“ಬೆಂಗಳೂರು ನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ನಕಲಿ ದಾಖಲೆಗಳನ್ನು ಬಳಸಿ ನೆಲೆಯೂರಿರುವ ಅಕ್ರಮ ಬಾಂಗ್ಲಾ ನುಸುಳುಕೋರರ ವಿರುದ್ಧ ಕೂಡಲೇ ಕ್ರಮ ತೆಗೆದುಕೊಂಡು, ಅವರನ್ನು ಅವರ ಮಾತೃ ದೇಶಕ್ಕೆ ಮರಳಿ ಕಳುಹಿಸಬೇಕೆಂದು ಬಿಬಿಎಂಪಿ ಆಡಳಿತ ಪಕ್ಷದ ನಾಯಕ, ಬಿಜೆಪಿ ನಾಯಕ ರಮೇಶ್ ಎನ್. ಆರ್ ಆಗ್ರಹಿಸಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರುವ ಅವರು, ಬೆಂಗಳೂರಿನ ಮಹಾನಗರದ ಮಹದೇವಪುರ, ಕೆ. ಆರ್. ಪುರಂ ಮತ್ತು ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರಗಳ ವ್ಯಾಪ್ತಿಗೆ ಒಳಪಡುವಂತಹ ಮಾರತ್ತಹಳ್ಳಿ ಜಂಕ್ಷನ್, ಕೆ. ಆರ್. ಪುರಂ ಕೆರೆ, ಜಕ್ಕಸಂದ್ರ ಜಂಕ್ಷನ್, ಕುಂದಲಹಳ್ಳಿ ಗೇಟ್, ಮುನ್ನೇಕೊಳಲು, ಕಾಡುಬೀಸನಹಳ್ಳಿ, ದೇವರ ಬೀಸನಹಳ್ಳಿ, ಹುಳಿಮಾವು ಮತ್ತು ಚಿಕ್ಕ ಬೇಗೂರು ಪ್ರದೇಶಗಳಲ್ಲಿ ಕಳೆದ 13 ವರ್ಷಗಳಿಂದಲೂ ಸುಮಾರು 50 ಸಾವಿರಕ್ಕೂ ಅಧಿಕ ಅಕ್ರಮ ಬಾಂಗ್ಲಾ ನುಸುಳುಕೋರರು ನಕಲಿ ದಾಖಲೆಗಳನ್ನು ಬಳಸಿ ವಾಸ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಬೆಂಗಳೂರು ಮಹಾನಗರ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲದೇ, ಚಿಕ್ಕಮಗಳೂರು ಮತ್ತು ಕೊಡಗು ಜಿಲ್ಲೆಗಳ ಬಹುತೇಕ ಕಾಫಿ ಎಸ್ಟೇಟ್ ಗಳಲ್ಲಿ ದೇಶದ್ರೋಹಿ ಮಧ್ಯವರ್ತಿಗಳು ಕೇವಲ ಕಮಿಷನ್ ಹಣದ ಆಸೆಗಾಗಿ ಇದೇ ಅಕ್ರಮ ಬಾಂಗ್ಲಾ ನುಸುಳುಕೋರರನ್ನು ಕಾರ್ಮಿಕರನ್ನಾಗಿ ನಿಯೋಜಿಸಿರುವುದೂ ಸಹ ಅತ್ಯಂತ ಸ್ಪಷ್ಟವಾಗಿರುತ್ತದೆ ಎಂದಿದ್ದಾರೆ.
ಭಾರತೀಯ ನಾಗರಿಕರಿಗೆ ಮಾತ್ರ ಸಿಗಬೇಕಿರುವ ಮೂಲಭೂತ ಸೌಕರ್ಯಗಳಾದ ಪಡಿತರ ಚೀಟಿ, ಮತದಾರರ ಚೀಟಿ ಮತ್ತು ಆಧಾರ್ ಕಾರ್ಡ್ ಸೌಲಭ್ಯಗಳನ್ನು ಕೆಲವು ಮಂದಿ ದೇಶದ್ರೋಹಿಗಳು ಅಕ್ರಮ ಬಾಂಗ್ಲಾ ನುಸುಳುಕೋರರಿಗೆ ದೊರಕಿಸಿಕೊಡುವ ಮೂಲಕ ದೇಶದ ಆಂತರಿಕ ಭದ್ರತೆಯ ವಿಷಯದಲ್ಲಿ ಘನಘೋರ ಅಪರಾಧ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.