ಒಂದಲ್ಲಾ, ಎರಡಲ್ಲಾ ಬರೋಬ್ಬರಿ 18 ವರ್ಷಗಳು ಕಳೆದು ಹೋಗಿವೆ. ಆದರೆ ಆ ಕನವರಿಕೆ, ಕನಸು, ಬರ ಮಾತ್ರ ಇಂದಿಗೂ ನೀಗಿಲ್ಲ. ಮರಭೂಮಿಯ ಓಯಸಿಸ್ಸಿನಂತೆ ದೊಡ್ಡದೊಂದು ವಿಜಯಪತಾಕೆ ಮುಡಿಗೇರಿದರೆ ಅಭಿಮಾನಿಗಳ ಹಬ್ಬಾಚರಣೆಗೆ ಪಾರವೇ ಇರುವುದಿಲ್ಲ. ಯೆಸ್…ಪಂಜಾಬ್ ವಿರುದ್ಧದ ನಿರ್ಣಾಯಕ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತೋರಿದ ಪರಾಕ್ರಮ ಈ ಬಾರಿ ಕಪ್ ನಮ್ದೇ ಅಂತಾ ಅಭಿಮಾನಿಗಳ ಜೈಕಾರ ಕೂಗುವಂಥಾ ಹುಮ್ಮಸ್ಸು ನೀಡಿದೆ. ನಾಲ್ಕನೇ ಬಾರಿ ಫೈನಲ್ ಪ್ರವೇಶಿಸಿರುವ ಆರ್ ಸಿಬಿ ಈ ಋತುವಿನ ಐಪಿಎಲ್ ವಿಜೇತ ತಂಡವಾಗುವ ದೊಡ್ಡ ಉಮೇದು ಮೂಡಿಸಿದೆ.
2016ರ ಬಳಿಕ ಮೊದಲ ಬಾರಿ ಫೈನಲ್ ಪ್ರವೇಶ
ಜೂನ್ 3….ಈ ಬಾರಿಯ ಮಂಗಳವಾರ ನಿಜಕ್ಕೂ ಆರ್ ಸಿಬಿ ಪಾಲಿಗೆ ಮಂಗಳಕರವಾಗುತ್ತಾ ಎನ್ನುವ ಪ್ರಶ್ನೆ ಮೂಡಿಸಿದೆ. ಹಾಗೆ ನೋಡಿದರೆ, ಈ ಬಾರಿ ಆರ್ ಸಿಬಿ ಸರಣಿಯುದ್ದಕ್ಕೂ ತೋರಿದ ಪ್ರದರ್ಶನ ಅದ್ವಿತೀಯ. ತಂಡದಲ್ಲಿ ವಿರಾಟ್ ಕೊಹ್ಲಿಯಂಥ ಅತ್ಯಮೋಘ ಬ್ಯಾಟರ್, ಋತುರಾಜ್ ಗಾಯಕ್ವಾಡ್ ನಾಯಕತ್ವ, ಜಿತೇಶ್ ಶರ್ಮಾ, ಮಯಾಂಕ್ ಅಗರ್ವಾಲ್ ರ ಸ್ಪೋಟಕ ಫಾರ್ಮ್ ತಂಡಕ್ಕೆ ದೊಡ್ಡ ಬೆನ್ನೆಲುಬಾಗಲಿದೆ.
ಆರ್ ಸಿಬಿಗೆ ಬಲಾಡ್ಯ ಆಲ್ ರೌಂಡರ್ ಗಳ ಬಲ
8 ವರ್ಷಗಳ ಬಳಿಕ ಫೈನಲ್ ಪ್ರವೇಶಿಸಿರುವ ಆರ್ ಸಿಬಿಗೆ ಈ ಬಾರಿ ಆಲ್ ರೌಂಡರ್ ಗಳ ದೊಡ್ಡ ಬಲವಿದೆ. ಕೃನಾಲ್ ಪಾಂಡ್ಯ ಉತ್ತಮ ಫಾರ್ಮ್ ನಲ್ಲಿದ್ದು, ಬ್ಯಾಟಿಂಗ್ ಬೌಲಿಂಗ್ ನಲ್ಲಿ ಮಿಂಚಿದ್ದಾರೆ. ರೊಮಾರಿಯೋ ಶೆಫರ್ಡ್, ಜೇಕಬ್ ಬೆಥೆಲ್ ಕೂಡಾ ಪಂದ್ಯದ ದಿಕ್ಕು ಬದಲಿಸೋ ಛಾತಿ ಹೊಂದಿದ್ದಾರೆ. ಇದಕ್ಕೆ ಬೆನ್ನೆಲುಬೆನ್ನುವಂತೆ ವೇಗಿ ಭುವನೇಶ್ವರ್ ಕುಮಾರ್ ಉತ್ತಮ ಲಯದಲ್ಲಿದ್ದರೆ, ಹ್ಯಾಜಲ್ ವುಡ್, ಯಶ್ ದಯಾಳ್, ತುಷಾರ ಎದುರಾಳಿಗಳಿಗೆ ನೀರು ಕುಡಿಸುವ ತಾಕತ್ತು ಹೊಂದಿದ್ದಾರೆ.
ಐಪಿಎಲ್ ಗೆ ಈ ಬಾರಿ ಬಾಸ್ ಆಗುತ್ತಾ ಬೆಂಗಳೂರು…?
18 ವರ್ಷಗಳಿಂದ ಇವತ್ತಿನವರೆಗೂ ಚಾಂಪಿಯನ್ ಕಿರೀಟವನ್ನು ಮುಡಿಗೇರಿಸಿಕೊಳ್ಳಲಾಗದ ಬೆಂಗಳೂರು ಈ ಬಾರಿ ಹೊಸ ಉಮೇದಿನಲ್ಲಿದೆ. ಯುವ ಪಡೆ ಜೊತೆ ಹಿರಿಯರ ಅನುಭವ ಸಾಥ್ ಆದ್ರೆ ಎಂಥಾ ದೊಡ್ಡ ಮೊತ್ತವನ್ನೇ ಬೆನ್ನಟ್ಟಿ ಬೇಟೆಯಾಡೋ ತಾಕತ್ತಿದೆ. ಆದ್ರೆ, 3 ಬಾರಿ ಫೈನಲ್ಸ್ ನಲ್ಲಿ ಮುಗ್ಗರಿಸಿರೋ ಇತಿಹಾಸವಿರೋ ತಂಡ ಈ ಬಾರಿ ಅದೆಂಥಾ ಮೋಡಿ ಮಾಡುತ್ತೆ, ಅಭಿಮಾನಿಗಳ ಕಪ್ ನಮ್ದೇ ಧ್ಯೇಯವನ್ನು ಸಕಾರವಾಗಿಸುತ್ತಾ ಅನ್ನೋದು ಈಗಿರುವ ಪ್ರಶ್ನೆ.