ವಿಜಯವಾಡ: ತಿರುಪತಿ ಪ್ರಸಾದ ತಯಾರಿಕೆಯಲ್ಲಿ ಪ್ರಾಣಿಗಳ ಕೊಬ್ಬು ಬಳಕೆ ಮಾಡಲಾಗುತ್ತಿದೆ ಎಂದು ಆಂಧ್ರಪ್ರದೇಶ ಸಿಎಂ ಚಂದ್ರಬಾಬು ನಾಯ್ಡು ಧ್ವನಿ ಎತ್ತಿದ್ದರು. ಆದರೆ, ಲ್ಯಾಬ್ ವರದಿಯಲ್ಲಿ ಕೂಡ ಪ್ರಾಣಿಗಳ ಕೊಬ್ಬು ಇರುವುದು ಖಚಿತವಾಗಿದೆ.
ಈ ವಿಷಯವಾಗಿ ಪ್ರತಿಕ್ರಿಯೆ ನೀಡಿರುವ ಸಿಎಂ ಚಂದ್ರಬಾಬು ನಾಯ್ಡು ತಮ್ಮ ಸಿಎಂ ಕಾರ್ಯಭಾರ ತಿರುಮಲದಿಂದಲೇ ಆರಂಭವಾಗಿದೆ. ಲಡ್ಡು ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಬೆರೆಸುತ್ತಿರುವ ವಿಚಾರವನ್ನು ಬಹಿರಂಗಪಡಿಸಲು ಭಗವಂತನೇ ನನಗೆ ಪ್ರೇರಣೆ ನೀಡಿದ್ದರು. ನಾನು ಕೇವಲ ನಿಮಿತ್ತ ಮಾತ್ರ ದೇವರೇ ಎಲ್ಲವನ್ನೂ ಮಾಡುತ್ತಿದ್ದಾರೆ ಎಂದು ಹೇಳಿದ್ದಾರೆ.
ಅಲ್ಲದೇ, ತಿರುಪತಿ ತಿರುಮಲ ದೇವಸ್ಥಾನ ಮಂಡಳಿ (ಟಿಟಿಡಿ)ಗೆ ನೂತನ ಕಾರ್ಯ ನಿರ್ವಾಹಕ ಅಧಿಕಾರಿಯನ್ನು ಶನಿವಾರ ನೇಮಕ ಮಾಡಲಾಗಿದೆ. ಈ ವೇಳೆ ತಿರುಪತಿಗೆ ಸರಬರಾಜಾಗುವ ಹಲವು ವಸ್ತುಗಳನ್ನ ಸರಬರಾಜುದಾರರನ್ನು ಕಪ್ಪು ಪಟ್ಟಿಗೆ ಸೇರಿಸಲು ತೀರ್ಮಾನಿಸಿದ್ದಾರೆ. ಟಿಟಿಡಿ ನೂತನ ಸಿಇಒಗೆ ತಾವು ನಿರ್ದೇಶನಗಳನ್ನು ನೀಡಿದ್ದು, ದೇಗುಲದ ಪಾವಿತ್ರ್ಯ ಕಾಪಾಡಲು ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದ್ದೇನೆ. ಈ ಘಟನೆಯ ಹಿಂದೆ ವೈಎಸ್ ಆರ್ ಸಿಪಿ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ದೇವಾಲಯದ ಪಾವಿತ್ರ್ಯತೆ ಕಾಪಾಡಬೇಕು. ಕೋಟ್ಯಂತರ ಭಕ್ತರ ಭಾವನೆಗಳಿಗೆ ಧಕ್ಕೆ ತರಬಾರದು. ಭಕ್ತರ ಭಾವನೆಗಳ ಜೊತೆಗೆ ಯಾರೊಬ್ಬರೂ ಆಟವಾಡಬಾರದು. ಸಂಪ್ರದಾಯಗಳು, ಧಾರ್ಮಿಕ ಆಚರಣೆಗಳ ವಿಚಾರದಲ್ಲಿ ಮೂಗು ತೂರಿಸಬಾರದು ಎಂದು ಹೇಳಿದ್ದಾರೆ.
ಎನ್ಡಿಎ ಸರ್ಕಾರವು ತಿರುಪತಿ ದೇಗುಲದ ಪಾವಿತ್ರ್ಯತೆ ಹಾಗೂ ಭಕ್ತರ ಭಾವನೆಗಳಿಗೆ ಬೆಲೆ ಕೊಡುತ್ತದೆ. ಇವುಗಳ ಮಹತ್ವ ನಮಗೆ ಗೊತ್ತಿದೆ. ಪ್ರತಿಯೊಂದು ಧರ್ಮವೂ ತನ್ನದೇ ಆದ ಸಂಪ್ರದಾಯ ಹೊಂದಿರುತ್ತದೆ. ಅದನ್ನು ರಕ್ಷಿಸಬೇಕು ಎಂದು ಹೇಳಿದ್ದಾರೆ.


















