ರಾಜ್ಯ ರಾಜಕೀಯ ಪಡಸಾಲೆಯಲ್ಲಿ ಈಗ ಚಿನ್ನಸ್ವಾಮಿ ಸ್ಟೇಡಿಯಂ ಹೊರಗಿನ ಕಾಲ್ತುಳಿತ ಪ್ರಕರಣ ದೊಡ್ಡ ಸದ್ದು ಮಾಡುತ್ತಿದೆ. ಸತ್ತವರ ಹೆಣದ ಮೇಲೆ ರಾಜಕೀಯ ತಾಲೀಮು ಜೋರಾಗಿ ನಡೆಯುತ್ತಿದೆ. ಸಮಾಜಕ್ಕೆ ಹಿತವೋ? ಅಹಿತವೋ? ಗೊತ್ತಿಲ್ಲ ರಾಜಕಾರಣಿಗಳ ಮಾತಿಗೆ ಪ್ರತಿಮಾತು ನಡೆಯುತ್ತಲೇ ಇದೆ. ಅದು ಚಟವೂ ಹೌದು..ಆದರೆ, ಕುಟುಂಬಸ್ಥರನ್ನು ಕಳೆದುಕೊಂಡವರ ಆಕ್ರಂದನ ಮಾತ್ರ ಮುಗಿಲು ಮುಟ್ಟಿದೆ. ರಾಜಕಾರಣವೇ ಹಾಗೆ.. ಆಡಳಿತ ಪಕ್ಷವನ್ನು ಹಣಿಯಲು ವಿಪಕ್ಷಗಳು, ವಿಪಕ್ಷಗಳನ್ನು ಹಣಿಯಲು ಆಡಳಿತ ಪಕ್ಷ ಹೋರಾಡುತ್ತಲೇ ಇರುತ್ತವೆ. ಇತ್ತೀಚೆಗಷ್ಟೇ ರಾಜಕೀಯ ಹೋರಾಟಕ್ಕೆ ಜಾತಿಯೂ ಅಂಟಿಕೊಂಡಿತ್ತು. ಸಿಎಂ ಸಿದ್ದರಾಮಯ್ಯ ಜಾತಿ ಗಣತಿ ಬಿಡುಗಡೆ ಮುಂದಾಗಿದ್ದರು. ಇದಕ್ಕೆ ಸ್ವಪಕ್ಷದವರಿಂದಲೇ ವಿರೋಧ ವ್ಯಕ್ತವಾಗಿತ್ತು. ಆದರೂ ಬಿಡುಗಡೆಗೆ ತೆರೆಯ ಹಿಂದೆ ಸಿಎಂ ಕಸರತ್ತು ನಡೆಸಿದ್ದರು. ಈಗ ಅದಕ್ಕೆ ಹೈಕಮಾಂಡ್ ರೆಡ್ ಸಿಗ್ನಲ್ ನೀಡಿದೆ.
ಜಾತಿಗಣತಿ ಬಿಡುಗಡೆಗೆ ಬ್ರೇಕ್ ಹಾಕಿದ ಹೈಕಮಾಂಡ್
ಸಿಎಂ ಸಿದ್ದರಾಮಯ್ಯಗೆ ಭಾರೀ ಹಿನ್ನಡೆ
ಮರು ಸಮೀಕ್ಷೆಗೆ ಸೂಚಿಸಿದ ಹೈಕಮಾಂಡ್
ಜಾತಿಗಣತಿ ವರದಿ ಬಿಡುಗಡೆಗೆ ವಿರೋಧ ಪಕ್ಷಗಳು ಮಾತ್ರವಲ್ಲದೆ, ಕಾಂಗ್ರೆಸ್ ಪಕ್ಷದ ಹಲವು ನಾಯಕರು ಕೂಡ ವಿರೋಧ ವ್ಯಕ್ತಪಡಿಸಿದ್ದರು. ರಾಜ್ಯದಲ್ಲಿನ ಪ್ರಬಲ ಸಮುದಾಯವಾಗಿರುವ ಲಿಂಗಾಯತರು ಹಾಗೂ ಒಕ್ಕಲಿಗ ನಾಯಕರು, ಮಠಾಧೀಶರು, ಮುಖಂಡರು ಇದನ್ನು ವಿರೋಧಿಸಿದ್ದರು. ಈಗ ಹೈಕಮಾಂಡ್ ಕೂಡ ಇದಕ್ಕೆ ಧ್ವನಿಗೂಡಿಸಿದ್ದು, ಮತ್ತೊಮ್ಮೆ ಗಣತಿ ನಡೆಸುವಂತೆ ಸೂಚಿಸಿದೆ. ಇದು ಸಿಎಂ ಸಿದ್ದರಾಮಯ್ಯ ನಿರಾಸೆಗೆ ಕಾರಣವಾಗಿದೆ.
ಇಂದು ಸಿಎಂ ಸಿದ್ದರಾಮಯ್ಯ ಹಾಗೂ ಡಿ.ಕೆ. ಶಿವಕುಮಾರ್ ದೆಹಲಿ ಪ್ರವಾಸ ಕೈಗೊಂಡಿದ್ದರು. ಈ ವೇಳೆ ರಾಹುಲ್ ಗಾಂಧಿ, ಮಲ್ಲಿಕಾರ್ಜುನ ಖರ್ಗೆ, ಸುರ್ಜೆವಾಲ, ಕೆಸಿ ವೇಣುಗೋಪಾಲ್ ಅವರನ್ನು ಭೇಟಿ ಮಾಡಿದ್ದರು. ಈ ನಾಯಕರ ಸಭೆಯಲ್ಲಿ ಜಾತಿಗಣತಿ ವರದಿಯ ದತ್ತಾಂಶ ಸರಿಯಿಲ್ಲ. ಕಾಲ ಮಿತಿಯಲ್ಲಿ ಮರು ಗಣತಿ ಮಾಡಿ ಎಂದು ಸೂಚಿಸಿದೆ ಎನ್ನಲಾಗಿದೆ. ಹೀಗಾಗಿ ರಾಜ್ಯ ಸರ್ಕಾರಕ್ಕೆ ಹಿನ್ನಡೆಯಾದಂತಾಗಿದೆ. ಅದರಲ್ಲೂ ಸಿಎಂ ಸಿದ್ದರಾಮಯ್ಯ ಅವರಿಗಂತೂ ವೈಯಕ್ತಿಕವಾಗಿ ದೊಡ್ಡ ಹಿನ್ನಡೆಯಾಗಿದೆ. ಜಾತಿ ಗಣತಿ ವರದಿ ಎಂಬ ಶಬ್ದ ಬಂದಾಗಿನಿಂದಲೂ ವಿರೋಧಿಸುತ್ತಿದ್ದ ಡಿಕೆಯಂತೂ ಈಗ ಮುಸಿಮುಸಿ ನಗುವಂತಾಗಿದೆ.
ಯಾವ ಕಾರಣಕ್ಕೆ ಜಾತಿ ಗಣತಿ ತಿರಸ್ಕಾರ?
ಕಾಂಗ್ರೆಸ್ ಹೈಕಮಾಂಡ್ ಸೂಚಿಸಿದ್ದೇನು?
ಪ್ರಬಲ ಸಮುದಾಯಗಳ ಬೇಡಿಕೆಗೆ ಮಣಿಯಿತೇ ಹೈಕಮಾಂಡ್?
ಹೌದು! ಒಂದು ರೀತಿ ನೋಡಿದರೆ ಕಾಂಗ್ರೆಸ್ ಹೈಕಮಾಂಡ್ ಜಾತಿ ಗಣತಿ ವಿರೋಧಿಯಲ್ಲ. ಜಾತಿ ಗಣತಿ ಬಗ್ಗೆ ರಾಹುಲ್ ಗಾಂಧಿ ಕಳೆದ ಚುನಾವಣೆಯಿಂದಲೂ ಮಾತನಾಡುತ್ತಿದ್ದರು. ಕೇಂದ್ರ ಸರ್ಕಾರ ಜಾತಿ ಗಣತಿಯ ನಿರ್ಧಾರಕ್ಕೆ ಬಂದಾಗ ರಾಹುಲ್ ನಮ್ಮದೇ ಕಾಪಿ ಇದು ಎಂದಿದ್ದರು. ರಾಜ್ಯದಲ್ಲಿ ಮಾಡಿದ ವರದಿಯನ್ನು ಮಾತ್ರ ಈಗ ತಿರಸ್ಕಾರ ಮಾಡಿದ್ದಾರೆ. ಆದರೆ, ಮರು ವರದಿ ಸಿದ್ಧಪಡಿಸಲು ಕೂಡ ಸೂಚಿಸಲಾಗಿದೆ. ಈ ವರದಿ ತಿರಸ್ಕಾರಕ್ಕೆ ಕಾರಣಗಳನ್ನು ಹುಡುಕುತ್ತ ಹೋದರೆ, ಸದ್ಯದ ವರದಿಗೆ ಹಲವಾರು ನಾಯಕರು ವಿರೋಧ ವ್ಯಕ್ತಪಡಿಸಿದ್ದರು. ಪಕ್ಷದ ಕೆಲವು ಹಿರಿಯ ನಾಯಕರಂತೂ ಬಹಿರಂಗವಾಗಿಯೇ ವಿರೋಧಿಸಿದ್ದರು. ಇದು 9 ರಿಂದ 10 ವರ್ಷ ಹಳೆಯ ವರದಿ ಎಂದು ಆರೋಪಿಸಲಾಗಿತ್ತು. ಲಿಂಗಾಯತ ಹಾಗೂ ಒಕ್ಕಲಿಗ ಸಮುದಾಯದವರ ಅಂಕಿ- ಸಂಖ್ಯೆ ಹಾಗೂ ಒಳ ಜಾತಿಗಳ ಲೆಕ್ಕಾಚಾರದಲ್ಲಿ ಅಸಮಾಧಾನ ವ್ಯಕ್ತವಾಗಿತ್ತು. ಹಲವಾರು ಮಠಾಧೀಶರು ಸರ್ಕಾರಕ್ಕೆ ಎಚ್ಚರಿಕೆ ನೀಡಿದ್ದರು. ಹಲವು ಮಠಾಧೀಶರಂತೂ ಕಾಂಗ್ರೆಸ್ ವರಿಷ್ಠರನ್ನು ಭೇಟಿಯಾಗಿ ಮಾತುಕತೆ ನಡೆಸಿದ್ದರು. ವರದಿಯ ಅಂಕಿ-ಸಂಖ್ಯೆ ಭಾರೀ ಆಕ್ಷೇಪಕ್ಕೆ ಕಾರಣವಾಗಿತ್ತು. ವರದಿ ಮಂಡನೆಯಾದರೆ ರಾಜಕೀಯ ಸಂಚಲನವೇ ಸೃಷ್ಟಿಯಾಗಬಹುದು ಎಂಬ ಕಾರಣಕ್ಕೆ ಕಾಂಗ್ರೆಸ್ ಹೈಕಮಾಂಡ್ ಬೀಸೋ ದೊಣ್ಣೆಯಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಈ ತಂತ್ರ ರೂಪಿಸಿದೆ ಎನ್ನಲಾಗುತ್ತಿದೆ.
ಜೂ. 12ಕ್ಕೆ ಮಹತ್ವದ ತೀರ್ಮಾನಕ್ಕೆ ಮುಂದಾಗಿದ್ದ ಸರ್ಕಾರ
ವಿಶೇಷ ಸಚಿವ ಸಂಪುಟದಲ್ಲಿ ನಿರ್ಣಯ ತೆಗೆದುಕೊಳ್ಳಲು ಸಿದ್ಧತೆ
ಸಿಎಂ ಓಟಕ್ಕೆ ಬಿತ್ತು ಬ್ರೇಕ್?
ಜಾತಿಗಣತಿ ಕುರಿತು ಸರ್ಕಾರ ಕೂಡ ತರಾತುರಿಯಲ್ಲಿ ನಿರ್ಣಯ ಕೈಗೊಳ್ಳಲು ಮುಂದಾಗಿತ್ತು. ಜೂನ್ 12ರಂದು ವಿಶೇಷ ಸಚಿವ ಸಂಪುಟ ಸಭೆ ನಡೆಸಿ ತೀರ್ಮಾನ ಕೈಗೊಳ್ಳಲು ನಿರ್ಧರಿಸಲಾಗಿತ್ತು. ಆ ಸಂದರ್ಭದಲ್ಲಿ ಜಾತಿಗಣತಿ ವರದಿಯನ್ನು ಅಂಗೀಕರಿಸಲು ಸಿದ್ದರಾಮಯ್ಯ ಮುಂದಾಗಿದ್ದರು ಎನ್ನಲಾಗುತ್ತಿದೆ. ಆದರೆ, ಅದಕ್ಕೂ ಮುನ್ನವೇ ಹೈಕಮಾಂಡ್ ಚೆಕ್ ಮೇಟ್ ನೀಡಿದೆ. ಇದು ಸಿದ್ದರಾಮಯ್ಯ ಅವರಿಗೆ ಅರಗಿಸಿಕೊಳ್ಳಲಾಗುತ್ತಿಲ್ಲ. ರಾಜ್ಯ ಕಾಂಗ್ರೆಸ್ ನಾಯಕರ ಮಾತಿಗೆ ಕ್ಯಾರೇ ಅನ್ನದ ಸಿಎಂ ಈಗ ಹೈಕಮಾಂಡ್ ಮಾತಿಗೆ ತಲೆ ತಗ್ಗಿಸಬೇಕಾಗಿದೆ. ಹೀಗಾಗಿ ಪಕ್ಷದಲ್ಲೇ ಜಾತಿ ಗಣತಿ ವಿರೋಧಿಸುತ್ತಿದ್ದವರು ಈಗ ಮುಸಿ ಮುಸಿ ನಗುವಂತಾಗಿದೆ.
ಮರು ಜಾತಿ ಗಣತಿ ಘೋಷಿಸಿದ ಸಿಎಂ
ಕಾಂಗ್ರೆಸ್ ವಿರುದ್ಧ ಬಿಜೆಪಿ, ಜೆಡಿಎಸ್ ವಾಗ್ದಾಳಿ
ತಾತ್ವಿಕ ಒಪ್ಪಿಗೆ ಮಾತುಗಳನ್ನಾಡಿದ ಸಿಎಂ
ಕಾಂಗ್ರೆಸ್ ಹೈಕಮಾಂಡ್ ಸೂಚನೆಯಂತೆ ಮರುಜಾತಿ ಗಣತಿಯನ್ನು ಸಿದ್ದರಾಮಯ್ಯ ಘೋಷಿಸಿದ ಬೆನ್ನಲ್ಲೇ ಕಾಂಗ್ರೆಸ್ ಸರ್ಕಾರದ ವಿರುದ್ಧ ಬಿಜೆಪಿ ಹಾಗೂ ಜೆಡಿಎಸ್ ನಾಯಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ತಾವು ಎಷ್ಟೇ ವಿರೋಧಿಸಿದರು ಕೇಳದೇ ಜಾತಿಗಣತಿ ವರದಿ ಮಂಡನೆಗೆ ಮುಂದಾಗಿದ್ದ ಸಿದ್ದರಾಮಯ್ಯ, ಈಗ ಹೈಕಮಾಂಡ್ ಕಿವಿ ಹಿಂಡುತ್ತಿದ್ದಂತೆ ತನ್ನದೇ ಸರ್ಕಾರದ ವರದಿಯನ್ನು ಕಸಕ್ಕೆ ಎಸೆದು, ಮತ್ತೊಮ್ಮೆ ಮರು ಗಣತಿ ಮಾಡಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಮೂಲಕ ರಾಜ್ಯದ ಜನತೆಗೆ ಮೋಸ ಮಾಡಲು ಮುಂದಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಆದರೆ, ಈ ವಿಷಯದಲ್ಲಿ ಕಾಂಗ್ರೆಸ್ ಇಕ್ಕಟ್ಟಿಗೆ ಸಿಲುಕಿಲ್ಲ. ಬದಲಾಗಿ ಸಿಎಂ ಸಿಲುಕಿದರು ಎನ್ನುವುದಂತೂ ಸತ್ಯ ಎಂದು ಜನ ಮಾತನಾಡಿಕೊಳ್ಳುತ್ತಿದ್ದಾರೆ.