ಮೈಸೂರು: ಪ್ರಯಾಗ್ ರಾಜ್ ನಲ್ಲಿ (Prayagraj) ನಡೆಯುತ್ತಿರುವ ಮಹಾಕುಂಭ ಮೇಳದಲ್ಲಿ (Maha Kumbh Mela 2025) ಭೀಕರ ಕಾಲ್ತುಳಿತ ಉಂಟಾಗಿ 30 ಜನ ಸಾವನ್ನಪ್ಪಿದ್ದಾರೆ. 36 ಜನ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಯಲ್ಲಿ (Hospital) ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ರಾಜ್ಯದ ಇಬ್ಬರು ಯುವಕರು ಮರಳಿ ಬರುತ್ತಿದ್ದ ವೇಳೆ ಅಪಘಾತದಲ್ಲಿ ಸಾವನ್ನಪ್ಪಿದ್ದು, ಕುಟುಂಬಸ್ಥರು ಅಲ್ಲಿಯೇ ಅಂತ್ಯಸಂಸ್ಕಾರ ನಡೆಸಿದ್ದಾರೆ.
ಭೀಕರ ಅವಘಡದಲ್ಲಿ (Accident) ಮೈಸೂರಿನ (Mysuru) ಇಬ್ಬರು ಯುವಕರು ಸಾವನ್ನಪ್ಪಿದ್ದಾರೆ. ಪ್ರಯಾಗ್ ರಾಜ್ ಮಹಾ ಕುಂಭಮೇಳ ಮುಗಿಸಿ ಬರುವಾಗ ರಸ್ತೆ ಅಪಘಾತದಲ್ಲಿ ಮೈಸೂರಿನ ರಾಮಕೃಷ್ಣ ಶರ್ಮ(31), ಅರುಣ್ ಶಾಸ್ತ್ರಿ(38) ಸಾವನ್ನಪ್ಪಿದ್ದಾರೆ. ಪ್ರಯಾಗ್ ರಾಜ್ ಪವಿತ್ರ ಸ್ನಾನ ಮುಗಿಸಿಕೊಂಡು ಕಾಶಿಗೆ ಬರುತ್ತಿದ್ದ ಸಂದರ್ಭದಲ್ಲಿ ಮಿರ್ಜಾಪುರದ ಬಳಿ ಲಾರಿ ಮತ್ತು ಕಾರಿನ ಮಧ್ಯೆ ಭೀಕರ ಅಪಘಾತ ಸಂಭವಿಸಿದೆ.
ಈ ವೇಳೆ ಕಾರಿನಲ್ಲಿದ್ದ ಇಬ್ಬರ ತಲೆಗೂ ತೀವ್ರ ಪೆಟ್ಟಾಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ರಾಮಕೃಷ್ಣ ಶರ್ಮ ಜಿಲ್ಲೆಯ ಕೆ.ಆರ್.ಎಸ್ ಹಿನ್ನೀರಿನ ವೇಣುಗೋಪಾಲ ಸ್ವಾಮಿ ದೇವಸ್ಥಾನದಲ್ಲಿ ಸಹಾಯಕ ಅರ್ಚಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಅರುಣ್ ಶಾಸ್ತ್ರಿ ಕೂಡ ಪುರೋಹಿತರಾಗಿ ಕೆಲಸ ಮಾಡುತ್ತಿದ್ದರು.
ಮೈಸೂರಿನ ಇಬ್ಬರು ಯುವಕರ ಅಂತ್ಯಕ್ರಿಯೆಯನ್ನು ಪ್ರಯಾಗ್ರಾಜ್ ಸಮೀಪದ ಮಿರ್ಜಾಪುರ ಘಾಟ್ ಸಮೀಪವೇ ಅಂತ್ಯಕ್ರಿಯೆ ನಡೆಸಲಾಗಿದ್ದು, ಇಂದು ಅವರ ಅಸ್ತಿಗಳನ್ನು ಕಾಶಿಯಲ್ಲಿ ವಿಸರ್ಜಿಸಿ ಕುಟುಂಬಸ್ಥರು ಊರಿಗೆ ಹಿಂದಿರುಗಲಿದ್ದಾರೆ ಎನ್ನಲಾಗುತ್ತಿದೆ.