ಮಂಗಳೂರು : ಕರಾವಳಿಯಲ್ಲಿ ‘ಕಾಂತಾರ’ ಹಾಗೂ ದೈವರಾಧಕರು ಫೈಟ್ ಜೋರಾಗಿದೆ. ‘ಕಾಂತಾರ: ಚಾಪ್ಟರ್ 1’ ಚಿತ್ರ ನೋಡಿ ಅನೇಕರು ದೈವವನ್ನು ಅನುಕರಿಸುವ ಪ್ರಯತ್ನ ಮಾಡುತ್ತಿದ್ದಾರೆ. ಇದರಿಂದ ದೈವಕ್ಕೆ ಅಪಚಾರ ಆಗುತ್ತಿದೆ ಎನ್ನುವ ಆರೋಪಗಳು ಕೇಳಿ ಬಂದವು. ಇತ್ತೀಚೆಗೆ ದೈವ ಹೇಳಿದ ಮಾತು ಕೂಡ ಚರ್ಚೆಗೆ ಕಾರಣ ಆಗಿತ್ತು. ‘ದೈವ ನುಡಿದಿದ್ದು ಕಾಂತಾರ ಚಿತ್ರದ ಬಗ್ಗೆಯೇ’ ಎಂದು ಅನೇಕರು ಹೇಳಿದ್ದರು. ಈ ಎಲ್ಲಾ ವಿಚಾರಗಳಿಗೆ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ. ‘ದೈವ ಕಾಂತಾರ ಸಿನಿಮಾ ಬಗ್ಗೆ ಏನನ್ನೂ ಹೇಳಿಲ್ಲ’ ಎಂದು ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
‘ಕಾಂತಾರ ಚಾಪ್ಟರ್ 1’ ಸಿನಿಮಾ ರಿಲೀಸ್ ಆದ ಬಳಿಕ ಅನೇಕರು ದೈವದ ಅನುಕರಣೆ ಮಾಡುತ್ತಿದ್ದಾರೆ. ಥಿಯೇಟರ್ ಮುಂದೆ ಬಂದು ದೈವ ಬಂದಂತೆಲ್ಲ ನಡೆದುಕೊಂಡಿದ್ದಾರೆ. ದೈವದ ಅನುಕರಣೆ ಅನೇಕರಿಗೆ ಅಪಹಾಸ್ಯ ಮಾಡುತ್ತಿರುವ ರೀತಿ ಕಾಣಿಸಿದ್ದು, ದೈವಾರಾಧಕರು ವಿರೋಧ ಹೊರಹಾಕಿದ್ದರು. ಹೀಗಾಗಿ, ಕೆಲವರು ದೈವದ ಬಳಿ ಈ ಬಗ್ಗೆ ಪ್ರಶ್ನೆ ಕೇಳಿದ್ದರು.
ಪಿಲಿಚಂಡಿ ದೈವದ ನುಡಿ : ಪಿಲಿಚಂಡಿ ಹೆಸರಿನ ದೈವ ಈ ಬಗ್ಗೆ ಭವಿಷ್ಯ ನುಡಿದಿತ್ತು. ‘ಹುಚ್ಚು ಕಟ್ಟಿದವರನ್ನ ಹುಚ್ಚು ಹಿಡಿಸುತ್ತೇನೆ’ ‘ನನ್ನ ಹೆಸರಿನಲ್ಲಿ ಹಣ ಮಾಡುತ್ತಿರುವವರನ್ನು ನೋಡಿಕೊಳ್ಳುತ್ತೇನೆ. ಹಣವೆಲ್ಲ ಆಸ್ಪತ್ರೆ ಸೇರುವಂತೆ ಮಾಡುತ್ತೇನೆ. ನನ್ನನ್ನು ಅಪಚಾರ ಮಾಡುವವರಿಗೆ ಬುದ್ಧಿ ಕಲಿಸುತ್ತೇನೆ. ನೀವು ಹೋರಾಟವನ್ನು ಮುಂದುವರಿಸಿ. ನಾನು ನಿಮ್ಮ ಬೆನ್ನ ಹಿಂದೆ ಇದ್ದೇನೆ’ ಎಂದು ದೈವ ನುಡಿದಿತ್ತು.

ದೈವಸ್ಥಾನದ ಆಡಳಿತ ಮಂಡಳಿಂದ ಸ್ಪಷ್ಟನೆ ಏನು? ಮಂಗಳೂರು ತಾಲೂಕಿನ ಬಜಪೆ ಸಮೀಪದ ಪಡುಪೆರಾರ ಕ್ಷೇತ್ರದಲ್ಲಿರುವ ಬ್ರಹ್ಮ ದೇವರು ಬಲವಾಂಡಿ-ಪಿಲ್ಚಂಡಿ ದೈವಸ್ಥಾನದ ಆಡಳಿತ ಮಂಡಳಿ ದೈವದ ನುಡಿ ಕುರಿತು ಸ್ಪಷ್ಟನೆ ನೀಡಿದೆ. ‘ದೈವವು ನೀಡಿದ ಅಭಯ ನಡೆ ನುಡಿಗಳ ವಿಚಾರದಲ್ಲಿ ಗೊಂದಲ ಭಿನ್ನಾಭಿಪ್ರಾಯ ನಿರ್ಮಾಣವಾಗಿದೆ. ಕೆಲವು ಯುವಕರು ದೈವದ ಅಪಚಾರದ ಬಗ್ಗೆ ದೈವದ ಬಳಿ ನಿವೇದನೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ದೈವವು ಸೂಕ್ತ ಅಭಯ ನೀಡಿದೆ ಹೊರತು ಕಾಂತಾರ ಬಗ್ಗೆ ಯಾವುದೇ ನುಡಿಯನ್ನು ದೈವ ನೀಡಿರುವುದಿಲ್ಲ. ಯಾವುದೇ ಚಲನಚಿತ್ರದ ಬಗ್ಗೆಯೂ ದೈವ ಅಭಯ ನುಡಿ ನೀಡಿಲ್ಲ’ ಎಂದು ಸ್ಪಷ್ಟನೆ ಕೊಟ್ಟಿದೆ. ಈ ಮೂಲಕ ವಿವಾದಕ್ಕೆ ತೆರೆ ಬಿದ್ದಿದೆ.