ಮೈಸೂರು: ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ.
ಮೈಸೂರು ಜಿಲ್ಲೆಯ ಹುಣಸೂರು ನಗರದ ಕಲ್ಕುಣಿಕೆಯ ಕುರ್ಜನ್ ಬೀದಿಯ ವಠಾರದಲ್ಲಿ ಈ ಘಟನೆ ನಡೆದಿದೆ. ನಿಂಗರಾಜು ಎಂಬುವವರ ಮನೆಯಲ್ಲಿ ಈ ಘಟನೆ ನಡೆದಿದೆ. ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಮನೆಯಲ್ಲಿದ್ದ ಇಬ್ಬರು ಗಾಯಗೊಂಡಿದ್ದಾರೆ. ಅಲ್ಲದೇ, ರಕ್ಷಿಸಲು ಬಂದಿದ್ದ ಪಕ್ಕದ ಮನೆಯ ಮೂವರು ಕೂಡ ಗಾಯಗೊಂಡಿದ್ದಾರೆ.
ಘಟನೆಯಲ್ಲಿ ನಿಂಗರಾಜು ಪತ್ನಿ ಜ್ಯೋತಿ, ಪಕ್ಕದ ಮನೆಯ ರಾಣಿಯಮ್ಮ, ಶೀಲ, ನಾಗಮ್ಮ ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಮೈಸೂರಿನ ಕೆ.ಆರ್. ಆಸ್ಪತ್ರೆಗೆ ದಾಖಲಿಸಲಾಗಿದೆ.
ನಿಂಗರಾಜುರವರ ಮನೆಯಲ್ಲಿ ಸಿಲಿಂಡರ್ ಬದಲಾಯಿಸುವ ವೇಳೆ ಗ್ಯಾಸ್ ಸೋರಿಕೆಯಿಂದಾಗಿ ಈ ಘಟನೆ ನಡೆದಿದೆ ಎನ್ನಲಾಗಿದೆ. ಜೋರಾದ ಶಬ್ದ ಕೇಳಿ ಪಕ್ಕದ ಮನೆಯ ರಾಣಿಯಮ್ಮ, ಶೀಲ, ನಾಗಮ್ಮ ಓಡಿ ಬಂದಿದ್ದಾರೆ. ಆಗ ಅವರ ಬಟ್ಟೆಗೂ ಹೊತ್ತಿಕೊಂಡಿದೆ. ಈ ಕುರಿತು ಹುಣಸೂರು ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸ್ಥಳಕ್ಕೆ ಶಾಸಕ ಜಿ.ಡಿ. ಹರೀಶ್ ಗೌಡ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.