ಬೆಂಗಳೂರು: ರಾಜ್ಯ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಲಾರಿ ಮಾಲೀಕರು ಮುಷ್ಕರಕ್ಕೆ ಕರೆ ನೀಡಿದ್ದಾರೆ. ಡೀಸೆಲ್ ಮೇಲಿನ ಮಾರಾಟ ಶುಲ್ಕ ಎರಡು ರೂಪಾಯಿ ಹೆಚ್ಚಳ ಸೇರಿದಂತೆ ಹಲವು ಬೇಡಿಕೆ ಈಡೇರಿಕೆಗೆ ಒತ್ತಯಿಸಿ ಮುಷ್ಕರಕ್ಕೆ ಕರೆ ನೀಡಿದ್ದಾರೆ. ಹೀಗಾಗಿ ಸರಕು ಸಾಗಣೆ ವಲಯದಲ್ಲಿ ಭಾರೀ ಏರುಪೇರು ಆಗುವ ಸಾಧ್ಯತೆ ಇದೆ.
ಲಾರಿ ಮಾಲೀಕರು ಅನಿರ್ದಿಷ್ಟಾವಧಿ ಮುಷ್ಕರದ ಮೂಲಕ ಸರ್ಕಾರಕ್ಕೆ ಬಿಸಿ ಮುಟ್ಟಿಸಲು ತಯಾರಿ ನಡೆಸಿದ್ದಾರೆ. 6 ಲಕ್ಷಕ್ಕೂ ಅಧಿಕ ಲಾರಿ ಹಾಗೂ ಗೂಡ್ಸ್ ವಾಹನಗಳು ಮುಷ್ಕರಕ್ಕೆ ಸಾಥ್ ನೀಡಲಿವೆ. ಕಳೆದ ಆರು ತಿಂಗಳಲ್ಲಿ ಐದು ರೂಪಾಯಿಗೂ ಹೆಚ್ಚು ಡೀಸೆಲ್ ಬೆಲೆ ಹೆಚ್ಚಳವಾಗಿದೆ. ಹೀಗಾಗಿ ಲಾರಿ ಮಾಲೀಕರು ಮುಷ್ಕರ ಹೂಡಿದ್ದಾರೆ.
ಕಳೆದ ಒಂದು ವಾರದ ಹಿಂದೆ ಮುಷ್ಕರ ನಡೆಸುವುದಾಗಿ ಸರ್ಕಾರಕ್ಕೆ ಲಾರಿ ಮಾಲೀಕರು ಎಚ್ಚರಿಕೆ ನೀಡಿದ್ದರು. ಆದರೂ ಸಂಧಾನ ನಡೆದಿರಲಿಲ್ಲ. ಹೀಗಾಗಿ ಮಧ್ಯ ರಾತ್ರಿಯಿಂದಲೇ ಅನಿರ್ದಿಷ್ಟಾವಧಿ ಮುಷ್ಕರಕ್ಕೆ ಕರೆ ನೀಡಲಾಗಿದೆ.
ಸಂಘದ ಪ್ರಮುಖ ಬೇಡಿಕೆಗಳು ಏನು?
ಡೀಸೆಲ್ ಬೆಲೆ ಹೆಚ್ಚಳ ನಿರ್ಧಾರ ಹಿಂದಕ್ಕೆ ಪಡೆಯಬೇಕು
ಟೋಲ್ ದರ ಹೆಚ್ಚಳ ಮಾಡಿರುವುದು ಹಿಂಪಡೆಯಬೇಕು
ಬಾರ್ಡರ್ ಚೆಕ್ ಪೋಸ್ಟ್ ತೆರವು ಮಾಡಬೇಕು
FC ಶುಲ್ಕ ಹೆಚ್ಚಳ ಕೈಬಿಡಬೇಕು
ಬೆಂಗಳೂರು ನಗರಕ್ಕೆ ಸರಕು ಸಾಗಣೆ ವಾಹನಗಳ ಪ್ರವೇಶಕ್ಕೆ ಇರುವ ನಿರ್ಬಂಧ ಸಡಿಲಿಕೆ ಮಾಡಬೇಕು
ಮುಷ್ಕರದಿಂದ ತೊಂದರೆಗಳೇನು?
ನಿನ್ನೆ ಮಧ್ಯ ರಾತ್ರಿಯಿಂದ ಶುರುವಾಗುವ ಅನಿರ್ದಿಷ್ಟಾವಧಿ ಮುಷ್ಕರ ದಿಂದ ಸರಕು ಸಾಗಣೆ ಕ್ಷೇತ್ರಗಳ ಸೇವೆಯಲ್ಲಿ ಭಾರೀ ವ್ಯತ್ಯಯ ಉಂಟಾಗುವ ಸಾಧ್ಯತೆ ಇದೆ. ಅಕ್ಕಿ, ಬೇಳೆ, ದಿನಸಿ, ತರಕಾರಿ ಸೇರಿದಂತೆ ದಿನ ಬಳಕೆಯ ವಸ್ತುಗಳ ಲಭ್ಯತೆಯ ಮೇಲೆ ವ್ಯತ್ಯಯ ಉಂಟಾಗಬಹುದು. ಜಲ್ಲಿಕಲ್ಲು, ಮರಳು, ಸಿಮೆಂಟ್ ಸೇರಿದಂತೆ ಕಟ್ಟಡ ನಿರ್ಮಾಣ ಸಾಮಗ್ರಿಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು. ಪೆಟ್ರೋಲಿಯಂ ವಾಹನಗಳು ಸ್ಟಾಪ್ ಆಗುವುದರಿಂದ ಎರಡು ಮೂರು ದಿನಗಳ ಬಳಿಕ ಪೆಟ್ರೋಲ್, ಡೀಸೆಲ್, ಗ್ಯಾಸ್ ಲಭ್ಯತೆಯಲ್ಲಿ ಕೊರತೆಯಾಗಬಹುದು.
ಹೀಗಾಗಿ ದಿನನಿತ್ಯ ಬಳಕೆ ವಸ್ತುಗಳ ಬೆಲೆ ಏರಿಕೆಯಾಗಬಹುದು. ತರಕಾರಿ, ಹಣ್ಣು, ಹೂವು, ಸೊಪ್ಪು ಸೇರಿದಂತೆ ಅಡುಗೆ ಪದಾರ್ಥಗಳ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಬಹುದು.
ಮುಷ್ಕರಕ್ಕೆ ಬೆಂಬಲ ನೀಡಿದವರು ಯಾರು?
ಮುಷ್ಕರಕ್ಕೆ ರಾಜ್ಯದಾದ್ಯಂತ ಸುಮಾರು 6 ಲಕ್ಷ ಲಾರಿ, ಟ್ರಕ್, ಗೂಡ್ಸ್ ವಾಹನಗಳು ಕೈ ಜೋಡಿಸಿವೆ.
ಆಲ್ ಇಂಡಿಯಾ ಮೋಟಾರ್ ಟ್ರಾನ್ಸ್ಪೋರ್ಟ್ ಕಾರ್ಪೊರೇಷನ್ AIMTC
ಸೌತ್ ಇಂಡಿಯಾ ಮೋಟಾರ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ SIMTA
ಬೆಂಗಳೂರು ಸಿಟಿ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ BCTA
ಕರ್ನಾಟಕ ಗೂಡ್ಸ್ ಟ್ರಾನ್ಸ್ಪೋರ್ಟ್ ಅಸೋಸಿಯೇಷನ್ KGTA
ಬೆಂಗಳೂರು ಸಿಟಿ ಲೋಕಲ್ ಟ್ಯಾಕ್ಸಿ ಅಸೋಸಿಯೇಷನ್ BCLTAA
ಎಲ್ ಪಿಜಿ ಟ್ಯಾಂಕರ್ ಅಸೊಶಿಯೇಶನ್
ಪೆಟ್ರೋಲ್ ಪಂಪ್ ಅಸೋಸಿಯೇಷನ್
ಬೆಂಗಳೂರು ಟೂರಿಸ್ಟ್ ಟೊಂಪೊ ಓನರ್ಸ್ ಅಸೊಶಿಯೇಶನ್
ಕರ್ನಾಟಕ ಟ್ರಾನ್ಸ್ಪೋರ್ಟ್ ಮೋಟಾರ್ ಓನರ್ಸ್ ವೆಲ್ಫೇರ್ ಅಸೊಶಿಯೇಶನ್
ಆಲ್ ಡಿಸ್ಟ್ರಿಕ್ಟ್ ಲಾರಿ ಅಸೋಸಿಯೇಷನ್..
ಹಾಲು, ಔಷಧ, ಗೃಹಬಳಕೆ ಸಿಲಿಂಡರ್, ಆಂಬುಲೆನ್ಸ್ ಸೇವೆಗಳಿಗೆ ಯಾವುದೇ ತೊಂದರೆ ಇಲ್ಲ ಎನ್ನಲಾಗಿದೆ. ಇನ್ನುಳಿದ ಸೇವೆಗಳಲ್ಲಿ ವ್ಯತ್ಯ ಉಂಟಾದರೆ ಅದಕ್ಕೆ ಸರ್ಕಾರವೇ ಹೊಣೆ ಎಂದು ಲಾರಿ ಮಾಲೀಕರು ಹೇಳುತ್ತಿದ್ದಾರೆ.