ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ನಡೆದ ಧರ್ಮ ಸಮಾವೇಶದಲ್ಲಿ ರಂಭಾಪುರಿ ಜಗದ್ಗುರುಗಳ ನುಡಿ
ಧಾರವಾಡ : ಎಲ್ಲಾ ವೈರುಧ್ಯಗಳನ್ನು ಮರೆತು ಕೂಡಿ ಬಾಳಲು ಪ್ರಯತ್ನಿಸಬೇಕೆಂದು ಭಾರತೀಯ ಸಕಲ ಧರ್ಮ ಸಿದ್ಧಾಂತಗಳು ಬಯಸುತ್ತವೆ. ಆಗ ಅಂಕುರಿಸುವ ಭಾವೈಕ್ಯದ ಬದುಕಿನಿಂದ ಮನುಕುಲಕ್ಕೆ ನೆಮ್ಮದಿ ಸಾಧ್ಯವಾಗುತ್ತದೆ ಎಂದು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಅವರು ತಾಲೂಕಿನ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಮಂಗಳವಾರ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮ ಚಿಂತನ ಸಮಾವೇಶವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು. ಧರ್ಮ ಮತ್ತು ಸಮಾಜ ಛಿದ್ರವಾಗಲು ಯಾರೂ ಅವಕಾಶ ಕೊಡಬಾರದು. ಸಕಲ ಜೀವಾತ್ಮರಿಗೂ ಲೇಸನ್ನೇ ಬಯಸಿದ ವೀರಶೈವ ಧರ್ಮದ ವಿಶಾಲ ವಿಚಾರಗಳನ್ನು ಅರ್ಥ ಮಾಡಿಕೊಂಡಾಗ ಎಲ್ಲಿಯೂ ದ್ವಂದ್ವಗಳು ಹುಟ್ಟಿಕೊಳ್ಳುವದಿಲ್ಲ ಎಂದರು.
ಬಸವ ಪೂರ್ವ ಯುಗ : ರಂಭಾಪುರಿ ಪೀಠದ ಶಾಖಾಮಠವಾಗಿರುವ ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಪ್ರಾಚೀನತೆ ಬಸವ ಪೂರ್ವ ಯುಗಕ್ಕೆ ಸೇರಿದ್ದಾಗಿದೆ. ಈ ನಿಟ್ಟಿನಲ್ಲಿ ವೀರಶೈವ ಧರ್ಮದ ಚಾರಿತ್ರಿಕ ಘನತೆ ಎದ್ದುಕಾಣುತ್ತದೆ. ಇಂತಹ ಎಲ್ಲ ಸಪ್ರಮಾಣ ಸಂಗತಿಗಳನ್ನು ಮರೆಮಾಚಲು ನಡೆದಿರುವ ವ್ಯವಸ್ಥಿತ ಪ್ರಯತ್ನಗಳ ವಿಚಾರಗಳನ್ನು ಯಾರೂ ಸ್ವೀಕರಿಸಬಾರದು ಎಂದೂ ರಂಭಾಪುರಿ ಜಗದ್ಗುರುಗಳು ಸ್ಪಷ್ಟಪಡಿಸಿದರು.
ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದ ಅಭಿನವ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಮಾತನಾಡಿ, ತಮ್ಮ ಎಲ್ಲಾ ಕಾರ್ಯಗಳ ಯಶಸ್ಸಿಗೆ ಅಮ್ಮಿನಬಾವಿ, ಮರೇವಾಡ, ಕರಡಿಗುಡ್ಡ, ತಿಮ್ಮಾಪೂರ, ಕೌಲಗೇರಿ ಗ್ರಾಮಗಳ ಸಕಲ ಸದ್ಭಕ್ತರ ಸಹಕಾರ ಮತ್ತು ರಂಭಾಪುರಿ ಜಗದ್ಗುರುಗಳ ಆಶೀರ್ವಾದವೇ ಕಾರಣವಾಗಿದೆ ಎಂದರು.
ನೊಣವಿನಕೆರೆ ಸೋಮೇಕಟ್ಟೆ ಕಾಡಸಿದ್ಧೇಶ್ವರಮಠದ ಶ್ರೀಅಭಿನವ ಕಾಡಸಿದ್ಧೇಶ್ವರ ಸ್ವಾಮೀಜಿ, ಮಹಾರಾಷ್ಟ್ರ ನಾಗಣಸೂರ ವಿರಕ್ತಮಠದ ಡಾ. ಅಭಿನವ ಬಸವಲಿಂಗ ಸ್ವಾಮೀಜಿ, ಕಲಬುರ್ಗಿ ಬೆಳಗುಂಪಾ ಬೃಹನ್ಮಠದ ಶ್ರೀಅಭಿನವ ಪರ್ವತೇಶ್ವರ ಶಿವಾಚಾರ್ಯ ಸ್ವಾಮೀಜಿ ಹಾಗೂ ಬ್ಯಾಹಟ್ಟಿ ಹಿರೇಮಠದ ಡಾ. ಸತೀಶ ಗುರೂಜಿ, ಗುರುಮೂರ್ತಿ ಯರಗಂಬಳಿಮಠ ಮಾತನಾಡಿದರು.
ಅಮ್ಮಿನಬಾವಿ ಪಂಚಗೃಹ ಹಿರೇಮಠದ ಶಾಂತಲಿಂಗ ಶಿವಾಚಾರ್ಯ ಸ್ವಾಮೀಜಿ ಅಧ್ಯಕ್ಷತೆವಹಿಸಿದ್ದರು. ಸತ್ತಿಗೇರಿ ಹಿರೇಮಠದ ಶ್ರೀಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಹೆಗಡಳ್ಳಿ ಹಿರೇಮಠದ ಶ್ರೀಷಡ್ಭಾವ ರಹಿತೇಶ್ವರ ಶಿವಾಚಾರ್ಯ ಸ್ವಾಮೀಜಿ, ಕಲಘಟಗಿ ಹನ್ನೆರಡುಮಠದ ಶ್ರೀಅಭಿನವ ಮಡಿವಾಳ ಶಿವಾಚಾರ್ಯ ಸ್ವಾಮೀಜಿ, ಮೊರಬ ಜಡಿಮಠದ ಶ್ರೀಅಭಿನವ ಮಹೇಶ್ವರ ಶಿವಾಚಾರ್ಯ ಸ್ವಾಮೀಜಿ, ಹುಣಸಿಕಟ್ಟಿ ಹಿರೇಮಠದ ಶ್ರೀಬಸವರಾಜ ದೇವರು ಸಮಾವೇಶದಲ್ಲಿ ಪಾಲ್ಗೊಂಡಿದ್ದರು.
ಧಾಮುಲ್ ನಿರ್ದೇಶಕಿ ಶಿವಲೀಲಾ ವಿನಯ ಕುಲಕರ್ಣಿ, ಕಾಂಗ್ರೆಸ್ ಮುಖಂಡರುಗಳಾದ ಈಶ್ವರ ಶಿವಳ್ಳಿ, ಅರವಿಂದ ಏಗನಗೌಡರ, ಸಾಮಾಜಿಕ ಕಾರ್ಯಕರ್ತ ಮಂಜುನಾಥ ಮಕ್ಕಳಗೇರಿ, ಅಮ್ಮಿನಬಾವಿ ಗ್ರಾ.ಪಂ. ಅಧ್ಯಕ್ಷೆ ನೀಲವ್ವ ತಿದಿ, ಸದಸ್ಯೆ ಪದ್ಮಾವತಿ ದೇಸಾಯಿ, ಕಾಮಣಿ ವೈದ್ಯ ಡಾ. ನಿತಿನ್ಚಂದ್ರ ಹತ್ತಿಕಾಳ, ವಿದ್ಯಾಚೇತನ ಶಿಕ್ಷಣ ಸಂಸ್ಥೆ ಕಾರ್ಯದರ್ಶಿ ಸಂಗಯ್ಯ ಹಿರೇಮಠ, ವಕೀಲ ಶಕ್ತಿ ಹಿರೇಮಠ, ಶಿಕ್ಷಕ ಟಿ.ಎಂ.ದೇಸಾಯಿ, ಶಶಿಧರಶಾಸ್ತ್ರೀ ಹಿರೇಮಠ ಡೋಣಿ, ವೀರೇಶಕುಮಾರ ಮಳಲಿ, ಸಿದ್ಧರಾಮ ಬ್ಯಾಕೋಡ ಸಿಂದಗಿ ಅವರನ್ನು ಗೌರವಿಸಲಾಯಿತು. ಬಿ.ಸಿ.ಕೊಳ್ಳಿ ಸ್ವಾಗತಿಸಿದರು. ಸಿಂಚನಾ ಶಂಕರ ಯಡಳ್ಳಿ ಭರತನಾಟ್ಯ ಪ್ರದರ್ಶನ ನೀಡಿದರು. ನಂತರ ದಾಸೋಹ ಸೇವೆಯಲ್ಲಿ ಅನ್ನಸಂತರ್ಪಣೆ ಜರುಗಿತು.
ಫೋಟೋ ವಿವರ
ಧಾರವಾಡ ತಾಲೂಕು ಅಮ್ಮಿನಬಾವಿ ಸಂಸ್ಥಾನ ಪಂಚಗೃಹ ಹಿರೇಮಠದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಜನಜಾಗೃತಿ ಧರ್ಮ ಚಿಂತನ ಸಮಾವೇಶವನ್ನು ಬಾಳೆಹೊನ್ನೂರಿನ ರಂಭಾಪುರಿ ಪೀಠದ ಶ್ರೀಜಗದ್ಗುರು ಡಾ.ವೀರಸೋಮೇಶ್ವರ ಶಿವಾಚಾರ್ಯ ಭಗವತ್ಪಾದರು ಉದ್ಘಾಟಿಸಿದರು. ಅಮ್ಮಿನಬಾವಿ, ಬೆಳಗುಂಪಾ, ನೊಣವಿನಕೆರೆ, ಸತ್ತಿಗೇರಿ ಮಠಗಳ ಸ್ವಾಮಿಗಳು, ಶಿವಲೀಲಾ ಕುಲಕರ್ಣಿ, ಪದ್ಮಾವತಿ ದೇಸಾಯಿ, ಈಶ್ವರ ಶಿವಳ್ಳಿ, ಮಂಜುನಾಥ ಮಕ್ಕಳಗೇರಿ, ಅರವಿಂದ ಏಗನಗೌಡ್ರ, ಶಕ್ತಿ ಹಿರೇಮಠ, ಸಂಗಯ್ಯ ಹಿರೇಮಠ, ವಿಜಯಕುಮಾರ ಇಟಗಿ, ಗುರುಮೂರ್ತಿ ಯರಗಂಬಳಿಮಠ, ಶಿವಯೋಗಿ ಹಿರೇಮಠ ಇದ್ದರು.