ಬಾಗಲಕೋಟೆ: ಆರತಕ್ಷತೆ ಸಮಯದಲ್ಲಿಯೇ ವರನಿಗೆ ಹೃದಯಾಘಾತವಾಗಿರುವ (Heart Attack) ಹೃದಯ ವಿದ್ರಾವಕ ಘಟನೆ ನಡೆದಿದೆ.
ಬಾಗಲಕೋಟೆ (Bagalkote) ಜಿಲ್ಲೆಯ ಜಮಖಂಡಿ (Jamakhandi) ನಗರದಲ್ಲಿ ಈ ಘಟನೆ ನಡೆದಿದೆ. ಪ್ರವೀಣ್ ಕುರಣಿ ಸಾವನ್ನಪ್ಪಿರುವ ವರ ಎನ್ನಲಾಗಿದೆ. ಜಮಖಂಡಿ ನಗರದ ನಂದಿಕೇಶ್ವರ ಕಲ್ಯಾಣ ಮಂಟಪದಲ್ಲಿ ಪ್ರವೀಣ್ ಕುರಣಿ ಹಾಗೂ ಪೂಜಾ ಎಂಬುವವರ ಮದುವೆ ನಿಶ್ಚಯವಾಗಿತ್ತು. ಆದರೆ, ಆರತಕ್ಷತೆ ಮುಗಿಯುವಷ್ಟರಲ್ಲಿ ಮಧುಮಗ ಪ್ರವೀಣ್ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.
ಪ್ರವೀಣ್ ರಾಜ್ಯ ಸೈಕ್ಲಿಂಗ್ ಕಾರ್ಯದರ್ಶಿ ಶ್ರೀಶೈಲ ಕುರಣಿ ಅವರ ಪುತ್ರ. ಮೂಲತಃ ಜಮಖಂಡಿ ತಾಲೂಕಿನ ಕುಂಬಾರಹಳ್ಳಿ ಗ್ರಾಮದವರು. ಕುಟುಂಬಸ್ಥರು ಅದ್ದೂರಿಯಾಗಿ ಮದುವೆಗೆ ತಯಾರಿ ಮಾಡಿಕೊಂಡಿದ್ದರು. ಅದರಂತೆ ಸಂಭ್ರಮದಿಂದ ಮದುವೆ ನಡೆದಿತ್ತು. ಅಲ್ಲದೇ ದೈವದ ಅಕ್ಕಿಕಾಳು ಕಾರ್ಯ ನಡೆದಿತ್ತು. ನವ ದಂಪತಿಗೆ ಬಂಧು-ಮಿತ್ರರು ಆರತಕ್ಷತೆ ಹಾಕಿ ಆಶೀರ್ವದಿಸಲು ಕೂಡ ಆಗಮಿಸಿದ್ದರು. ಆದರೆ, ಅಷ್ಟರಲ್ಲಿ ವರ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ಸಂಭ್ರಮದಲ್ಲಿದ್ದ ಕುಟುಂಬ ಕಣ್ಣೀರು ಸುರಿಸುತ್ತಿದೆ.