ನವದೆಹಲಿ: ಭಾರತೀಯ ಸೇನೆಯ ಅಧಿಕಾರಿ ಕರ್ನಲ್ ಸೋಫಿಯಾ ಖುರೇಷಿ(Colonel Sofiya Qureshi) ಅವರನ್ನು “ಉಗ್ರರ ಸಹೋದರಿ” ಎಂದು ಕರೆದಿದ್ದ ಬಿಜೆಪಿ ನಾಯಕ, ಮಧ್ಯಪ್ರದೇಶದ ಸಚಿವ ವಿಜಯ್ ಶಾ ಅವರನ್ನು ಸುಪ್ರೀಂ ಕೋರ್ಟ್ ಇಂದು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿದೆ. ಸಚಿವರ ಹೇಳಿಕೆಯು ಅಸಂಬದ್ಧ ಮತ್ತು ಸಂವೇದನಾರಹಿತ ಎಂದು ಬಣ್ಣಿಸಿರುವ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ ಬಿ.ಆರ್.ಗವಾಯಿ ಅವರು, “ಇದೆಂಥಾ ಹೇಳಿಕೆ? ನಿಮಗೆ ಸ್ವಲ್ಪವೂ ಸೂಕ್ಷ್ಮತೆ, ಸಂವೇದನೆ ಇಲ್ಲವೇ? ಹೋಗಿ, ಹೈಕೋರ್ಟ್ಗೆ ಹೋಗಿ ಕ್ಷಮೆಯಾಚಿಸಿ” ಎಂದು ಸಚಿವ ವಿಜಯ್ ಶಾಗೆ ಸೂಚಿಸಿದ್ದಾರೆ. ಸಾಂವಿಧಾನಿಕ ಹುದ್ದೆಯಲ್ಲಿರುವವರು ಮಾತನಾಡುವಾಗ ಎಚ್ಚರಿಕೆ ವಹಿಸಬೇಕು ಎಂದೂ ಹೇಳಿದ್ದಾರೆ.
ಸಚಿವ ವಿಜಯ್ ಶಾ ಅವರು ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಗೆ ಕಾಂಗ್ರೆಸ್ ಸೇರಿದಂತೆ ಪ್ರತಿಪಕ್ಷಗಳು, ನಿವೃತ್ತ ಸೇನಾಧಿಕಾರಿಗಳು ಮಾತ್ರವಲ್ಲದೇ ಬಿಜೆಪಿಯ ಕೆಲವು ನಾಯಕರಿಂದಲೂ ಟೀಕೆ ವ್ಯಕ್ತವಾಗಿತ್ತು. ಈ ವಿಚಾರವನ್ನು ಸ್ವಯಂಪ್ರೇರಿತವಾಗಿ ವಿಚಾರಣೆಗೆ ಪರಿಗಣಿಸಿದ್ದ ಮಧ್ಯಪ್ರದೇಶ ಹೈಕೋರ್ಟ್, ಸಚಿವ ಶಾ ವಿರುದ್ಧ ಎಫ್ಐಆರ್ ದಾಖಲಿಸಿ ಕ್ರಿಮಿನಲ್ ವಿಚಾರಣೆ ಆರಂಭಿಸುವಂತೆ ಬುಧವಾರ ಆದೇಶ ನೀಡಿತ್ತು ಈ ಹಿನ್ನೆಲೆಯಲ್ಲಿ ಕ್ರಿಮಿನಲ್ ವಿಚಾರಣೆಗೆ ಆದೇಶ ಪ್ರಶ್ನಿಸಿ ಸುಪ್ರೀಂ ಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿತ್ತು.
ಇಂದು ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ, “ಒಂದು ದಿನದಲ್ಲಿ ನಿಮಗೆ ಏನೂ ಆಗುವುದಿಲ್ಲ. ನೀವು ಯಾರು ಎಂಬುದು ನಿಮಗೆ ಗೊತ್ತು” ಎಂದು ಹೇಳಿ, ಬಂಧನದಿಂದ ಮಧ್ಯಂತರ ರಕ್ಷಣೆ ಕೋರಿ ವಿಜಯ್ ಶಾ ಸಲ್ಲಿಸಿದ್ದ ಅರ್ಜಿಯನ್ನು ತಿರಸ್ಕರಿಸಿತು.
ಏನಿದು ಪ್ರಕರಣ?
ಮಧ್ಯಪ್ರದೇಶದ ಬುಡಕಟ್ಟು ಕಲ್ಯಾಣ ಸಚಿವರಾಗಿರುವ ವಿಜಯ್ ಶಾ ಅವರು ಮೇ 12ರಂದು ಇಂದೋರ್ ನ ಗ್ರಾಮದಲ್ಲಿ ಸಾರ್ವಜನಿಕ ಕಾರ್ಯಕ್ರಮದಲ್ಲಿ ಮಾತನಾಡುತ್ತಿದ್ದರು. ಈ ವೇಳೆ ಆಪರೇಷನ್ ಸಿಂದೂರ ಕುರಿತು ಪ್ರಸ್ತಾಪಿಸುತ್ತಾ, “ಪಹಲ್ಗಾಮ್ ದಾಳಿಗೆ ಭಾರತ ಸರಿಯಾಗಿಯೇ ಪ್ರತೀಕಾರ ತೀರಿಸಿದೆ. ಉಗ್ರರು ನಮ್ಮ ಹೆಣ್ಣುಮಕ್ಕಳ ಸಿಂಧೂರವನ್ನು ಅಳಿಸಿ ಅವರನ್ನು ವಿಧವೆಯರನ್ನಾಗಿ ಮಾಡಿದರು. ಪ್ರಧಾನಿ ನರೇಂದ್ರ ಮೋದಿಯವರು ಉಗ್ರರ ಸಹೋದರಿಯನ್ನೇ(ಕರ್ನಲ್ ಸೋಫಿಯಾ ಖುರೇಷಿ) ಸೇನಾ ವಿಮಾನದಲ್ಲಿ ಕಳುಹಿಸಿ ಉಗ್ರರ ವಿರುದ್ಧ ಪ್ರತೀಕಾರ ತೀರಿಸಿಕೊಂಡಿದ್ದಾರೆ” ಎಂದು ಹೇಳಿದ್ದರು.
ಈ ಹೇಳಿಕೆಗೆ ವಿವಿಧ ವಲಯಗಳಿಂದ ಭಾರೀ ಆಕ್ಷೇಪ ವ್ಯಕ್ತವಾದ ಹಿನ್ನೆಲೆಯಲ್ಲಿ ವಿಜಯ್ ಶಾ ಕ್ಷಮೆ ಕೋರಿದ್ದರು. ಇದೇ ವೇಳೆ, ಸಚಿವರ ಹೇಳಿಕೆಯನ್ನು ಗಂಭೀರವಾಗಿ ಪರಿಗಣಿಸಿದ್ದ ಮಧ್ಯಪ್ರದೇಶ ಹೈಕೋರ್ಟ್, ಸಂಜೆಯೊಳಗಾಗಿ ಸಚಿವರ ವಿರುದ್ಧ ಎಫ್ಐಆರ್ ದಾಖಲಿಸುವಂತೆ ರಾಜ್ಯ ಡಿಜಿಪಿಗೆ ಸೂಚಿಸಿತ್ತು. ಎಫ್ಐಆರ್ ದಾಖಲಿಸುವಲ್ಲಿ ವಿಫಲವಾದರೆ ನ್ಯಾಯಾಂಗ ನಿಂದನೆಯೆಂದು ಪರಿಗಣಿಸಲಾಗುತ್ತದೆ ಎಂಬ ಎಚ್ಚರಿಕೆಯನ್ನೂ ನೀಡಿತ್ತು.