ಬೆಂಗಳೂರು: ಪ್ಲಾಸ್ಟಿಕ್ ಗನ್ ತೋರಿಸಿ ಚಿನ್ನದ ಅಂಗಡಿಯಲ್ಲಿ ದರೋಡೆ ಮಾಡಿದ್ದ ನಾಲ್ಕು ಮಂದಿ ಆರೋಪಿಗಳಲ್ಲಿ ಮೂವರನ್ನು ಬಂಧಿಸುವಲ್ಲಿ ಮಾದನಾಯಕನಹಳ್ಳಿ ಪೊಲೀಸರು ಯಶಸ್ವಿಯಾಗಿದ್ದಾರೆ.
ಮೊಹಮ್ಮದ್ ರಫಿಕ್, ಮೊಹಮ್ಮದ್ ಇಬ್ತೇಕರ್, ರಂಶಾದ್ ಬಂಧಿತ ಆರೋಪಿಗಳು ಉಡುಪಿ, ಒಡಿಶಾ, ಮಂಗಳೂರು ಮೂಲದವರು ಎಂದು ತಿಳಿದು ಬಂದಿದೆ.
ಆರೋಪಿಗಳು 50ಕ್ಕೂ ಹೆಚ್ಚು ಪ್ರಕರಣಗಳಲ್ಲಿ ಭಾಗಿಯಾಗಿದ್ದು, ಬೆಂಗಳೂರು ನಗರ, ಗ್ರಾಮಾಂತರ, ರಾಜ್ಯದ ನಾನಾ ಜಿಲ್ಲೆ ಸೇರಿದಂತೆ ಹಲವೆಡೆ ದರೋಡೆ ಮತ್ತು ಕಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿದ್ದಾರೆ. ವಿಚಾರಣೆಯ ವೇಳೆ ಆರೋಪಿಗಳ ಕುಕೃತ್ಯಗಳು ಬೆಳಕಿಗೆ ಬಂದಿವೆ.
ಜೂ.25 ರಂದು ಮಾಗಡಿ ರಸ್ತೆಯ ಮಾಚೋಹಳ್ಳಿಯಲ್ಲಿ ಜ್ಯುವೆಲರಿ ಶಾಪ್ಗೆ ಗ್ಯಾಂಗ್ವೊಂದು ನುಗ್ಗಿ ಪ್ಲಾಸ್ಟಿಕ್ ಗನ್ ಹಿಡಿದು ಅಂಗಡಿ ಮಾಲೀಕನನ್ನು ಬೆದರಿಸಿ 90 ಗ್ರಾಂ ಚಿನ್ನಾಭರಣ ದೋಚಿ ಆರೋಪಿಗಳು ಪರಾರಿಯಾಗಿದ್ದರು.
ಪ್ರಕರಣ ಸಂಬಂಧ ತಲೆಮರೆಸಿಕೊಂಡಿದ್ದ ಆರೋಪಿಗಳನ್ನು ಪೊಲೀಸರು ಕೊನೆಗೂ ಬಂಧಿಸಿದ್ದು, ಬಂಧಿತರಿಂದ 30 ಲಕ್ಷ ಬೆಲೆ ಬಾಳುವ 90 ಗ್ರಾಂ ಚಿನ್ನಾಭರಣ, ಎರಡು ಕಾರುಗಳನ್ನು ವಶಕ್ಕೆ ಪಡೆಯಲಾಗಿದೆ.