ಲಖನೌ: ಕರ್ನಾಟಕ ಸೇರಿ ದೇಶದ ಬಹುತೇಕ ರಾಜ್ಯಗಳಲ್ಲಿ ಇತ್ತೀಚೆಗೆ ಪತ್ನಿಯ ಕಿರುಕುಳ ತಾಳದೆ ಪತಿ ಆತ್ಮಹತ್ಯೆ ಮಾಡಿಕೊಳ್ಳುವ ಪ್ರಕರಣಗಳು ಜಾಸ್ತಿಯಾಗುತ್ತಿವೆ. ಇದಕ್ಕೆನಿದರ್ಶನ ಎಂಬಂತೆ, ಉತ್ತರ ಪ್ರದೇಶದ ಟೆಕ್ಕಿಯೊಬ್ಬರು ಪತ್ನಿಯ ಕಿರುಕುಳ ತಾಳದೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ನೇಣಿಗೆ ಕೊರಳೊಡ್ಡುವ ಮೊದಲು ವೀಡಿಯೋ ಮಾಡಿರುವ ಅವರು, “ಪುರುಷರಿಗಾಗಿಯೂ ಕಾನೂನು ಇದ್ದರೆ ನಾನು ಆತ್ಮಹತ್ಯೆ ಮಾಡಿಕೊಳ್ಳುವ ಪರಿಸ್ಥಿತಿ ಬರುತ್ತಿರಲಿಲ್ಲ” ಎಂದಿದ್ದಾರೆ.
ಉತ್ತರ ಪ್ರದೇಶದ ಔರೈಯಾ ಜಿಲ್ಲೆಯ ನಿವಾಸಿಯಾಗಿರುವ ಮೋಹಿತ್ ಕುಮಾರ್ ಅವರು ನೊಯ್ಡಾದ ಹೋಟೆಲ್ ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. “ಪತ್ನಿಯ ಕಿರುಕುಳದಿಂದಾಗಿ ನಾನು ಬೇಸತ್ತಿದ್ದೇನೆ. ಹಾಗಾಗಿ, ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿನ ನಂತರವೂ ನನಗೆ ನ್ಯಾಯ ಸಿಗದಿದ್ದರೆ, ನನ್ನ ಚಿತಾಭಸ್ಮವನ್ನು ಚರಂಡಿಗೆ ಎಸೆದುಬಿಡಿ” ಎಂದು ವೀಡಿಯೋದಲ್ಲಿ ತಿಳಿಸಿದ್ದಾರೆ.
“ನನ್ನ ಪತ್ನಿ ಹಾಗೂ ಆಕೆಯ ಕುಟುಂಬಸ್ಥರು ನನ್ನ ಮೇಲೆ ಮಾನಸಿಕ ಒತ್ತಡ ಹೇರುತ್ತಿದ್ದಾರೆ. ನನಗೆ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ. ಇದರಿಂದಾಗಿ ನನಗೆ ಸಾಕಾಗಿ ಹೋಗಿದೆ. ಈ ವೀಡಿಯೋವನ್ನು ನೀವು ನೋಡುವ ವೇಳೆಗೆ ನಾನು ಇಹಲೋಕ ಬಿಟ್ಟು ಹೋಗಿರುತ್ತೇನೆ. ಪುರುಷರ ಪರವಾಗಿಯೂ ಕಾನೂನುಗಳು ಇದ್ದಿದ್ದರೆ ನಾನು ಹೀಗೆ ಮಾಡುತ್ತಿರಲಿಲ್ಲವೇನೋ” ಎಂದು ಹತಾಶನಾಗಿ ಹೇಳಿದ್ದಾರೆ.
ಮೋಹಿತ್ ಕುಮಾರ್ ಹಾಗೂ ಪ್ರಿಯಾ ಯಾದವ್ ಅವರು ಪ್ರೀತಿಸಿ ಮದುವೆಯಾಗಿದ್ದರು. ಏಳು ವರ್ಷ ಪ್ರೀತಿಸಿದ ಬಳಿಕ ಇಬ್ಬರೂ ಮದುವೆಯಾಗಿದ್ದರು. ಆದರೆ, ಪ್ರಿಯಾ, ಅವರ ತಾಯಿ ಹಾಗೂ ಸಹೋದರನ ವಿರುದ್ಧ ಮೋಹಿತ್ ಕುಮಾರ್ ಆರೋಪಿಸಿದ್ದಾರೆ. “ನನ್ನೆಲ್ಲಾ ಆಸ್ತಿಯನ್ನು ತನ್ನ ಹೆಸರಿಗೆ ಬರೆಸಬೇಕು ಎಂದು ಪ್ರಿಯಾ ಒತ್ತಾಯಿಸಿದಳು. ತಾಯಿ ಹಾಗೂ ಸಹೋದರನ ಮಾತು ಕೇಳಿಕೊಂಡು ಮಾನಸಿಕ ಕಿರುಕುಳ ನೀಡಿದಳು. ವರದಕ್ಷಿಣೆ ಕೇಸ್ ಹಾಕುವುದಾಗಿಯೂ ಬೆದರಿಕೆ ಒಡ್ಡಿದ್ದರು” ಎಂದು ಮೋಹಿತ್ ದೂರಿದ್ದಾರೆ.