ಬೆಳಗಾವಿ: ಕಾಂಗ್ರೆಸ್ ಸರ್ಕಾರ (Congress Government) ಜಾರಿಗೆ ತಂದಿರುವ ಗೃಹಲಕ್ಷ್ಮಿ (Gruha Lakshmi) ಯೋಜನೆಯ ಹಣ ಹಲವಾರು ರೀತಿಯಲ್ಲಿ ಉಪಯೋಗವಾಗಿರುವುದನ್ನು ನಾವು ಇತ್ತೀಚೆಗೆ ನೋಡುತ್ತಿದ್ದೇವೆ. ಈಗ ಕಣ್ಣಿನ ಆಪರೇಷನ್ ಗೂ ಗೃಹಲಕ್ಷ್ಮೀ ಯೋಜನೆಯ ಹಣ ಆಸರೆಯಾಗಿರುವ ಘಟನೆಯೊಂದು ವರದಿಯಾಗಿದೆ.
ಗೃಹಲಕ್ಷ್ಮೀ ಯೋಜನೆಯ ಹಣದಿಂದ ಮಹಿಳೆಯೊಬ್ಬರು ಪತಿಯ ಕಣ್ಣಿನ ಆಪರೇಷನ್ (Eye Operation) ಮಾಡಿಸಿದ್ದಾರೆ. ಬೆಳಗಾವಿಯ ಅನಗೋಳ ನಗರದಲ್ಲಿ ಅನಿತಾ ಮತ್ತು ಚಂದ್ರಶೇಖರ್ ಬಡಿಗೇರ ಎಂಬ ದಂಪತಿಯೇ ಈಗ ಗೃಹ ಲಕ್ಷ್ಮೀಯಿಂದ ನೆಮ್ಮದಿಯ ಬದುಕು ಕಟ್ಟಿಕೊಂಡವರು.
ಅನಿತಾ ಪತಿ ಚಂದ್ರಶೇಖರ್ ಅವರಿಗೆ ದೃಷ್ಟಿ ದೋಷದ ಸಮಸ್ಯೆ ಇತ್ತು. ಹೀಗಾಗಿ ವೈದ್ಯರು ಆಪರೇಷನ್ ಮಾಡಲು ಸೂಚಿಸಿದ್ದರು. ಆದರೆ, ಅವರಿಗೆ ಬೇರೆ ಯಾವ ಮೂಲದಿಂದಲೂ ಹಣದ ಸಹಾಯವಾಗಿರಲಿಲ್ಲ. ಆದರೆ, ಗೃಹಲಕ್ಷ್ಮಿ ಯೋಜನೆಯಿಂದ ಬಂದ ಹಣವನ್ನು ಅನಿತಾ ಕೂಡಿಟ್ಟಿದ್ದರು. ಅದೇ ಅವರ ಬದುಕಿಗೆ ಬೆಳಕಾಗುವಂತಾಯಿತು.
ಗೃಹಲಕ್ಷ್ಮಿಯಿಂದ ಬಂದ 18 ಸಾವಿರ ರೂ. ಮತ್ತು ತನ್ನ ಬಳಿ ಇದ್ದ 10 ಸಾವಿರ ಹಣ ಸೇರಿಸಿ ಪತಿ ಚಂದ್ರಶೇಖರ್ ಅವರ ಕಣ್ಣಿನ ಆಪರೇಷನ್ ನ್ನು ಪತ್ನಿ ಮಾಡಿಸಿದ್ದಾರೆ. ಈಗ ಆಪರೇಷನ್ ಯಶಸ್ವಿಯಾಗಿದೆ. ಹೀಗಾಗಿ ದಂಪತಿಗಳು ವಿಡಿಯೋ ಮಾಡಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ.