ಬೆಂಗಳೂರು: ಇಂದಿನಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರ ಅಸ್ತಿತ್ವಕ್ಕೆ ಬಂದಿದ್ದು, ಐದು ನಗರ ಪಾಲಿಕೆ ವ್ಯಾಪ್ತಿಗೆ ಆಡಳಿತಗಾರರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳಿಗೆ ಓರ್ವ ಆಡಳಿತಗಾರರನ್ನು ನೇಮಕ ಮಾಡಿದ್ದು, ಜಿಬಿಎ ಮುಖ್ಯ ಆಯುಕ್ತ ಮಹೇಶ್ವರ್ ರಾವ್ ರನ್ನೇ ಆಡಳಿತಗಾರರಾಗಿ ನೇಮಕ ಮಾಡಿ ಆದೇಶ ಹೊರಡಿಸಿದೆ.
ಇನ್ನು, ಗ್ರೇಟರ್ ಬೆಂಗಳೂರು ಪ್ರಾಧಿಕಾರ ಮತ್ತು ನಗರ ಪಾಲಿಕೆಗಳಿಗೆ ಐಎಎಸ್, ಕೆಎಎಸ್ ಮತ್ತು ಐಪಿಎಸ್, ಕೆಎಸ್ಪಿಎಸ್ ಹುದ್ದೆಗಳನ್ನು ಹಂಚಿಕೆ ಮಾಡಿ ನಗರಾಭಿವೃದ್ಧಿ ಇಲಾಖೆ ಆದೇಶ ಹೊರಡಿಸಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದಲ್ಲಿ ಮುಖ್ಯ ಆಯುಕ್ತರ ಒಂದು ಹುದ್ದೆ ಇರಲಿದ್ದು ಪ್ರಧಾನ ಕಾರ್ಯದರ್ಶಿ ಅಥವಾ ಅದಕ್ಕಿಂತ ಉನ್ನತ ಶ್ರೇಣಿ ಹೊಂದಿದವರಾಗಿರಬೇಕು. ಆಡಳಿತ, ಕಂದಾಯ ಮತ್ತು ಮಾಹಿತಿ ತಂತ್ರಜ್ಞಾನ ವಿಶೇಷ ಆಯುಕ್ತ, ಆರೋಗ್ಯ ಮತ್ತು ಶಿಕ್ಷಣ ವಿಶೇಷ ಆಯುಕ್ತ, ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ ವಿಶೇಷ ಆಯುಕ್ತ, ಹಣಕಾಸು ಮುಖ್ಯ ಆಯುಕ್ತ ಹುದ್ದೆಗೆ ಐಎಎಸ್ ಅಧಿಕಾರಿಗಳು ಇರಲಿದ್ದಾರೆ. ಒಂದು ಎಡಿಜಿಪಿ, ಒಂದು ಎಸ್ಪಿ ಹುದ್ದೆ ಇರಲಿದೆ.
ಬೆಂಗಳೂರು ಕೇಂದ್ರ, ಪೂರ್ವ, ಪಶ್ಚಿಮ, ಉತ್ತರ ಮತ್ತು ದಕ್ಷಿಣ ನಗರ ಪಾಲಿಕೆಗಳಿಗೆ ಕಾರ್ಯದರ್ಶಿ ಶ್ರೇಣಿಯ ಐಎಎಸ್ ಅಧಿಕಾರಿಗಳು ಆಯುಕ್ತರಾಗಲಿದ್ದಾರೆ. ಹಿರಿಯ ಐಎಎಸ್ ಅಧಿಕಾರಿಗಳು ಹೆಚ್ಚುವರಿ ಆಯುಕ್ತರಾಗಲಿದ್ದಾರೆ.
ಈ ಐದು ನಗರಪಾಲಿಕೆಗಳಿಗೆ ಕೆಎಎಸ್ ಶ್ರೇಣಿಯ ಹೆಚ್ಚುವರಿ ಆಯುಕ್ತರು ತಲಾ ಒಬ್ಬರಂತೆ ಇರುವರು. ಹಿರಿಯ ಶ್ರೇಣಿಯ ಅಧಿಕಾರಿಗಳು ತಲಾ ಇಬ್ಬರಂತೆ ವಲಯ ಜಂಟಿ ಆಯುಕ್ತರಾಗಿರುವರು. ಒಂದು ಡಿವೈಎಸ್ಪಿ ಹುದ್ದೆ ಇರಲಿದೆ ಎಂದು ಆದೇಶದಲ್ಲಿ ತಿಳಿಸಿದೆ.



















