ನವದೆಹಲಿ: 26 ಜನ ಅಮಾಯಕರ ಸಾವಿಗೆ ಕಾರಣವಾದ ಪಹಲ್ಗಾಮ್ ದಾಳಿಯಲ್ಲಿ(Pahalgam Attack) ಭಾಗಿಯಾಗಿದ್ದ ಇಬ್ಬರು ಲಷ್ಕರ್-ಎ-ತೊಯ್ಬಾ (ಎಲ್ಇಟಿ) ಭಯೋತ್ಪಾದಕರಾದ ಆದಿಲ್ ಹುಸೇನ್ ಥೋಕರ್ ಮತ್ತು ಆಸಿಫ್ ಶೇಖ್ ಅವರ ಜಮ್ಮು ಮತ್ತು ಕಾಶ್ಮೀರದಲ್ಲಿನ ಮನೆಗಳನ್ನು ಗುರುವಾರ ರಾತ್ರಿ ಸ್ಫೋಟಗೊಳಿಸಿ ನಾಶಪಡಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಮನೆಗಳ ಒಳಗೆ ಸ್ಫೋಟಕಗಳನ್ನು ಇರಿಸಿ ಅವುಗಳನ್ನು ಧ್ವಂಸಗೊಳಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಅನಂತ್ನಾಗ್ ಜಿಲ್ಲೆಯ ಥೋಕರ್ ಮಂಗಳವಾರದ ಪಹಲ್ಗಾಮ್ ಹತ್ಯಾಕಾಂಡದ ಪ್ರಮುಖ ಆರೋಪಿಗಳಲ್ಲಿ ಒಬ್ಬನಾಗಿದ್ದರೆ, ಪುಲ್ವಾಮಾ ನಿವಾಸಿ ಶೇಖ್ ಈ ದಾಳಿಯ ಪಿತೂರಿಯಲ್ಲಿ ಭಾಗಿಯಾಗಿದ್ದಾನೆ ಎಂದು ಶಂಕಿಸಲಾಗಿದೆ.
ಪಹಲ್ಗಾಮ್ ದಾಳಿಯಲ್ಲಿ ಭಾಗಿಯಾಗಿದ್ದಾರೆಂದು ಶಂಕಿಸಲಾದ ಥೋಕರ್ ಮತ್ತು ಇತರ ಇಬ್ಬರು ಭಯೋತ್ಪಾದಕರ ರೇಖಾಚಿತ್ರಗಳನ್ನು ಅನಂತ್ನಾಗ್ ಪೊಲೀಸರು ಬಿಡುಗಡೆ ಮಾಡಿದ ಬೆನ್ನಲ್ಲೇ ಈ ಬೆಳವಣಿಗೆ ನಡೆದಿದೆ. ಭಯೋತ್ಪಾದಕ ಚಟುವಟಿಕೆಗಳನ್ನು ನಿಗ್ರಹಿಸಲು ಮತ್ತು ಉಗ್ರರಿಗೆ ಆಶ್ರಯ ನೀಡುವ ಯಾವುದೇ ಸ್ಥಳವನ್ನು ತೊಡೆದುಹಾಕಲು ಸರ್ಕಾರ ಕಟಿಬದ್ಧವಾಗಿದೆ ಎಂಬ ಸಂದೇಶವನ್ನು ಈ ಕಾರ್ಯಾಚರಣೆಯ ಮೂಲಕ ನೀಡಲಾಗಿದೆ.
ಕಠಿಣ ಕ್ರಮ ಖಚಿತ: ಭದ್ರತಾ ಪಡೆ
ಕಾರ್ಯಾಚರಣೆಯ ಕುರಿತು ಮಾತನಾಡಿದ ಭದ್ರತಾ ಪಡೆಗಳ ಅಧಿಕಾರಿಯೊಬ್ಬರು, “ಭಯೋತ್ಪಾದಕರಿಗೆ ಯಾವುದೇ ರೀತಿಯ ಬೆಂಬಲ ಅಥವಾ ಆಶ್ರಯ ನೀಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು. ಈ ಕಾರ್ಯಾಚರಣೆಯು ಜಮ್ಮು-ಕಾಶ್ಮೀರದಲ್ಲಿ ಶಾಂತಿ ಮತ್ತು ಸ್ಥಿರತೆಯನ್ನು ಕಾಪಾಡುವ ನಮ್ಮ ಬದ್ಧತೆಯ ಭಾಗವಾಗಿದೆ,” ಎಂದು ತಿಳಿಸಿದ್ದಾರೆ.
ಇದೇ ವೇಳೆ, ಇತರೆ ಶಂಕಿತ ಉಗ್ರರನ್ನು ಗುರುತಿಸಲು ಮತ್ತು ಭಯೋತ್ಪಾದಕ ಚಟುವಟಿಕೆಗಳನ್ನು ತಡೆಯಲು ಹೆಚ್ಚಿನ ಕಾರ್ಯಾಚರಣೆಗಳನ್ನು ಯೋಜಿಸಲಾಗುತ್ತಿದೆ ಎನ್ನಲಾಗಿದೆ.
ಇದೇ ವೇಳೆ, ಇತರೆ ಇಬ್ಬರು ಶಂಕಿತರು ಪಾಕಿಸ್ತಾನಿ ಪ್ರಜೆಗಳಾಗಿದ್ದು, ಅವರ ಬಂಧನಕ್ಕೆ ಕಾರಣವಾಗುವ ವಿಶ್ವಾಸಾರ್ಹ ಮಾಹಿತಿ ನೀಡಿದವರಿಗೆ 20 ಲಕ್ಷ ರೂ.ಗಳ ಬಹುಮಾನವನ್ನೂ ಪೊಲೀಸರು ಘೋಷಿಸಿದ್ದಾರೆ.
ಎಕ್ಸ್ ನಲ್ಲಿ ಪೊಲೀಸರು ಬಹಿರಂಗಪಡಿಸಿದ ಮಾಹಿತಿ ಪ್ರಕಾರ, ಇತರ ಇಬ್ಬರು ಶಂಕಿತರಾದ ಹಾಶಿಮ್ ಮೂಸಾ ಅಲಿಯಾಸ್ ಸುಲೇಮಾನ್ ಮತ್ತು ಅಲಿ ಭಾಯ್ ಅಲಿಯಾಸ್ ತಲ್ಹಾ ಭಾಯ್ ಪಾಕಿಸ್ತಾನ ಮೂಲದ ಭಯೋತ್ಪಾದಕ ಸಂಘಟನೆ ಲಷ್ಕರ್-ಎ-ತೊಯ್ಬಾದ ಸದಸ್ಯರು ಎಂದು ಹೇಳಲಾಗಿದೆ.
‘ಮಿನಿ ಸ್ವಿಜರ್ಲೆಂಡ್’ ಎಂದು ಕರೆಯಲ್ಪಡುವ ಪಹಲ್ಗಾಮ್ನ ಬೈಸರನ್ನಲ್ಲಿ ಮಂಗಳವಾರ ಪ್ರವಾಸಿಗರನ್ನು ಗುರಿಯಾಗಿಸಿ ಉಗ್ರರು ನಡೆಸಿದ ದಾಳಿಯಲ್ಲಿ 25 ಭಾರತೀಯ ಪ್ರಜೆಗಳು ಮತ್ತು ಒಬ್ಬ ನೇಪಾಳಿ ಪ್ರಜೆ ಮೃತಪಟ್ಟಿದ್ದಾರೆ. ಹಿಮಾಲಯ ಮತ್ತು ಕಣಿವೆಯ ಪೈನ್ ಕಾಡುಗಳ ಅದ್ಭುತ ನೋಟಗಳಿಗೆ ಹೆಸರುವಾಸಿಯಾದ ಪ್ರವಾಸಿ ತಾಣವಾದ ಬೈಸರನ್ ಹುಲ್ಲುಗಾವಲಿನಲ್ಲಿ ನಡೆದ ದಾಳಿಯು ಇತ್ತೀಚಿನ ವರ್ಷಗಳಲ್ಲಿ ಈ ಪ್ರದೇಶದಲ್ಲಿ ನಾಗರಿಕರ ಮೇಲೆ ನಡೆದ ಭೀಕರ ದಾಳಿಗಳಲ್ಲಿ ಒಂದಾಗಿತ್ತು.