ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಶುಕ್ರವಾರ ವ್ಯಾಪಕ ಮಳೆಯಾಗಿದೆ. ಬಹುತೇಕ ಬೆಂಗಳೂರಿನಲ್ಲಿ ವರುಣ ಅಬ್ಬರಿಸಿದ್ದಾನೆ. ಹೀಗಾಗಿ ಹಲವೆಡೆ ಜನ ತೊಂದರೆ ಅನುಭವಿಸಿದ್ದಾರೆ.
ಮಲ್ಲೇಶ್ವರಂ, ಗಾಂಧಿನಗರ, ಕೆ.ಆರ್ ಸರ್ಕಲ್, ಶಿವಾನಂದ ಸರ್ಕಲ್ ಸೇರಿದಂತೆ ಸುತ್ತಮುತ್ತ ಪ್ರದೇಶಗಳಲ್ಲಿ ವ್ಯಾಪಕ ಮಳೆಯಾಗಿದೆ. ಹೀಗಾಗಿ ಹಲವೆಡೆ ವಿದ್ಯುತ್ ವ್ಯತ್ಯ ಉಂಟಾಗಿದೆ. ವಾಹನ ಸವಾರರು ಹಲವು ಹೊತ್ತು ಫ್ಲೈ ಓವರ್ ಸೇರಿದಂತೆ ಹಲವೆಡೆ ಆಶ್ರಯ ಪಡೆದು ಪರಿತಪಿಸಿದ್ದಾರೆ.

ಮುಂದಿನ ಮೂರು ಗಂಟೆಗಳಲ್ಲಿ ಬೆಂಗಳೂರು ನಗರ ಹಾಗೂ ಗ್ರಾಮಾಂತರ ಭಾಗದಲ್ಲಿ ಗುಡುಗು ಸಹಿತ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಎಚ್ಚರಿಕೆ ನೀಡಿದೆ. ಮಲ್ಲೇಶ್ವರಂ 17ನೇ ಕ್ರಾಸ್ನಲ್ಲಿ ಕಾರಿನ ಪಕ್ಕದಲ್ಲೇ ಮರದ ರೆಂಬೆ ಬಿದ್ದಿದ್ದು, ಅದೃಷ್ಟವಶಾತ್ ಪ್ರಾಣಪಾಯ ಸಂಭವಿಸಿಲ್ಲ. ಹೀಗಾಗಿ ಟ್ರಾಫಿಕ್ ಜಾಮ್ ಉಂಟಾಗಿತ್ತು.
ಶೇಷಾದ್ರಿಪುರಂ ಬಳಿ ರಸ್ತೆಯಲ್ಲಿ ಕಾರಿನ ಮೇಲೆ ಮರದ ರೆಂಬೆ ಬಿದ್ದಿದ್ದು, ವಾಹನ ಸಂಚಾರಕ್ಕೆ ತೊಂದರೆ ಮಾಡಿತ್ತು. ಸರ್ಜಾಪುರದ ಸೋಂಪುರ ಗೇಟ್ ಬಳಿ ಬೃಹತ್ ಹೋರ್ಡಿಂಗ್ಸ್ ಬಿದ್ದಿದ್ದು, ಯಾವುದೇ ಅನಾಹುತ ಆಗಿಲ್ಲ. ನ್ಯಾಷನಲ್ ಕಾಲೇಜು ಮೆಟ್ರೋ ನಿಲ್ದಾಣದ ಬಳಿ ಬೃಹತ್ ಮರದ ಕೊಂಬೆ ಬಿದ್ದಿದೆ.