ಧಾರವಾಡ : ರಾಷ್ಟ್ರ ರಕ್ಷಣೆಯ ಉನ್ನತ ಕೈಂಕರ್ಯವನ್ನು ಹೆಗಲಿಗೇರಿಸಿಕೊಂಡು ಯುದ್ಧಭೂಮಿಯಲ್ಲಿ ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಸೈನಿಕನಿಗೂ ಸದ್ಗತಿ ಪ್ರಾಪ್ತವಾಗುತ್ತದೆ ಎಂದು ಕಾಶಿ ಜ್ಞಾನ ಪೀಠದ ಶ್ರೀಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ನುಡಿದರು.
ಅವರು ಮಹಾರಾಷ್ಟ್ರದ ಲಾತೂರ ನಗರದಲ್ಲಿ ರವಿವಾರ ಹಮ್ಮಿಕೊಂಡಿದ್ದ ವಿಶೇಷ ಸಮಾರಂಭದಲ್ಲಿ ಕಾಶಿಯ ಶ್ರೀಜಗದ್ಗುರು ವಿಶ್ವಾರಾಧ್ಯ ಜ್ಞಾನಸಿಂಹಾಸನ ಮಹಾಪೀಠದಿಂದ ಕೊಡಮಾಡುವ ಪ್ರತಿಷ್ಠಿತ ಶ್ರೀಮತಿ ಮಾಲತಿ ಮಹಾರುದ್ರಪ್ಪಾ ಖೇಣಿ ಮಾತೃಶಕ್ತಿ ರಾಷ್ಟ್ರೀಯ ಪುರಸ್ಕಾರಗಳನ್ನು ಪ್ರದಾನಮಾಡಿ ಮಾತನಾಡುತ್ತಿದ್ದರು. ಯೋಗಿಯು ತನ್ನ ಯೋಗ ಸಾಧನೆಯಿಂದ ಶಾಶ್ವತ ಸದ್ಗತಿ ಪಡೆದುಕೊಳ್ಳುತ್ತಾನೆ. ತನ್ನ ಖಾಸಗಿ ಬದುಕನ್ನು ಕಳೆದುಕೊಂಡು, ಬಂಧು ಬಾಂಧವರ ಮೋಹವನ್ನು ತ್ಯಜಿಸಿ ಮುಕ್ತ ಮನಸ್ಥಿತಿಯ ತನ್ನೆದೆಯ ಗೂಡಿನಲ್ಲಿ ದೇಶಪ್ರೇಮವನ್ನು ತುಂಬಿಕೊಂಡು ವೈರಿ ರಾಷ್ಟ್ರಗಳ ಸೈನಿಕರೊಂದಿಗೆ ಹೋರಾಟಕ್ಕಿಳಿದು ಹುತಾತ್ಮರಾಗುವ ಎಲ್ಲ ಸೈನಿಕ ಬಂಧುಗಳಿಗೂ ಭಗವಂತನು ಮೋಕ್ಷವನ್ನು ಕರುಣಿಸುತ್ತಾನೆ ಎಂದರು
ಪುರಸ್ಕಾರ ಪ್ರದಾನ : ಆಪರೇಷನ್ ಸಿಂಧೂರದಲ್ಲಿ ಹುತಾತ್ಮರಾದ ಮಹಾರಾಷ್ಟ್ರದ ನಾಂದೇಡ ನಗರದ ಸಚಿನ್ ವನಂಜೇ ಧರ್ಮಪತ್ನಿ ಮಾಧುರಿ ವನಂಜೆ ಹಾಗೂ ಅಹಲ್ಯಾನಗರದ ಸಂದೀಪ ಗಾಯಕರ ಧರ್ಮಪತ್ನಿ ದೀಪಾಲಿ ಗಾಯಕರ ಅವರಿಗೆ ಶ್ರೀಜಗದ್ಗುರು ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ತಲಾ 1 ಲಕ್ಷ ರೂ.ಗಳ ನಗದು ಪುರಸ್ಕಾರ, ಪ್ರಶಸ್ತಿ ಪತ್ರ ಹಾಗೂ ಸ್ಮರಣಿಕೆ ನೀಡಿ ಗೌರವಿಸಿ ಈ ರಾಷ್ಟ್ರೀಯ ಪುರಸ್ಕಾರಗಳನ್ನು ಪ್ರದಾನ ಮಾಡಿ ಆಶೀರ್ವದಿಸಿದರು.

ಇದೇ ಸಂದರ್ಭದಲ್ಲಿ ನಾಂದೇಡದ ಡಾ. ರಾಜೇಂದ್ರ ವೈದ್ಯನಾಥ ಬೆಂಬರೆ ಅವರಿಗೆ ‘ಚಂದ್ರಶೇಖರ ಕಪಾಳೇ ಸಾಹಿತ್ಯ ಪುರಸ್ಕಾರ’, ಲಾತುರದ ತಾನಾಜಿ ರೋಂಗೇ ಅವರಿಗೆ ‘ವೀರಸಂಗಯ್ಯಸ್ವಾಮಿ ಆದರ್ಶ ಶಿಕ್ಷಕ ಪುರಸ್ಕಾರ’, ಸುನೀತಾ ದೇಶಮುಖ ಅವರಿಗೆ ‘ಸಿದ್ಧರಾಮಪ್ಪ ಭೋಗಡೆ ನಾಟ್ಯಕರ್ಮಿ ಪುರಸ್ಕಾರ’, ರಾಮೇಶ್ವರ ಬದ್ಧರ್ ಅವರಿಗೆ ‘ಪರಾಂಡಕರ ಮಹಾರಾಜ್ ಪತ್ರಕರ್ತ ಪುರಸ್ಕಾರ’, ಸೋಲಾಪುರದ ಇಸ್ಲಾಂ ಸಹೋದರಿ ಹಕ್ ಮಹಿದಾ ಮೆಹನೂಲ್ ಅವರಿಗೆ ‘ಸದಾಶಿವಸ್ವಾಮಿ ಪ್ರಜ್ಞಾ ಪುರಸ್ಕಾರ’, ಪುಣೆಯ ನಲಿನೀ ಗಂಗಾಧರ ಚಿರಮೆ ಅವರಿಗೆ ‘ಬಂಡಯ್ಯಾ ಮಠಪತಿ ಸಮಾಜ ಸೇವಾ ಪುರಸ್ಕಾರ’, ಸೊಲ್ಲಾಪುರದ ಸಿದ್ಧೇಶ್ವರ ಮೇತ್ರೇ ಅವರಿಗೆ ‘ವಿಠಾಬಾಯಿ ದೇವಪ್ಪ ಪಸಾರಕರ ಕೃತಜ್ಞತಾ ಪುರಸ್ಕಾರ’, ಸೊಲ್ಲಾಪುರದ ವೇದಾಂತಾಚಾರ್ಯ ಮಾರುತಿ ಮಹಾರಾಜ ಅವರಿಗೆ ‘ಶಾಂತಾಬಾಯಿ ಗಾಯಕವಾಡ ಕೀರ್ತನಕಾರ ಪುರಸ್ಕಾರ’ಗಳನ್ನು ಪ್ರದಾನ ಮಾಡಿ ಆಶೀರ್ವದಿಸಿದರು. ಈ ಪುರಸ್ಕಾರಗಳು ತಲಾ 10 ಸಾವಿರ ರೂ.ಗಳ ನಗದು ಮತ್ತು ಪ್ರಶಸ್ತಿ ಪತ್ರವನ್ನು ಒಳಗೊಂಡಿವೆ.
ಔಸಾ ಸಂಸ್ಥಾನ ಹಿರೇಮಠದ ಡಾ. ಶಾಂತವೀರಲಿಂಗ ಶಿವಾಚಾರ್ಯ ಸ್ವಾಮೀಜಿ ಮತ್ತು ನಾಥ ಸಂಸ್ಥಾನದ ಶ್ರೀ ಗಹನೀನಾಥ ಮಹಾರಾಜರು ಸಭೆಯ ನೇತೃತ್ವವಹಿಸಿದ್ದರು. ಲಾತೂರ ಸಂಸದ ಶಿವರಾಜ್ ಕಾಳಗೆ ಅಧ್ಯಕ್ಷತೆವಹಿಸಿದ್ದರು. ಲಾತೂರದ ವೀರಶೈವ ಲಿಂಗಾಯತ ಸಮಾಜ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಸಹಸ್ರಾರು ಭಕ್ತರು ಪಾಲ್ಗೊಂಡಿದ್ದರು.