ಬೆಂಗಳೂರು: ಸಿಲಿಕಾನ್ ಸಿಟಿ ಜನರಿಗೆ ಆರೋಗ್ಯ ಇಲಾಖೆಯಿಂದ ಮತ್ತೊಂದು ಆರೋಗ್ಯ ಭಾಗ್ಯ ಸಿಗಲಿದೆ. ರಾಜಧಾನಿಯ ಪ್ರತಷ್ಠಿತ ಆಸ್ಪತ್ರೆಯಾದ ಮಲ್ಲೇಶ್ವರಂನ ಕೆ.ಸಿ ಜನರಲ್ ಆಸ್ಪತ್ರೆಯನ್ನು ವೈದ್ಯಕೀಯ ಹಾಗೂ ಸಂಶೋಧನಾ ಮಹಾವಿದ್ಯಾಲಯವಾಗಿ ಉನ್ನತ್ತೀಕರಿಸಲು ರಾಜ್ಯ ಸರ್ಕಾರ ಸಜ್ಜಾಗಿದೆ.
ಕೊವಿಡ್ ಬಳಿಕ ವಿಕ್ಟೋರಿಯಾನಲ್ಲಿ ದಿನದಿಂದ ದಿನಕ್ಕೆ ರೋಗಿಗಳ ಸಂಖ್ಯೆ ಏರಿಕೆಯಾಗುತ್ತಿದ್ದು, ಇದರಿಂದ ರೋಗಿಗಳು ಪರದಾಡುವಂತಾಗಿದೆ. ಇದನ್ನು ತಪ್ಪಿಸಲು ರಾಜ್ಯ ಸರ್ಕಾರ ಈ ಮಹತ್ವದ ನಿರ್ಧರ ಕೈಗೊಂಡಿದ್ದು, ಇದರಿಂದ ಬಡ ಜನರಿಗೆ ಮತಷ್ಟು ಸೌಲಭ್ಯಗಳು ಸಿಗಲಿದೆ.
ಈಗಾಗಲೇ ಈ ಬಗ್ಗೆ ಆರೋಗ್ಯ ಇಲಾಖೆ ಮತ್ತು ವೈದ್ಯಕೀಯ ಶಿಕ್ಷಣ ಇಲಾಖೆ ಚರ್ಚೆ ಮಾಡಿದ್ದು, NMC ಗೈಡಲೈನ್ಸ್ ಎಲ್ಲ ಮಾನದಂಡಗಳು ಕೆ ಸಿ ಜನರಲ್ ಅಸ್ಪತ್ರೆಯಲ್ಲಿ ಇವೆ. ಇದರಿಂದ ಜನರಿಗೆ ಹೆಚ್ಚಿನ ವೈದ್ಯಕೀಯ ತಜ್ಞರು, ಉತ್ತಮ ಚಿಕಿತ್ಸಾ ಸೇವೆಗಳು, ಕಡಿಮೆ ವೆಚ್ಚದ ಆರೋಗ್ಯ ಸೇವೆ, ಸ್ಥಳೀಯ ಜನರಿಗೂ ಉತ್ತಮ ಆರೋಗ್ಯ ಮೂಲಸೌಲಭ್ಯ, ವೈದ್ಯಕೀಯ ಶಿಕ್ಷಣ ಮತ್ತು ಸಂಶೋಧನೆ ಸಿಗಲಿದೆ ಎಂದು ಅರೋಗ್ಯ ಸಚಿವರು ದಿನೇಶ್ ಗುಂಡೂರಾವ್ ಮಾಹಿತಿ ನೀಡಿದ್ದಾರೆ.
ಇನ್ನೂ ಕೆಸಿಜಿ ಆಸ್ಪತ್ರೆಯನ್ನ ಮೆಡಿಕಲ್ ಕಾಲೇಜು ಮಾಡುವುದರಿಂದ ವಿಕ್ಟೋರಿಯಾ ಆಸ್ಪತ್ರೆ ಮೇಲೆ ಎದುರಾಗಿರುವ ಒತ್ತಡ ಕಡಿಮೆಯಾಗಲಿದ್ದು, ಬಡ ಜನರಿಗೆ ಮತಷ್ಟು ಚಿಕಿತ್ಸಾ ಸೌಲಭ್ಯ ಎಲ್ಲ ಸೂಪರ್ ಸ್ಪೆಷಾಲಿಟಿ ಚಿಕಿತ್ಸಾ ಸೌಲಭ್ಯ ತಜ್ಞರು ಲಭ್ಯವಾಗಲಿದೆ. ಮುಂದಿನ ವರ್ಷದಿಂದಲೇ ಎಂಡಿ, ಎಂಎಸ್ ಕೋರ್ಸ್ಗಳನ್ನ ಶುರು ಮಾಡಲು ಆರೋಗ್ಯ ಇಲಾಖೆ ಮುಂದಾಗಿದೆ.
ಈ ಬಗ್ಗೆ ಆರೋಗ್ಯ ಇಲಾಖೆ ಯೋಜನೆ ರೂಪಿಸಿದ್ದು, ಸರ್ಕಾರದ ಗಮನಕ್ಕೂ ತಂದಿದೆ. ಕೆಸಿಜಿಯಲ್ಲಿ ಹೊಸ ತಂತ್ರಜ್ಞಾನಗಳನ್ನೊಳಗೊಂಡ ವಿಶೇಷ ಮೆಡಿಕಲ್ ಕಾಲೇಜು ಆಸ್ಪತ್ರೆಯಾಗಲಿದೆ.
ಇದನ್ನೂ ಓದಿ: ನಾಳೆ ದೇಶಾದ್ಯಂತ ಬ್ಯಾಂಕ್ ಬಂದ್ | ಸಿಬ್ಬಂದಿಗಳಿಂದ ಮುಷ್ಕರಕ್ಕೆ ಕರೆ..!


















