ಬೆಂಗಳೂರು : ಬಾಕಿ ಆಸ್ತಿ ತೆರಿಗೆ ಪಾವತಿಸದ ಕಟ್ಟಡ ಮಾಲೀಕರ ವಿರುದ್ಧ ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕಠಿಣ ಕ್ರಮ ಕೈಗೊಳ್ಳಲು ಮುಂದಾಗಿದೆ. ತೆರಿಗೆ ವಸೂಲಿಗೆ ಹೊಸ ಅಸ್ತ್ರ ಪ್ರಯೋಗಿಸಲು ಪ್ರಾಧಿಕಾರ ಸಿದ್ಧತೆ ನಡೆಸಿದೆ.
ಈಗಾಗಲೇ ಒನ್ ಟೈಮ್ ಸೆಟಲ್ಮೆಂಟ್ (ಒಟಿಎಸ್) ಯೋಜನೆಯ ಮೂಲಕ ತೆರಿಗೆ ಪಾವತಿಸಲು ವಿನಾಯಿತಿ ನೀಡಲಾಗಿತ್ತು. ನಂತರ ಸುಮಾರು 7 ಲಕ್ಷ ಕಟ್ಟಡ ಮಾಲೀಕರಿಗೆ ನೋಟಿಸ್ ನೀಡಲಾಗಿದ್ದು, ಬಾಕಿ ತೆರಿಗೆ ಪಾವತಿಸದ ಆಸ್ತಿಗಳ ಹರಾಜು ಪ್ರಕ್ರಿಯೆಯನ್ನೂ ಆರಂಭಿಸಲಾಗಿತ್ತು. ಆದಾಗ್ಯೂ, ಹರಾಜಿಗೆ ನಿರೀಕ್ಷಿತ ಪ್ರತಿಕ್ರಿಯೆ ಸಿಗದೇ, ಇನ್ನೂ ಸುಮಾರು 4 ಲಕ್ಷಕ್ಕೂ ಹೆಚ್ಚು ಕಟ್ಟಡ ಮಾಲೀಕರು ತೆರಿಗೆ ಪಾವತಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಹಿನ್ನೆಲೆ, ಹರಾಜು ಪ್ರಕ್ರಿಯೆಯಲ್ಲಿ ಯಾರೂ ಭಾಗವಹಿಸದಿದ್ದರೆ ಆ ಆಸ್ತಿಯನ್ನು ಜಿಬಿಎ ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡು ಸುಪರ್ದಿಗೆ ತೆಗೆದುಕೊಳ್ಳುವ ಹೊಸ ಕ್ರಮ ಜಾರಿಗೆ ತರಲು ತೀರ್ಮಾನಿಸಲಾಗಿದೆ. ಬಾಕಿ ತೆರಿಗೆ ಮೊತ್ತವನ್ನು ಪರಿಗಣಿಸಿ, ಮಾರ್ಗಸೂಚಿ ದರ (ಎಸ್ಆರ್ ರೇಟ್) ಆಧಾರದಲ್ಲಿ ಆಸ್ತಿಗೆ ಬೆಲೆ ನಿಗದಿ ಮಾಡಿ, ಉಳಿದ ಮೊತ್ತವನ್ನು ಕಟ್ಟಡ ಮಾಲೀಕರಿಗೆ ಹಿಂತಿರುಗಿಸುವ ಯೋಜನೆಯೂ ರೂಪಿಸಲಾಗಿದೆ.
ಸಂಬಂಧಿತ ನಗರಪಾಲಿಕೆ ಆಸ್ತಿಯನ್ನು ತನ್ನ ಹೆಸರಿಗೆ ವರ್ಗಾವಣೆ ಮಾಡಿಕೊಂಡ ಬಳಿಕ, ನಿರ್ದಿಷ್ಟ ಅವಧಿಯವರೆಗೆ ತೆರಿಗೆ ಪಾವತಿಸಲು ಅವಕಾಶ ನೀಡಲಾಗುತ್ತದೆ. ಆ ಅವಧಿಯಲ್ಲಿ ಮಾಲೀಕರು ಬಾಕಿ ತೆರಿಗೆ, ದಂಡ, ಬಡ್ಡಿ ಹಾಗೂ ವರ್ಗಾವಣೆ ವೆಚ್ಚಗಳನ್ನು ಪಾವತಿಸಿದರೆ ಆಸ್ತಿಯನ್ನು ಮರುಪಡೆಯಬಹುದು.
ಇಲ್ಲದಿದ್ದರೆ, ಆ ಆಸ್ತಿ ನಗರಪಾಲಿಕೆಯ ಹೆಸರಿನಲ್ಲೇ ಉಳಿದುಕೊಳ್ಳಲಿದ್ದು, ಮುಂದಿನ ದಿನಗಳಲ್ಲಿ ಮೂಲ ಮಾಲೀಕರಿಗೆ ಯಾವುದೇ ಹಕ್ಕು ಅಥವಾ ಮಾನ್ಯತೆ ಇರುವುದಿಲ್ಲ. ಜೊತೆಗೆ ಆಸ್ತಿಯನ್ನು ಇತರರಿಗೆ ವರ್ಗಾವಣೆ ಮಾಡುವ ಹಕ್ಕನ್ನೂ ಕಳೆದುಕೊಳ್ಳುತ್ತಾರೆ.
ಹರಾಜು ಪ್ರಕ್ರಿಯೆಯಲ್ಲಿ ಭಾಗವಹಿಸಿ ಬಾಕಿ ತೆರಿಗೆ ಪಾವತಿಸಿದರೆ ಈ ಕ್ರಮದಿಂದ ತಪ್ಪಿಸಿಕೊಳ್ಳಬಹುದು ಎಂದು ಜಿಬಿಎ ಕಂದಾಯ ವಿಭಾಗದ ವಿಶೇಷ ಆಯುಕ್ತ ಮೂನಿಷ್ ಮೌದ್ಗಿಲ್ ತಿಳಿಸಿದ್ದಾರೆ.
ಇದನ್ನೂ ಓದಿ : ದಾವಣಗೆರೆಯಲ್ಲಿ ನಿರ್ಮಾಣವಾದ 15 ದಿನಕ್ಕೆ ಕಿತ್ತು ಹೋಯ್ತು ಚರಂಡಿ : ಸ್ಥಳೀಯರ ಆಕ್ರೋಶ



















