ಬೆಂಗಳೂರು: ನಗರದಲ್ಲಿ ನಾಗರಿಕರಿಗೆ ಸುರಕ್ಷತೆ ಮತ್ತು ನಡೆಯಲು ಅನುಕೂಲಕರವಾಗುವಂತೆ, ಪಾದಚಾರಿ ಮಾರ್ಗ ಒತ್ತುವರಿಯಾಗಿರುವುದನ್ನು ಗುರುತಿಸಿ ತೆರವು ಕಾರ್ಯ ನಡೆಸುವಂತೆ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಬಿಬಿಎಂಪಿ ವ್ಯಾಪ್ತಿಯಲ್ಲಿ ನಾಗರಿಕರಿಗೆ ಸುಸಜ್ಜಿತ ಹಾಗೂ ಅನುಕೂಲಕರವಾದ ಪಾದಾಚಾರಿ ಮಾರ್ಗ ನಿರ್ಮಿಸುವ ಸಲುವಾಗಿ ಅವರು ಇಂದು ಮಹದೇವಪುರ ವಲಯದ ಸೀತಾರಾಂಪಾಳ್ಯ ಮೆಟ್ರೋ ನಿಲ್ದಾಣದಿಂದ ಬಿಇಎಂಎಲ್ ಲೇಔಟ್ ಮೇನ್ ರೋಡ್ ವರೆಗೆ ಪಾದಾಚಾರಿ ಮಾರ್ಗಗಳನ್ನು ಪರಿಶೀಲನೆ ನಡೆಸಿ ಅಗತ್ಯ ಸೂಚನೆಗಳನ್ನು ನೀಡಿದರು.
ರಸ್ತೆಗೆ ಮರ ಬಾಗಿಕೊಂಡಿರುವುದರಿಂದ ಪಾದಚಾರಿಗಳ ಸಂಚಾರಕ್ಕೆ ತೊಂದರೆಯಾಗುತ್ತಿದ್ದು, ಬೀಳುವ ಹಂತದಲ್ಲಿರುವುದರಿಂದ ಕೂಡಲೇ ಮರವನ್ನು ತೆರವುಗೊಳಿಸಲು ಸೂಚಿಸಿದರು. ಇದೇ ರೀತಿ ಬೇರೆ ಅಪಾಯಕಾರಿ, ಒಣಗಿದ ಮರ ರೆಂಬೆ ಕೊಂಬೆ ತೆರವುಗೊಳಿಸಲು ಸೂಚಿಸಿದರು.
ಬ್ರಿಗೇಡ್ ಟೆಕ್ ಗಾರ್ಡನ್ ಸಂಸ್ಥೆಯವರು ಪಾದಚಾರಿಗೆ ಅಡ್ಡಲಾಗಿ ಕರ್ಬ್ ಗಳನ್ನು ಅಳವಡಿಸಿದ್ದು, ಇದರಿಂದ ಪಾದಚಾರಿಗಳಿಗೆ ತೊಂದರೆಯಾಗುತ್ತಿದ್ದು, ಕೂಡಲೇ ತೆರವುಗೊಳಿಸಿ ಸಮತಟ್ಟಾಗಿ ಪಾದಚಾರಿ ನಿರ್ಮಿಸಲು ಸೂಚಿಸಿದರು.
ಐ.ಟಿ.ಪಿ.ಎಲ್. ಮುಖ್ಯ ರಸ್ತೆಯಲ್ಲಿರುವ ಶಿವಶಕ್ತಿ ಬಾರ್ ನವರು ಮಧ್ಯದ ಬಾಟಲ್ ಹಾಗೂ ಪ್ಲಾಸ್ಟಿಕ್ ಬಾಟಲ್ ಗಳನ್ನು ರಸ್ತೆಗೆ ಎಸೆದಿದ್ದು, ಅದನ್ನು ತೆರವುಗೊಳಿಸಲು ಹಾಗೂ ಬಾರ್ ನವರಿಗೆ ದಂಡ ವಿಧಿಸಲು ಸೂಚಿಸಿದರು.
ಗ್ರಾಫೈಟ್ ಇಂಡಿಯಾ ಮುಖ್ಯ ರಸ್ತೆಯಲ್ಲಿನ ರಾಯಲ್ ಬಿಲ್ಡಿಂಗ್ ಹೌಸ್ ಅಂಗಡಿಯವರು ತ್ಯಾಜ್ಯವನ್ನು ಪಾದಚಾರಿಗೆ ಹಾಕಿದ್ದು, ಇದರಿಂದ ಪಾದಚಾರಿ ಸಂಚಾರಕ್ಕೆ ಅಡಚಣೆಯಾಗಿದ್ದು, ಅದನ್ನು ತೆರವುಗೊಳಿಸಲು ಹಾಗೂ ಅವರಿಗೆ ದಂಡ ವಿಧಿಸಲು ಸೂಚಿಸಿದರು. ಇದೇ ರೀತಿ ಪಾದಚಾರಿ ಮೇಲೆ ಹಾಗೂ ರಸ್ತೆ ಮೇಲೆ ತ್ಯಾಜ್ಯ ಹಾಕುವವರಿಗೆ ದಂಡ ವಿಧಿಸಲು ಸೂಚಿಸಿದರು.
ರಸ್ತೆಗೆ ಅಡ್ಡಲಾಗಿ ಕಾಂಕ್ರೀಟ್ ಮಿಡಿಯನ್ ಬ್ಯಾರಿಯರ್ ಗಳನ್ನು ಹಾಕಿದ್ದರಿಂದ ಸಂಚಾರಕ್ಕೆ ಅಡಚಣೆಯಾಗುತ್ತಿರುವುದ ಜೊತೆಗೆ ರಸ್ತೆಯಲ್ಲಿ ವಾಹನಗಳನ್ನು ಅನಧಿಕೃತವಾಗಿ ಪಾರ್ಕಿಂಗ್ ಮಾಡಲಾಗುತ್ತಿದೆ. ಕೂಡಲೇ ಅವುಗಳನ್ನು ತೆರವುಗೊಳಿಸಲು ಸೂಚಿಸಿದರು.