ನವದೆಹಲಿ: ಅಹಮದಾಬಾದ್ನ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ಜೂನ್ 3ರಂದು ನಡೆದ 2025ರ ಇಂಡಿಯನ್ ಪ್ರೀಮಿಯರ್ ಲೀಗ್ (IPL 2025) ಫೈನಲ್ನಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು 6 ರನ್ಗಳಿಂದ ಮಣಿಸಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಮ್ಮ ಚೊಚ್ಚಲ ಟ್ರೋಫಿಯನ್ನು ಎತ್ತಿ ಹಿಡಿದಿದೆ. ಈ ಐತಿಹಾಸಿಕ ಗೆಲುವಿನ ನಡುವೆ, ಆರ್ಸಿಬಿಯ ಮಾಜಿ ಮಾಲೀಕ ವಿಜಯ್ ಮಲ್ಯ ಅವರು ತಂಡಕ್ಕೆ ಕಪ್ ಗೆಲ್ಲಿಸಿಕೊಡಬಲ್ಲ ತಮ್ಮ ಕನಸಿನ ನಾಲ್ವರು ಆಟಗಾರರನ್ನು ಆಯ್ಕೆ ಮಾಡಿರುವ ಸಂದರ್ಶನವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ವಿಜಯ್ ಮಲ್ಯ ಅವರು ತಮ್ಮ ಕನಸಿನ ಆರ್ಸಿಬಿ ತಂಡದಲ್ಲಿ ಮುಂಬೈ ಇಂಡಿಯನ್ಸ್ನ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ, ಮಿಸ್ಟರ್ 360 ಡಿಗ್ರಿ ಖ್ಯಾತಿಯ ಸೂರ್ಯಕುಮಾರ್ ಯಾದವ್, ಕನ್ನಡಿಗ ಕೆ.ಎಲ್. ರಾಹುಲ್ ಹಾಗೂ ಲಖನೌ ಸೂಪರ್ ಜಯಂಟ್ಸ್ ತಂಡದ ನಾ ರಿಷಭ್ ಪಂತ್ ಇರಬೇಕಿತ್ತು ಎಂದು ಇತ್ತೀಚಿನ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.
ವಿಜಯ್ ಮಲ್ಯ ಅವರ ಕನಸಿನ ಆರ್ಸಿಬಿ ತಂಡ
ರಾಜ್ ಶಮಾನಿ ಅವರ ಯೂಟ್ಯೂಬ್ ಚಾನೆಲ್ಗೆ ನೀಡಿದ ಸಂದರ್ಶನದಲ್ಲಿ ಆರ್ಸಿಬಿ ಮಾಜಿ ಮಾಲೀಕ ವಿಜಯ್ ಮಲ್ಯ ತಮ್ಮ ಕನಸಿನ ತಂಡದ ಕುರಿತು ಕುತೂಹಲಕಾರಿ ಹೇಳಿಕೆಗಳನ್ನು ನೀಡಿದ್ದಾರೆ.
“ನನ್ನ ಕನಸು ನನಸಾಗಿದ್ದರೆ, ನಾನು ಖಂಡಿತವಾಗಿಯೂ ಜಸ್ಪ್ರೀತ್ ಬುಮ್ರಾ, ಸೂರ್ಯಕುಮಾರ್ ಯಾದವ್, ಕೆ.ಎಲ್. ರಾಹುಲ್ ಮತ್ತು ರಿಷಭ್ ಪಂತ್ ಅವರನ್ನು ಆರ್ಸಿಬಿ ತಂಡಕ್ಕೆ ಕರೆತರುತ್ತಿದ್ದೆ. ಈ ನಾಲ್ವರು ಆಟಗಾರರು ತಂಡದಲ್ಲಿ ಇದ್ದಿದ್ದರೆ, ಟ್ರೋಫಿ ಗೆಲ್ಲಲು ನಾನು ಬೇರೆ ಯಾವುದೇ ಆಟಗಾರರ ಕಡೆ ಗಮನಹರಿಸುತ್ತಿರಲಿಲ್ಲ,” ಎಂದು ವಿಜಯ್ ಮಲ್ಯ ಹೇಳಿದ್ದಾರೆ.
ಕನ್ನಡಿಗ ಕೆ.ಎಲ್. ರಾಹುಲ್ 2016ರ ಐಪಿಎಲ್ ಟೂರ್ನಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ ಆಡಿದ್ದರು. ಆದರೆ, ವಿಜಯ್ ಮಲ್ಯ ಹೆಸರಿಸಿರುವ ಉಳಿದ ಆಟಗಾರರು ಆರ್ಸಿಬಿ ತಂಡದ ಪರ ಇದುವರೆಗೂ ಯಾವುದೇ ಆವೃತ್ತಿಯಲ್ಲಿ ಆಡಿಲ್ಲ. ಜಸ್ಪ್ರೀತ್ ಬುಮ್ರಾ ಮುಂಬೈ ಇಂಡಿಯನ್ಸ್ ತಂಡವನ್ನು ಸೇರಿಕೊಂಡ ನಂತರ, ಆ ತಂಡದ ಮಾಲೀಕರು ಅವರನ್ನು ಎಂದಿಗೂ ಹರಾಜು ಪ್ರಕ್ರಿಯೆಗೆ ಬಿಟ್ಟುಕೊಟ್ಟಿಲ್ಲ.
2025ರ ಐಪಿಎಲ್ ಟೂರ್ನಿಯ ಮೆಗಾ ಹರಾಜಿಗೂ ಮುನ್ನವೇ ಸ್ಫೋಟಕ ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಅವರನ್ನು ಮುಂಬೈ ಫ್ರಾಂಚೈಸಿ ತಂಡದಲ್ಲೇ ಉಳಿಸಿಕೊಂಡಿತ್ತು. ಇನ್ನು ಐಪಿಎಲ್ ಇತಿಹಾಸದಲ್ಲೇ ದಾಖಲೆ ಮೊತ್ತ (27.5 ಕೋಟಿ ರೂ.)ಕ್ಕೆ ಖರೀದಿಯಾದ ರಿಷಭ್ ಪಂತ್, ಲಖನೌ ಸೂಪರ್ ಜಯಂಟ್ಸ್ ತಂಡವನ್ನು ಯಶಸ್ವಿಯಾಗಿ ಮುನ್ನಡೆಸಿದರು. ಆದರೆ ಕನ್ನಡಿಗ ಕೆ.ಎಲ್. ರಾಹುಲ್ 14 ಕೋಟಿ ರೂ.ಗೆ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಸೇರಿಕೊಂಡಿದ್ದರು.
ಟ್ರೋಫಿ ಗೆಲ್ಲುವ ಮಲ್ಯರ ಕನಸು
2008ರ ಐಪಿಎಲ್ ಟೂರ್ನಿಯ ಚೊಚ್ಚಲ ಆವೃತ್ತಿಯ ಹರಾಜಿನಲ್ಲಿ ವಿರಾಟ್ ಕೊಹ್ಲಿಯನ್ನು ಖರೀದಿಸಿದ ಮತ್ತು ಟ್ರೋಫಿ ಗೆಲ್ಲುವ ತಮ್ಮ ಕನಸಿನ ಬಗ್ಗೆ ವಿಜಯ್ ಮಲ್ಯ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
“ಐಪಿಎಲ್ ಟೂರ್ನಿಯ ಚೊಚ್ಚಲ ಆವೃತ್ತಿಯಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಖರೀದಿಸಿದಾಗಲೇ, ಟ್ರೋಫಿಯನ್ನು ಬೆಂಗಳೂರಿಗೆ ತರಬೇಕು ಎಂಬುದು ನನ್ನ ಕನಸಾಗಿತ್ತು,” ಎಂದು ಮದ್ಯದ ದೊರೆ ವಿಜಯ್ ಮಲ್ಯ ಹೇಳಿದ್ದಾರೆ.
“ಮೆಗಾ ಹರಾಜಿನಲ್ಲಿ ಯುವಕನಾಗಿದ್ದ, ಆದರೆ ಈಗ ದಿಗ್ಗಜ ಆಟಗಾರನಾಗಿರುವ ವಿರಾಟ್ ಕೊಹ್ಲಿಯನ್ನು ಖರೀದಿಸಿದ್ದು ನನಗೆ ಹೆಮ್ಮೆಯ ಭಾವನೆ ಮೂಡಿಸಿತ್ತು. ಅದಕ್ಕೆ ತಕ್ಕಂತೆ ಅವರು ಕಳೆದ 18 ವರ್ಷಗಳಿಂದಲೂ ತಂಡಕ್ಕೆ ನಿಷ್ಠರಾಗಿ ಉಳಿದಿದ್ದಾರೆ,” ಎಂದು ಅವರು ತಿಳಿಸಿದ್ದಾರೆ.