ತಾಯಿಯ ಇನ್ನೊಂದು ಪ್ರತಿ ರೂಪವೇ ಅಜ್ಜಿ. ತನ್ನೆಲ್ಲ ಆಸೆಗಳನ್ನು ತ್ಯಾಗ ಮಾಡುತ್ತಾ, ಒಂದೊಂದು ರೂಪಾಯಿಯನ್ನು ಕೂಡಿಡುತ್ತಾ ತನ್ನ ಮೊಮ್ಮಕ್ಕಳಿಗೆ ಧಾರೆ ಎರೆಯುತ್ತಾರೆ.
ಇಂತಹ ಅಜ್ಜಿಯ ಕೊನೆಗಾಲದಲ್ಲಿ ಅವರ ಪಾಲನೆ ಪೋಷಣೆ ಮಾಡುವುದು ಪ್ರತಿ ಮೊಮ್ಮಕ್ಕಳ ಜವಾಬ್ದಾರಿ. ಆದರೆ ಇತ್ತೀಚಿನ ದಿನಗಳಲ್ಲಿ ಕೆಲ ಮೊಮ್ಮಕ್ಕಳು ಅಜ್ಜಿಯರನ್ನ ಹೊಡೆದು ಬಡಿದು ಹೀಯಾಳಿಸುತ್ತಾರೆ. ಅದೇ ರೀತಿ ಇಲ್ಲೊಬ್ಬ ತನ್ನನ್ನು ಸಾಕಿ ಬೆಳೆಸಿದ್ದ ಅಜ್ಜಿಗೆ ಕ್ಯಾನ್ಸರ್ ಬಂದಿದೆ ಎಂದು ಆ ಅಜ್ಜಿಯನ್ನು ಕಸದ ತೊಟ್ಟಿಯಲ್ಲಿ ಎಸೆದು ಹೋಗಿದ್ದಾನೆ. ಈ ಹೃದಯ ವಿದ್ರಾವಕ ಘಟನೆ ಮುಂಬೈನಲ್ಲಿ ನಡೆದಿದ್ದು ಸಾಕಷ್ಟು ಆಕ್ರೋಶಕ್ಕೆ ಕಾರಣವಾಗಿದೆ.
60 ವರ್ಷದ ಯಶೋಧ ಗಾಯಕ್ವಾಡ್ ಎಂಬುವವರು ಚರ್ಮದ ಕ್ಯಾನ್ಸರ್ ನಿಂದ ಬಳಲುತ್ತಿದ್ದರು ಎನ್ನಲಾಗುತ್ತಿದೆ. ಆಕೆಗೆ ಚಿಕಿತ್ಸೆ ಕೊಡಿಸುವ ಬದಲು ಆಕೆಯ ಸ್ವಂತ ಮೊಮ್ಮಗನೇ ಈ ರೀತಿ ಕೃತ್ಯ ಎಸಗಿದ್ದಾನೆ. ನಂತರ ಸ್ಥಳೀಯರ ಸಹಾಯದಿಂದ ಪೊಲೀಸರು ಆಕೆಯನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆಯನ್ನು ಕೊಡಿಸುತ್ತಿದ್ದಾರೆ. ಸಂಬಂಧಿಕರನ್ನ ಪತ್ತೆಹಚ್ಚಲು ಆಕೆಯ ಚಿತ್ರವನ್ನು ಎಲ್ಲಾ ಪೊಲೀಸ್ ಠಾಣೆಗಳಲ್ಲಿ ಹಂಚಿಕೊಳ್ಳಲಾಗಿದೆ. ಮೊಮ್ಮಗ ಈ ರೀತಿಯ ಅಮಾನವೀಯ ಕೆಲಸವನ್ನು ಯಾಕೆ ಮಾಡಿದನು ಎಂಬುದು ಸ್ಪಷ್ಟವಾಗಿಲ್ಲ. ಒಟ್ಟಿನಲ್ಲಿ ಎಲ್ಲವೂ ತನಿಖೆಯ ನಂತರ ಬಹಿರಂಗವಾಗಲಿದೆ.