ಬೆಂಗಳೂರು : ಬಾಗಲೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಾಯಿ ಮರಿಯನ್ನು ನೆಲಕ್ಕೆ ಬಡಿದು ಕೊಲೆ ಮಾಡಿದ್ದ ಮನೆ ಕೆಲಸದಾಕೆಯನ್ನ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಪುಷ್ಪಲತಾ ಬಂಧಿತ ಆರೋಪಿ.
ಶ್ವಾನದ ಮಾಲೀಕರ ದೂರಿನ ಮೇರೆಗೆ ತನಿಖೆಗಿಳಿದ ಪೊಲೀಸರಿಗೆ ಪುಷ್ಪಲತಾ ನಾಯಿ ಕೊಲೆ ಮಾಡಿದ್ದಾಳೆ ಅನ್ನೋದು ಗೊತ್ತಾಗಿದೆ. ರಾಶಿಕಾ ಎಂಬವರು ತಮ್ಮ ‘ಗೂಸಿ’ ಹೆಸರಿನ ನಾಯಿಯನ್ನು ನೋಡಿಕೊಳ್ಳಲು ಪುಷ್ಪಲತಾಳನ್ನು ಮನೆ ಕೆಲಸದಾಕೆಯಾಗಿ ನೇಮಿಸಿಕೊಂಡಿದ್ದರು. ಇದಕ್ಕಾಗಿ ಪುಷ್ಪಲತಾಳಿಗೆ ಮಾಸಿಕ 23 ಸಾವಿರ ರೂ. ಸಂಬಳವನ್ನೂ ನೀಡುತ್ತಿದ್ದರು.
ಆದ್ರೆ ಪುಷ್ಪಲತಾ ಲಿಫ್ಟ್ನಲ್ಲಿ ನಾಯಿಯನ್ನು ಅಮಾನವೀಯವಾಗಿ ಕೊಲೆ ಮಾಡಿದ್ದಳು. ಬಟ್ಟೆ ಒಗೆಯುವಂತೆ ನಾಯಿಯನ್ನು ಹಿಡಿದು ನೆಲಕ್ಕೆ ಬಡಿದು ಉಸಿರುಗಟ್ಟಿಸಿ ಸಾಯಿಸಿದ್ದಳು.
ಈ ಕೃತ್ಯದ ನಂತರ ನಾಯಿ ಸತ್ತು ಹೋಗಿದೆ ಎಂದು ಮಾಲೀಕರಿಗೆ ಸುಳ್ಳು ಕಥೆ ಹೇಳಿ ಆಕೆಯನ್ನು ನಂಬಿಸಲು ಕೂಡ ಯತ್ನಿಸಿದ್ದಾಳೆ. ಆಗ ನಾಯಿಯ ಸಾವಿನ ಬಗ್ಗೆ ಮಾಲೀಕರಿಗೆ ಅನುಮಾನ ಮೂಡಿದ್ದು, ಕಟ್ಟಡದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ ಪುಷ್ಪಲತಾಳ ಕ್ರೂರ ಕೃತ್ಯ ಬೆಳಕಿಗೆ ಬಂದಿದೆ.
ತಕ್ಷಣ ರಾಶಿಕಾ, ಆರೋಪಿತೆ ಪುಷ್ಪಲತಾ ವಿರುದ್ಧ ಬಾಗಲೂರು ಪೊಲೀಸ್ ಠಾಣೆಗೆ ದೂರು ನೀಡಿದ್ದರು. ದೂರಿನನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆ ನಡೆಸುತ್ತಿದ್ದಾರೆ.
ಇದನ್ನೂ ಓದಿ : ಬಂಡೆಪಾಳ್ಯ ಪೊಲೀಸರ ಕಾರ್ಯಾಚರಣೆ | ಮಾದಕ ವಸ್ತು ಮಾರಾಟ ಮಾಡ್ತಿದ್ದ ನೈಜೀರಿಯಾ ಮೂಲದ ಆರೋಪಿ ಬಂಧನ!



















