ಬಳ್ಳಾರಿ: ಸುಹಾಸ್ ಶೆಟ್ಟಿ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಶ್ರೀರಾಮುಲು ಮಾತನಾಡಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಹಾಡಹಗಲೇ ನಡು ರಸ್ತೆಯಲ್ಲೇ ರಾಜಾರೋಷ ವಾಗಿ ಕೊಲೆ ಮಾಡಿದ್ದಾರೆ. ಇದುವರೆಗೂ ಸುಹಾಸ್ ಶೆಟ್ಟಿ ಕೊಲೆ ಆರೋಪಿಗಳು ಅರೆಸ್ಟ್ ಆಗಿಲ್ಲ. ಹಿಂದೂ ಕಾರ್ಯಕರ್ತನ ಸ್ಥಿತಿ ಹೀಗಾದರೆ, ಜನಸಾಮಾನ್ಯರ ಪರಿಸ್ಥಿತಿ ಏನು? ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಗೃಹ ಮಂತ್ರಿಗಳು ವಿಫಲವಾಗಿದ್ದು, ಕೂಡಲೇ ರಾಜೀನಾಮೆ ನೀಡಬೇಕು ಎಂದು ಕಿಡಿಕಾರಿದ್ದಾರೆ.
ರಾಜ್ಯದ ಗೃಹ ಮಂತ್ರಿಗಳಿಗೆ ಗಂಭೀರತೆಯಿಲ್ಲ. ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಹಿಂದೂ ಕಾರ್ಯಕರ್ತರ ಹತ್ಯೆ ಆಗುತ್ತಿದೆ. ಹಿಂದೂಪರ ಕಾರ್ಯಕರ್ತರ ಕೊಲೆ ಮಾಡುತ್ತಾ ಹೋದರೆ, ಇದಕ್ಕೆ ಮುಕ್ತಿ ಯಾವಾಗ? ಇದು ಆಸ್ತಿ ಅಥವಾ ವೈಯಕ್ತಿಕ ಕೊಲೆಯಲ್ಲ. ಇದೊಂದು ದ್ವೇಷದ ಕೊಲೆ. ಸುಹಾನ್ ಶೆಟ್ಟಿ ಕೊಲೆ ಹಿಂದೆ ಷಡ್ಯಂತ್ರ ಇದೆ. ಹಿಂದೂಗಳಿಗೆ ರಕ್ಷಣೆ ಇಲ್ಲದಂತಾಗಿದೆ. ಇದೊಂದು ಪ್ರೀ ಪ್ಲಾನ್ ಮರ್ಡರ್, ಮಾರಕಾಸ್ತ್ರ ಜೋಡಿಸಿ, ಸ್ಥಳ ನೋಡಿ ಕೊಂಡು ಕೊಲೆ ಮಾಡಿದ್ದಾರೆ. ಸರ್ಕಾರದ ಇಂಟಲಿಜೆನ್ಸ್ ಸಂಪೂರ್ಣ ವಿಫಲವಾಗಿದೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಕುಸಿದು ಹೋಗಿದೆ ಎಂದಿದ್ದಾರೆ.
ಸ್ಪೀಕರ್ ಯು.ಟಿ. ಖಾದರ್ ಕೂಡ ಪ್ರಾಣ ಭಯ ಇದೆ ಅಂತಾ ಹೇಳಿದ್ದಾರೆ. ಅಂಡರ್ ವರ್ಲ್ಡ್ ನಿಂದ ನನಗೆ ಜೀವ ಬೆದರಿಕೆ ಇದೆ ಅಂತಾ ಹೇಳಿದ್ದಾರೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದ ಮೇಲೆ ರಾಜ್ಯದಲ್ಲಿ ಪಿಎಫ್ಐ, ಎಸ್ ಡಿಪಿಐ ಕೇಸ್ ಕ್ಲೋಸ್ ಮಾಡಿದರು. ಈ ರೀತಿ ಕೇಸ್ ಕ್ಲೋಸ್ ಮಾಡಿ ಅವರಿಗೆ ಪ್ರೋತ್ಸಾಹ ಕೊಟ್ಟರೆ, ಹಿಂದೂ ಕಾರ್ಯಕರ್ತರ ಕೊಲೆ ಆಗದೆ ಬಿಟ್ಟಿತಾ ಎಂದಿದ್ದಾರೆ. ಸುಹಾಸ್ ಶೆಟ್ಟಿ ಹತ್ಯೆ ಪ್ರಕರಣವನ್ನು ಸಿಬಿಐಗೆ ಕೊಡಬೇಕು. ಕೂಡಲೇ ನೈತಿಕ ಹೊಣೆ ಹೊತ್ತು ಗೃಹ ಸಚಿವರು ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸಿದ್ದಾರೆ.