡೆಸಲೇಬೇಕಿದೆ. ಶಾಸಕರು ಮಾಡಿರುವ ಆರೋಪ ನಿಜವಾಗಿಯೇ ಇದ್ದರೆ, ರಾಜ್ಯ ಸುಭದ್ರವಾಗಿಲ್ಲ ಅಂತಾ ಅರ್ಥ. ಹಾಗಿದ್ದಲ್ಲೆ ಪ್ರಜ್ಞಾವಂತರು ರಾಜ್ಯವನ್ನು ಕಟ್ಟಲೇಬೇಕು. ಹೋರಾಟಗಾರರು ಇಂತಹ ಭ್ರಷ್ಟಾಚಾರವನ್ನು ಹೊರಗೆಡವಲೇಬೇಕು. ಬಡವರಿಗೆ ನ್ಯಾಯ ಒದಗಿಸಲೇಬೇಕು. ಭ್ರಷ್ಟ ಅಧಿಕಾರಿಗಳು, ಜನಪ್ರತಿನಿಧಿಗಳ ಹೆಡೆಮೂರಿ ಕಟ್ಟಲೇಬೇಕು.
ಶಾಸಕ ಎನ್.ವೈ. ಗೋಪಾಲಕೃಷ್ಣ ಅವರು ಗ್ರಾಮದಲ್ಲಿ ಒಂದೇ ಒಂದು ಚರಂಡಿ ನಿರ್ಮಾಣ ಮಾಡಲು ಆಗುತ್ತಿಲ್ಲ. ಅವುಗಳನ್ನು ಸ್ವಚ್ಛ ಮಾಡಲೂ ದುಡ್ಡಿಲ್ಲ ಎಂದು ಆರೋಪಿಸಿದ್ದಾರೆ. ಇದನ್ನು ಕೇಳಿದರೆ ನಿಜವಾಗಿಯೂ ಭಯವಾಗುತ್ತಿದೆ. ಪ್ರಸಕ್ತ ಸಾಲಿಗೆ 4,09,549 ಕೋಟಿ ರೂ ದಾಖಲೆ ಗಾತ್ರದ ಬಜೆಟ್ ನ್ನು ಸಿಎಂ ಸಿದ್ದರಾಮಯ್ಯ ಮಂಡಿಸಿದ್ದಾರೆ. ಇಷ್ಟೊಂದು ದೊಡ್ಡ ಗಾತ್ರ ಬಜೆಟ್ ಮಂಡಿಸಿದ ಸರ್ಕಾರಕ್ಕೆ ಚರಂಡಿ ಸ್ವಚ್ಛ ಮಾಡುವ ಯೋಗ್ಯತೆಯೂ ಇಲ್ಲವಾಯಿತೇ? ಹಾಗಾದರೆ, ಸರ್ಕಾರದ ದುಡ್ಡು ಎಲ್ಲಿಗೆ ಹೋಯ್ತು? ಒಂದು ಶಾಲೆಯ ಕಟ್ಟಡ ಕಟ್ಟುವುದಕ್ಕೂ ನನ್ನ ಬಳಿ ಅನುದಾನವಿಲ್ಲ ಎಂದು ಶಾಸಕರು ಅಸಾಹಯಕತೆ ತೋರಿಸುತ್ತಾರೆಂದರೆ ಸರ್ಕಾರದ ಸ್ಥಿತಿ ಎಲ್ಲಿಗೆ ಬಂತು?
ಹೌದಲ್ವಾ? ನಾವು ಖಂಡಿಸಬೇಕಾಗಿದ್ದು ಇದನ್ನ. ಶಾಸಕರು ಇಷ್ಟೊಂದು ಅಸಹಾಯಕರಾದರೆ, ಸರ್ಕಾರ ಇಷ್ಟೊಂದು ದಿವಾಳಿಯಾದರೆ? ಪ್ರಜೆಗಳ ಪರಿಸ್ಥಿತಿ ಇನ್ನೇನಾಗಬೇಡ? ನಾವು ವಿಚಾರ ಮಾಡಬೇಕಾಗಿದ್ದು, ಇದನ್ನು. ಹಿರಿಯ ಶಾಸಕ ರಾಜು ಕಾಗೆ ಅಭಿವೃದ್ಧಿಗೆ ಹಣ ಇಲ್ಲ ರಾಜೀನಾಮೆ ನೀಡುವುದೇ ಸೂಕ್ತ ಎಂದಿದ್ದಾರೆ. ಬೇಳೂರು ಗೋಪಾಲಕೃಷ್ಣ ಕೂಡ ಇದೇ ಮಾತು ಹೇಳಿದ್ದಾರೆ. ಹಲವರು ಒಳಗೊಳಗೆ ಅಭಿವೃದ್ಧಿ ಆಗುತ್ತಿಲ್ಲ ಎಂದು ಕುದಿಯುತ್ತಿದ್ದಾರೆ.
ಸರ್ಕಾರದ ಪ್ರಮುಖ ಖಾತೆ ನಿಭಾಯಿಸುತ್ತಿರುವ ಗೃಹ ಸಚಿವ ಡಾ. ಜಿ. ಪರಮೇಶ್ವರ್ ಬಹಿರಂಗವಾಗಿಯೇ ಸರ್ಕಾರದ ಬಳಿ ದುಡ್ಡಿಲ್ಲ ಅಂತಾ ಹೇಳಿದ್ದಾರೆ. ಇದನ್ನು ವಿರೋಧ ಪಕ್ಷಗಳು ಎಷ್ಟೇ ವಿರೋಧಿಸಲಿ ಅದು ಕೂಡ ರಾಜಕೀಯವೇ. ಅದಕ್ಕೆ ಕಾಂಗ್ರೆಸ್ ಏನೇ ಸಮಜಾಯಿಸಿ ನೀಡಲಿ ಅದು ಕೂಡ ರಾಜಕೀಯವೇ.
ಆದರೆ, ಪ್ರಜ್ಞಾವಂತ ನಾಗರಿಕ ಮಾತ್ರ ಇದನ್ನು ಪರಾಮರ್ಶಿಸಲೇಬೇಕು. ಸರ್ಕಾರ ದಿವಾಳಿಯಾದರೆ, ನಾವೆಲ್ಲ ದಿವಾಳಿಯಾದಂತೆ. ಕರುನಾಡು ದಿವಾಳಿಯಾದಂತೆ. ಕರುನಾಡು ಹಿಂದುಳಿದಂತೆ..ಏನಂತೀರಿ? ಇಲ್ಲಿ ಮತದಾರ ಪ್ರಜ್ಞೆ ಮೆರೆಯಲೇಬೇಕು..ಕರುನಾಡು ಅಭಿವೃದ್ಧಿಯ ನಾಡಾಗಲೇ ಎಂಬುವುದು ಕರ್ನಾಟಕ ನ್ಯೂಸ್ ಬೀಟ್ ಆಶಯ.