ಮೈಸೂರು ಅರಮನೆಯಲ್ಲಿದ್ದ ಆನೆಗಳು ಗುದ್ದಾಡಿರುವ ಘಟನೆ ನಡೆದಿದೆ. ಈ ಘಟನೆಯಿಂದಾಗಿ ಕೆಲ ಹೊತ್ತು ಮೈಸೂರು ಅರಮನೆಯಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿತ್ತು.
ದಸರಾ ಗಜಪಡೆಯ ಕಂಜನ್ ಎಂಬ ಆನೆಯ ಮೇಲೆ ಧನಂಜಯ ಎಂಬ ಆನೆ ಏಕಾಏಕಿ ದಾಳಿ ಮಾಡಿದೆ. ಹೀಗಾಗಿ ಬೆದರಿದ ಕಂಜನ್ ಆನೆ ಕಾಲಿಗೆ ಕಟ್ಟಿದ ಸರಪಳಿ ಕಿತ್ತುಕೊಂಡು ಅರಮನೆಯಿಂದ ಹೊರಗೆ ಓಡಿ ಬಂದಿದೆ.
ಅರಮನೆಯ ಜಯ ಮಾರ್ತಾಂಡ ಮುಖ್ಯ ದ್ವಾರದ ಪಕ್ಕದ ಕೋಡಿ ಸೋಮೇಶ್ವರ ದೇಗುಲದ ದ್ವಾರದಿಂದ ಹೊರಗೆ ಓಡಿ ಬಂದಿದೆ. ಆಗ ಮತ್ತೊಂದು ಆನೆ ಕಂಜನ್ ಆನೆಯನ್ನು ಅಟ್ಟಿಸಿಕೊಂಡು ಬಂದಿದೆ. ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿ ಹಾಗೂ ಮಾವುತರು ಆನೆ ಸೆರೆಹಿಡಿಯಲು ಯತ್ನಿಸಿದ್ದಾರೆ. ಆನಂತರ ಹರಸಾಹಸಪಟ್ಟು ಆನೆ ಹಿಡಿದಿದ್ದಾರೆ.
ಕಂಜನ್ ಆನೆ ದೊಡ್ಡಕೆರೆ ಮೈದಾನ ಹತ್ತಿರ ಬ್ಯಾರಿಕೇಡ್ ತಳ್ಳಿಕೊಂಡು ಜನರ ಹತ್ತಿರ ಹೋಗಿದೆ. ಇದನ್ನು ಕಂಡು ಜನರು ಬೆಚ್ಚಿ ಬಿದ್ದು ಓಡಿ ಹೋಗಿದ್ದಾರೆ. ವಾಹನಗಳ ಸಂಚಾರ ನೋಡಿ ಬೆದರಿ ಅಲ್ಲಿಯೇ ನಿಂತಿದೆ. ಆಗ ಮಾವುತರು ಸಮಯಪ್ರಜ್ಞೆಯಿಂದ ಎರಡೂ ಆನೆಗಳನ್ನು ಹಿಡಿದಿದ್ದಾರೆ.