ಉಡುಪಿ: ಜಿಲ್ಲೆಯಲ್ಲಿ ಕಳೆದ ಮೂರ್ನಾಲ್ಕು ದಿನಗಳಿಂದ ವ್ಯಾಪಕವಾಗಿ ಮಳೆಯಾಗುತ್ತಿದೆ. ಇದರಿಂದಾಗಿ ಹಲವೆಡೆ ಪ್ರವಾಹ ಉಂಟಾಗಿದೆ. ನದಿ ಪಾತ್ರಗಳಲ್ಲಿನ ಹಳ್ಳಿಗಳು ಜಲ ದಿಗ್ಬಂಧನಕ್ಕೊಳಗಾಗಿವೆ. ಅಲ್ಲದೇ, ಅಲ್ಲಲ್ಲಿ ಸಾಕಷ್ಟು ಅವಾಂತರಗಳು ಕೂಡ ನಡೆದಿವೆ.
ಭಾರೀ ಗಾಳಿ- ಮಳೆಗೆ ನಾಗೂರಿನಲ್ಲಿ ನೂರಾರು ವರ್ಷಗಳ ಹಳೆಯ ಮರ ಉರುಳಿ ಬಿದ್ದಿದೆ. ಕಿರಿಮಂಜೇಶ್ವರ ಗ್ರಾಮ ಪಂಚಾಯತ್ ವ್ಯಾಪ್ತಿಯ ನಾಗೂರಿನಿಂದ ಕೊಡೇರಿ ಹೊಸಹಿತ್ಲು ಸಿಂಗಾರ ಗರಡಿ ಮನೆಗೆ ಸಂಪರ್ಕ ಕಲ್ಪಿಸುವ ರಸ್ತೆಯಲ್ಲಿ ಮರದ ಕೊಂಬೆ ಬಿದ್ದ ಪರಿಣಾಮ ಎರಡು ವಿದ್ಯುತ್ ಕಂಬಗಳು ಧರೆಗೆ ಉರುಳಿವೆ. ಇದರಿಂದಾಗಿ ಕೆಲವು ಹೊತ್ತು ರಸ್ತೆ ಸಂಪರ್ಕ ಬಂದ್ ಆಗಿದ್ದು, ಸ್ಥಳೀಯರ ನೆರವಿನಿಂದ ಸ್ಥಳೀಯಾಡಳಿತ ತೆರವುಗೊಳಿಸಿದೆ. ಕಿರಿಮಂಜೇಶ್ವರ ಗ್ರಾಪಂ ಅಧ್ಯಕ್ಷ ಶೇಖರ ಖಾರ್ವಿ, ಸದಸ್ಯ ಕೃಷ್ಣ ಖಾರ್ವಿ, ಲೈನ್ ಮ್ಯಾನ್ ಉಮೇಶ್, ಸಿಬ್ಬಂದಿ ರಮೇಶ್ ಸೇರಿದಂತೆ ಸ್ಥಳೀಯರು ಉಪಸ್ಥಿತರಿದ್ದರು.