ಬೆಂಗಳೂರು: ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರಗಳು ಬಡವರಿಗೆ ಅನುಕೂಲವಾಗಲಿ ಎಂದು ಹತ್ತಾರು ಯೋಜನೆಗಳನ್ನು ಜಾರಿಗೊಳಿಸುತ್ತವೆ. ಆದರೆ, ಹೆಚ್ಚಿನ ಯೋಜನೆಗಳ ಕುರಿತು ಜನರಿಗೆ ಮಾಹಿತಿ ಕೊರತೆ ಇರುವ ಕಾರಣ ಅವುಗಳ ಸೌಲಭ್ಯಗಳನ್ನು ಪಡೆಯಲು ಸಾಧ್ಯವಾಗುವುದಿಲ್ಲ. ಹಾಗಾಗಿ, ಜನರು ಸರ್ಕಾರಿ ಯೋಜನೆಗಳ ಬಗ್ಗೆ ತಿಳಿದುಕೊಂಡಿರಬೇಕಾಗಿರುವುದು ಅಗತ್ಯವಾಗಿದೆ. ಅಂತಹ ಯೋಜನೆಗಳ ಪೈಕಿ, ರಾಷ್ಟ್ರೀಯ ಕುಟುಂಬ ನೆರವು ಯೋಜನೆಯಾಗಿದೆ. ಇದರ ಬಗ್ಗೆ ತಿಳಿಯುವುದು ಅಗತ್ಯವಾಗಿದೆ.
ಬಡತನ ರೇಖೆಗಿಂತ ಕೆಳಗಿರುವ (ಬಿಪಿಎಲ್) ಕುಟುಂಬದ ಯಜಮಾನ ಮೃತಪಟ್ಟರೆ, ಅವರ ಕುಟುಂಬಕ್ಕೆ 20 ಸಾವಿರ ರೂಪಾಯಿಗಳ ಆರ್ಥಿಕ ನೆರವು ನೀಡಲು ರಾಷ್ಟ್ರೀಯ ಕುಟುಂಬ ನೆರವು ಯೋಜನೆಯನ್ನು ಜಾರಿಗೆ ತರಲಾಗಿದೆ. ದೇಶಾದ್ಯಂತ ರಾಷ್ಟ್ರೀಯ ಸಾಮಾಜಿಕ ಸಹಾಯ ಕಾರ್ಯಕ್ರಮದ (NSAP) ಅಡಿಯಲ್ಲಿ1995ರಲ್ಲಿ ಕೇಂದ್ರ ಸರ್ಕಾರ ಯೋಜನೆಯನ್ನು ಜಾರಿಗೆ ತಂದಿದೆ.
ಬಡತನ ರೇಖೆಗಿಂತ ಕೆಳಗಿರುವ ಕುಟುಂಬಗಳಿಗೆ ನೈಸರ್ಗಿಕ ಅಥವಾ ಆಕಸ್ಮಿಕ ಕಾರಣದಿಂದಾಗಿ ಪ್ರಾಥಮಿಕ ಜೀವನಾಧಾರವಾದ ವ್ಯಕ್ತಿಯ ಮರಣದ ಬಳಿಕ ಕುಟುಂಬ ನಿರ್ವಹಣೆಗಾಗಿ ತಕ್ಷಣದ ಸಹಾಯವನ್ನು ನೀಡುವ ಗುರಿಯನ್ನು ಇದು ಹೊಂದಿದೆ. ಕುಟುಂಬ ಯಜಮಾನ 18 ರಿಂದ 59 ವರ್ಷ ವಯಸ್ಸಿನವರಾಗಿರಬೇಕು. ಆ ವ್ಯಕ್ತಿ ಮೃತಪಟ್ಟರೆ, ಕುಟುಂಬದ ಸದಸ್ಯರು ಕೂಡ ಬಿಪಿಎಲ್ ಗೆ ಸೇರಿರಬೇಕು ಎಂಬ ನಿಯಮವಿದೆ.
ಅರ್ಜಿ ಸಲ್ಲಿಕೆ ಹೇಗೆ?
ಕುಟುಂಬದ ಯಜಮಾನ ಮೃತಪಟ್ಟ 70 ದಿನಗಳೊಳಗೆ ಅರ್ಜಿ ಸಲ್ಲಿಸಿದರೆ 20 ಸಾವಿರ ರೂ. ನೆರವು ಸಿಗುತ್ತದೆ. ಅರ್ಜಿದಾರರು ಸೇವಾ ಸಿಂಧು ಪೋರ್ಟಲ್ ಗೆ ಭೇಟಿ ನೀಡುವ ಮೂಲಕ ಅಥವಾ ಸಾಮಾನ್ಯ ಸೇವಾ ಕೇಂದ್ರಗಳ ಮೂಲಕ ರಾಷ್ಟ್ರೀಯ ಕುಟುಂಬ ನೆರವು ಯೋಜನೆಗೆ ಅರ್ಜಿಯನ್ನು ಸಲ್ಲಿಸಬಹುದು. ಸಾಮಾನ್ಯ ಸೇವಾ ಕೇಂದ್ರಗಳ ಆಪರೇಟರ್ ಗಳು ಅರ್ಜಿಯನ್ನು ಅರ್ಜಿದಾರರ ಪರವಾಗಿ ಸಲ್ಲಿಸುತ್ತಾರೆ, ಅಗತ್ಯ ಪೋಷಕ ದಾಖಲೆಗಳೊಂದಿಗೆ ಮತ್ತು ಸೇವೆಗಾಗಿ ಪಾವತಿ ಮಾಡುತ್ತಾರೆ. ಸರಿಯಾಗಿ ಭರ್ತಿ ಮಾಡಿ ಸಹಿ ಮಾಡಿದ ಅರ್ಜಿಯನ್ನು (ಅಗತ್ಯ ದಾಖಲೆಗಳ ಪ್ರತಿಗಳೊಂದಿಗೆ) ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಅವರಿಗೂ ಸಲ್ಲಿಕೆ ಮಾಡಬಹುದಾಗಿದೆ.