ವಿಜಯ್ ಹಜಾರೆ ಟ್ರೋಫಿಯಲ್ಲಿ ಕರ್ನಾಟಕ ತಂಡವು ಹ್ಯಾಟ್ರಿಕ್ ಗೆಲುವು ದಾಖಲಿಸಿದೆ. ಈ ಮೂಲಕ ತನ್ನ ಅಜೇಯ ನಾಗಾಲೋಟ ಮುಂದುವರೆಸಿದೆ.
ಇಲ್ಲಿಯವರೆಗೆ ಆಡಿರುವ ಮೂರು ಪಂದ್ಯಗಳನ್ನು ಗೆದ್ದಿರುವ ಮಯಾಂಕ್ ಅಗರ್ವಾಲ್ ಪಡೆ ಸಿ ಗುಂಪಿನಲ್ಲಿ ಅಗ್ರಸ್ಥಾನಕ್ಕೆ ಏರಿಕೆ ಕಂಡಿದೆ. ಇಂದು ನಡೆದ ಮೂರನೇ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಪಂಜಾಬ್ ತಂಡ 49.2 ಓವರ್ ಗಳಲ್ಲಿ ತನ್ನೆಲ್ಲ ವಿಕೆಟ್ ಕಳೆದುಕೊಂಡು 247 ರನ್ ಗಳಿಸಿತ್ತು. ಈ ಗುರಿ ಬೆನ್ನಟ್ಟಿದ ಕರ್ನಾಟಕ ತಂಡ ನಾಯಕ ಮಯಾಂಕ್ ಅಗರ್ವಾಲ್ ಸಿಡಿಸಿದ ಶತಕದ ನೆರವಿನಿಂದ 9 ವಿಕೆಟ್ ಕಳೆದುಕೊಂಡು 15 ಎಸೆತಗಳು ಬಾಕಿ ಇರುವಂತೆ ಜಯದ ನಗೆ ಬೀರಿದೆ.
ಪಂಜಾಬ್ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಆರಂಭಿಕರಿಬ್ಬರು ಮೊದಲ ವಿಕೆಟ್ ಗೆ 39 ರನ್ ಗಳ ಜೊತೆಯಾಟ ನೀಡಿದರು. ಈ ವೇಳೆ ಚೊಚ್ಚಲ ವಿಜಯ್ ಹಜಾರೆ ಟ್ರೋಫಿ ಪಂದ್ಯವನ್ನಾಡಿದ ಅಭಿಲಾಷ್ ಶೆಟ್ಟಿ ಪಂಜಾಬ್ ನಾಯಕ ಅಭಿಷೇಕ್ ಶರ್ಮಾ ವಿಕೆಟ್ ಉರುಳಿಸಿ ತಂಡಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. ಸ್ಫೋಟಕ ಬ್ಯಾಟರ್ ಪ್ರಭಾಸಿಮ್ರಾನ್ ಸಿಂಗ್ ಕೂಡ ಕೌಶಿಕ್ ಎಸೆತದಲ್ಲಿ ವಿಕೆಟ್ ಒಪ್ಪಿಸಿದರು. ನಂತರ ಅನ್ಮೋಲ್ಪ್ರೀತ್ ಸಿಂಗ್ ಹಾಗೂ ನೆಹಾಲ್ ವದೇರಾ 3ನೇ ವಿಕೆಟ್ ಗೆ ಅರ್ಧಶತಕದ ಜೊತೆಯಾಟ ನೀಡಿ ತಂಡಕ್ಕೆ ಆಸರೆಯಾದರು.
ಅನ್ಮೋಲ್ಪ್ರೀತ್ ಸಿಂಗ್ 51, ನೆಹಾಲ್ 37, ಅನ್ಮೋಲ್ ಮಲ್ಹೋತ್ರಾ 42, ಸನ್ವೀರ್ ಸಿಂಗ್ 35 ರನ್ ಗಳಿಸಿದರು. ಪರಿಣಾಮ ಪಂಜಾಬ್ ತಂಡ 247 ರನ್ ಗಳಿಸಿತು. ಅಭಿಲಾಷ್ ಶೆಟ್ಟಿ ಮೊದಲ ಪಂದ್ಯದಲ್ಲೇ 5 ವಿಕೆಟ್ ಪಡೆದು ಮಿಂಚಿದರು. ಕೌಶಿಕ್ ಹಾಗೂ ನಿಖಿನ್ ತಲಾ 2 ವಿಕೆಟ್ ಪಡೆದರು.
ಗುರಿ ಬೆನ್ನಟ್ಟಿದ ಕರ್ನಾಟಕ ತಂಡಕ್ಕೆ ಆರಂಭಿಕ ಜೋಡಿಯಿಂದ 50 ರನ್ ಗಳ ಜೊತೆಯಾಟ ಸಿಕ್ಕಿತು. ಆರಂಭಿಕ ನಿಖಿನ್ 13 ರನ್ ಕಲೆಹಾಕಿ ವಿಕೆಟ್ ಒಪ್ಪಿಸಿದರು. ಆರಂಭದಿಂದಲೂ ಉತ್ತಮ ರನ್ ಗಳಿಸಿದ ನಾಯಕ ಮಯಾಂಕ್ ಕೊನೆಯವರೆಗೂ ಅಜೇಯರಾಗಿ ಉಳಿದು ಸ್ಫೋಟಕ ಶತಕ ಸಿಡಿಸಿದಲ್ಲದೆ ತಂಡಕ್ಕೆ ಗೆಲುವು ತಂದದು ಕೊಟ್ಟರು. ಮಯಾಂಕ್ ಗೆ ಸಾಥ್ ನೀಡಿದ ಶ್ರೇಯಸ್ ಗೋಪಾಲ್ 29 ರನ್ಗಳ ಕಾಣಿಕೆ ನೀಡಿದರೆ, ಅಭಿನವ್ ಮನೋಹರ್ 20 ರನ್ ಗಳಿಸಿದರು.
ಮಯಾಂಕ್ 127 ಎಸೆತಗಳನ್ನು ಎದುರಿಸಿ 13 ಬೌಂಡರಿ ಹಾಗೂ 3 ಭರ್ಜರಿ ಸಿಕ್ಸರ್ ಗಳ ನೆರವಿನಿಂದ 139 ರನ್ ಗಳಿಸಿದರು.