ಬೆಂಗಳೂರು: ರಾಜ್ಯದ ಹಲವೆಡೆ ವ್ಯಾಪಕವಾಗಿ ಮಳೆ ಸುರಿದಿದೆ. ಹೀಗಾಗಿ ಅತಿವೃಷ್ಟಿ, ನೆರೆ ಹಾವಳಿ ಸಂಭವಿಸಿದೆ. ಸದ್ಯದ ಅಂದಾಜಿನಂತೆ 70 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬೆಳೆ ನಷ್ಟವಾಗಿದೆ. ಹೀಗಾಗಿ ವಾರದೊಳಗೆ ರೈತರಿಗೆ ನಷ್ಟ ಪರಿಹಾರ ತಲುಪಿಸಲು ಸರ್ಕಾರ ಸಿದ್ಧತೆ ನಡೆಸಿದೆ ಎನ್ನಲಾಗಿದೆ.
ಬೆಳೆ ನಷ್ಟ ಪರಿಹಾರ ಸೇರಿದಂತೆ ಮಳೆಯಿಂದಾಗಿ ರಾಜ್ಯದಲ್ಲಿ ಹಾಳಾದ ರಸ್ತೆ, ಕುಸಿದ ಸೇತುವೆ ಮತ್ತು ಶಾಲಾ ಕಟ್ಟಡಗಳ ಮರು ನಿರ್ಮಾಣ ಒಳಗೊಂಡು ಪರಿಹಾರ ಕಾರ್ಯಗಳಿಗೆ ಜಿಲ್ಲಾಧಿಕಾರಿಗಳ ಖಾತೆಯಲ್ಲಿನ 767 ಕೋಟಿ ರೂ. ಬಳಕೆಗೆ ಸೂಚನೆ ನೀಡುವುದರ ಮೂಲಕ ರಾಜ್ಯ ವಿಪತ್ತು ನಿಧಿಯಿಂದ 300 ಕೋಟಿ ರೂ. ಬಿಡುಗಡೆ ಮಾಡಲಾಗಿದೆ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಹೇಳಿದ್ದಾರೆ.
ಮನೆ ಕುಸಿತ ಪ್ರಕರಣಗಳಲ್ಲಿ ಸಂಪೂರ್ಣ ಹಾಳಾಗಿದ್ದರೆ ಹೊಸ ಮನೆ ನಿರ್ಮಾಣ ಮಾಡುವುದರೊಂದಿಗೆ ಭಾಗಶಃ ಕುಸಿತ ಪ್ರಕರಣಗಳಲ್ಲಿ ಮಾರ್ಗಸೂಚಿಗಿಂತ 50 ಸಾವಿರ ರೂ. ಹೆಚ್ಚುವರಿ ಪರಿಹಾರ ವಿತರಣೆಗೆ ಈಗಾಗಲೇ ಆದೇಶ ಹೊರಡಿಸಲಾಗಿದೆ ಎಂದು ಹೇಳಿದ್ದಾರೆ. ರಾಜ್ಯದಲ್ಲಿ ಮಳೆ ಹಾಗೂ ಪ್ರವಾಹಕ್ಕೆ 58 ಜನ ಬಲಿಯಾಗಿದ್ದಾರೆ. 1,763 ಪ್ರವಾಹ ಪೀಡಿತ ಗ್ರಾಮಗಳಲ್ಲಿ ಪರಿಹಾರ ಹಾಗೂ ನಷ್ಟ ಸಮೀಕ್ಷಾ ಕಾರ್ಯ ಮುಂದುವರಿದಿದೆ. ವಾಡಿಕೆಗಿಂತ ಹೆಚ್ಚು ಮಳೆ ನಿರೀಕ್ಷಿಸಿ ಸಾಕಷ್ಟು ಪೂರ್ವಸಿದ್ಧತೆ ಮಾಡಿಕೊಂಡಿದ್ದ ಕಾರಣ 2019 ಮತ್ತು 2022 ವರ್ಷಕ್ಕೆ ಹೋಲಿಸಿದರೆ ಈ ಸಲ ಜೀವಹಾನಿ ಹಾಗೂ ಆಸ್ತಿ -ಪಾಸ್ತಿ ಹಾನಿ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದ್ದಾರೆ.
ರಾಜ್ಯ ವಿಪತ್ತು ನಿಧಿಯಿಂದಲೇ ಪರಿಹಾರ ಭರಿಸಲಾಗುತ್ತಿದೆ. ಕೇಂದ್ರದಿಂದ ನೆರವು ನಿರೀಕ್ಷಿಸಿಲ್ಲ. ಆದರೆ, ಈ ತಿಂಗಳು ಹಾಗೂ ಮತ್ತು ಸೆಪ್ಟೆಂಬರ್ ನಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗುವ ಮುನ್ಸೂಚನೆ ಕೂಡ ಇದೆ. ಹೀಗಾಗಿ ಅತಿವೃಷ್ಟಿ ಸಮಸ್ಯೆಗಳು ಹೆಚ್ಚುವ ಆತಂಕವಿದೆ. ಮಳೆ ಹಾಗೂ ನೆರೆ ಪರಿಸ್ಥಿತಿ ಮುಂದುವರಿಯುವ ಮುನ್ಸೂಚನೆ ಆಧರಿಸಿ ಕಟ್ಟೆಚ್ಚರ ವಹಿಸಲು ಎಲ್ಲ ಜಿಲ್ಲಾಡಳಿತಗಳಿಗೆ ಸೂಚಿಸಲಾಗಿದೆ ಎಂದು ಹೇಳಿದ್ದಾರೆ.