ಮಹಾಯತಿ ಹೆಸರಲ್ಲಿ ಮಹಾರಾಷ್ಟ್ರದಲ್ಲಿ ಬಿಜೆಪಿ ನೇತೃತ್ವದ ದೋಸ್ತಿ ಕೂಟ ಆಡಳಿತ ನಡೆಸ್ತಿದೆ. ಎನ್ ಸಿಪಿಯ ಅಜಿತ್ ಪವಾರ್, ಶಿವಸೇನೆಯ ಬಂಡಾಯ ನಾಯಕ ಏಕನಾಥ್ ಶಿಂಧೆಯವರನ್ನು ತೂಗಿಕೊಂಡು ಬಿಜೆಪಿಯ ಫಡ್ನವಿಸ್ ಸರ್ಕಾರ ನಡೆಸಿದ್ದಾರೆ. ಮೇಲ್ನೋಟಕ್ಕೆ ಎಲ್ಲವೂ ಸಾಂಗವಾಗಿದ್ರೂ, ಒಳಗೊಳಗೇ ಭಿನ್ನ ಬೇಗುದಿ ಕೊತಕೊತ ಕುದಿಯುತ್ತಿದೆ ಅನ್ನೋದು ಬಹಿರಂಗ ಸತ್ಯ. ಸಿಎಂ ಹುದ್ದೆ ಕೈತಪ್ರಿದ್ರೂ ಒಲ್ಲದ ಮನಸ್ಸಿನಿಂದಲೇ ಏಕನಾಥ ಶಿಂಧೆ ಸರ್ಕಾರದ ಭಾಗವಾಗಿದ್ದಾರೆ ಎನ್ನಲಾಗ್ತಿದೆ. ಆದ್ರೆ, ಈ ಆಂತರಿಕ ಕಲಹಕ್ಕೆ ತುಪ್ಪ ಸುರಿಯುವಂಥಾ ಬೆಳವಣಿಗೆ ನಿನ್ನೆ ನಡೆದಿದೆ. ಹೌದು, ದಿಢೀರ್ ಬೆಳವಣಿಗೆಯಲ್ಲಿ ಏಕನಾಥ ಶಿಂಧೆ…. ಎಂಎನ್ ಎಸ್ ನಾಯಕ ರಾಜ್ ಠಾಕ್ರೆ ಜೊತೆ ಡಿನ್ನರ್ ಪಾಲಿಟಿಕ್ಸ್ ಮಾಡಿದ್ದಾರೆ.
ಮಹಾರಾಷ್ಟ್ರದಲ್ಲಿ ಶುರುವಾಯ್ತು ಹೊಸ ಸಮೀಕರಣ
ಏಕನಾಥ್ ಶಿಂಧೆ ಈ ಮೊದಲು ಉದ್ಧವ್ ಠಾಕ್ರೆ ನೇತೃತ್ವದ ಶಿವಸೇನೆಯಲ್ಲಿ ಪ್ರಶ್ನಾತೀತ ನಾಯಕರಾಗಿದ್ದವರು. ಆದರೆ ಬದಲಾದ ಕಾಲಘಟ್ಟದಲ್ಲಿ ಬಾಳಾ ಸಾಬ್ ಠಾಕ್ರೆ ಕಟ್ಟಿದ್ದ ಅಖಂಡ ಶಿವಸೇನೆಯನ್ನೇ ಎರಡು ತುಂಡಾಗಿಸಿ ಹೊರ ಬಂದು ಸಿಎಂ ಆದ ಕೀರ್ತಿ ಶಿಂಧೆಯದ್ದು. ಠಾಣೆಯ ಈ ಮುಖಂಡ ಇದೀಗ ಏಕಾಏಕಿ ಮತ್ತದೇ ಠಾಕ್ರೆ ಕುಡಿಯನ್ನು ಭೇಟಿಯಾಗಿರೋದು ಕುತೂಹಲ ಕೆರಳಿಸಿದೆ. ಶೀಘ್ರದಲ್ಲೇ ಮುಂಬೈ ಮಹಾನಗರ ಪಾಲಿಕೆ ಸೇರಿದಂತೆ ಸ್ಥಳೀಯ ಸಂಸ್ಥೆ ಚುನಾವಣೆಗೆ ಮುಹೂರ್ತ ನಿಗದಿಯಾಗಲಿದೆ. ಈ ನಿಟ್ಟಿನಲ್ಲೇ ಶಿಂಧೆ ಶಿವಸೇನೆ ಮತ್ತು ಎಂಎನ್ ಎಸ್ ಮೈತ್ರಿ ಮಾಡಿಕೊಂಡು ಅಖಾಡಕ್ಕಿಳಿದ್ರೆ ಒಂದೇ ಏಟಲ್ಲಿ ಎರಡು ಹಕ್ಕಿ ಹೊಡೆಯೋ ಪ್ಲ್ಯಾನ್ ಮಾಡಿದ್ದಾರೆ.
ಉದ್ಧವ್ ಶಿವಸೇನೆಗೆ ಅಂತಿಮ ಮೊಳೆ
ಯೆಸ್…ಶಿಂಧೆ-ಠಾಕ್ರೆ ಒಂದಾದ್ರೆ ಮಹಾರಾಷ್ಟ್ರದ ರಾಜಕೀಯ ಗಣಿತವೇ ಬುಡಮೇಲಾಗುತ್ತೆ. ಹೇಳಿ ಕೇಳಿ ಇಬ್ರೂ ಮರಾಠಿ ಅಸ್ಮಿತೆಗಾಗಿ ಹೋರಾಟ ನಡೆಸಿರುವ ನಾಯಕರೇ..ಇಬ್ರೂ ಫೈರ್ ಬ್ರಾಂಡ್ ಗಳೇ..ಇಬ್ರೂ ಒಂದಾಗಿ ಫೀಲ್ಡಿಗಿಳಿದ್ರೆ, ಮರಾಠಿ ಮತಗಳ ಕ್ರೋಢೀಕರಣವಾಗಲಿದೆ. ಇದರ ಮೊದಲ ಪೆಟ್ಟು ಉದ್ಧವ್ ಠಾಕ್ರೆಗೆ ಬೀಳಲಿದೆ. ಅಲ್ಲಿಗೆ ಅಳಿದುಳಿದ ಉದ್ಧವ್ ಶಿವಸೇನೆ ನಾಮಾವಶೇಷವಾಗಲಿದೆ. ಇತ್ತ ಸಿಎಂ ಕುರ್ಚಿ ಮೇಲೆ ಕಣ್ಣಿಟ್ಟಿರೋ ಶಿಂಧೆ ಈ ಮೂಲಕ ನೇರವಾಗೇ ಬಿಜೆಪಿಯನ್ನು ಇಕ್ಕಟ್ಟಿಗೆ ಸಿಲುಕಿಸಬಹುದು.
ಮೈತ್ರಿಕೂಟದಿಂದ ಒಂದು ಕಾಲು ಹೊರಗಿಟ್ರಾ ಶಿಂಧೆ
ಶೀಘ್ರದಲ್ಲೇ ಸ್ಥಳೀಯ ಸಂಸ್ಥೆಗಳಿಗೆ ಚುನಾವಣೆ ಘೋಷಣೆಯಾಗಲಿದೆ. ಮುಂಬೈ, ಠಾಣೆ, ನವೀ ಮುಂಬೈ, ಬೋರಿವಲಿ, ವರ್ಲಿ, ಕಲ್ಯಾಣ್, ನಾಸಿಕ್, ಪುಣೆ, ಛತ್ರಪತಿ ಸಂಭಾಜಿ ನಗರ್ ಗಳಲ್ಲಿ ಶಿಂಧೆ-ಠಾಕ್ರೆಗೆ ಭಾರೀ ಜನ ಬೆಂಬಲವಿದೆ. ಇದನ್ನೇ ದಾಳವಾಗಿಸಿ ಅತ್ಯಧಿಕ ಗೆಲವು ದಾಖಲಿಸಿದ್ರೆ ಭವಿಷ್ಯದಲ್ಲಿ ಮಹಾರಾಷ್ಟ್ರ ರಾಜಕೀಯದ ಲೆಕ್ಕಾಚಾರಗಳನ್ನೇ ಬುಡುಮೇಲು ಮಾಡಲಿದೆ. ರಾಜ್ ಠಾಕ್ರೆಯ ಮುಂಬೈನ ಶಿವತೀರ್ಥ ನಿವಾಸದಲ್ಲಿ ನಿನ್ನೆ ಇಬ್ಬರು ಪವರ್ ಪುಲ್ ನಾಯಕರ ಮೀಟಿಂಗ್ ಪ್ರತ್ಯಕ್ಷವಾಗಿ ಮತ್ತು ಪರೋಕ್ಷವಾಗಿ ಹಲವು ನಾಯಕರ ನಿದ್ದೆಗೆಡಿಸಿರೋದಂತೂ ಸತ್ಯ. ಇದರ ನಡುವೆ, ಸಿಎಂ ಆಗೋ ಕನಸು ಕಾಣುತ್ತಲೇ ಇರುವ ಅತಿಜ್ ಪವಾರ್ ಮುಂದಿನ ನಡೆಯೂ ಅಸ್ಪಷ್ಟವಾಗಿದೆ.