ನವದೆಹಲಿ: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಸಂವಿಧಾನದ 80(1)(ಎ) ವಿಧಿಯ ಅಡಿ ತಮಗಿರುವ ಅಧಿಕಾರವನ್ನು ಚಲಾಯಿಸಿ, ರಾಜ್ಯಸಭೆಗೆ ನಾಲ್ವರು ಗಣ್ಯ ವ್ಯಕ್ತಿಗಳನ್ನು ನಾಮನಿರ್ದೇಶನ ಮಾಡಿದ್ದಾರೆ. ನಿವೃತ್ತ ಸದಸ್ಯರಿಂದ ತೆರವಾದ ಸ್ಥಾನಗಳನ್ನು ಭರ್ತಿ ಮಾಡಲು ಜುಲೈ 12ರಂದು ಗೆಜೆಟ್ ಅಧಿಸೂಚನೆಯ ಮೂಲಕ ಈ ನಾಮನಿರ್ದೇಶಗಳನ್ನು ಮಾಡಲಾಗಿದೆ.
ನಾಮನಿರ್ದೇಶನಗೊಂಡವರಲ್ಲಿ ಕೇರಳದ ಶಿಕ್ಷಕ ಮತ್ತು ಬಿಜೆಪಿ ಕಾರ್ಯಕರ್ತ ಸಿ. ಸದಾನಂದನ್ ಮಾಸ್ಟರ್, ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, 26/11 ಮುಂಬೈ ದಾಳಿಯ ಉಗ್ರ ಅಜ್ಮಲ್ ಕಸಬ್ನನ್ನು ಗಲ್ಲಿಗೇರಿಸುವ ನಿಟ್ಟಿನಲ್ಲಿ ವಾದ ಮಂಡಿಸಿದ್ದ ಖ್ಯಾತ ವಕೀಲ ಉಜ್ವಲ್ ನಿಕಮ್ ಮತ್ತು ರಾಜಕೀಯ ವಿಜ್ಞಾನಿ ಹಾಗೂ ಇತಿಹಾಸಕಾರರಾದ ಮೀನಾಕ್ಷಿ ಜೈನ್ ಸೇರಿದ್ದಾರೆ.
ಸಿ. ಸದಾನಂದನ್ ಮಾಸ್ಟರ್:
ಕೇರಳದ ಹಿರಿಯ ಶಿಕ್ಷಕ ಮತ್ತು ಸಾಮಾಜಿಕ ಕಾರ್ಯಕರ್ತರಾಗಿರುವ ಸಿ. ಸದಾನಂದನ್ ಮಾಸ್ಟರ್, ಬಿಜೆಪಿಯೊಂದಿಗೆ ದೀರ್ಘಕಾಲದಿಂದ ಗುರುತಿಸಿಕೊಂಡಿದ್ದಾರೆ. 1994ರಲ್ಲಿ ಕೇರಳದ ಪೆರಿಂಚೇರಿಯಲ್ಲಿ ಸಿಪಿಎಂ ಕಾರ್ಯಕರ್ತರು ನಡೆಸಿದ ರಾಜಕೀಯ ಹಿಂಸಾಚಾರದಲ್ಲಿ ಸದಾನಂದನ್ ತಮ್ಮ ಎರಡೂ ಕಾಲುಗಳನ್ನು ಕಳೆದುಕೊಂಡಿದ್ದರು. 2021ರ ಕೇರಳ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಿದ್ದ ಇವರ ಜೀವನವು “ಅನ್ಯಾಯದ ವಿರುದ್ಧ ಬಗ್ಗದಿರುವ, ಧೈರ್ಯದ ಮತ್ತು ಸ್ಫೂರ್ತಿಯ ಸಂಕೇತ” ಎಂದು ಪ್ರಧಾನಿ ಮೋದಿ ಈ ಹಿಂದೆಯೇ ಶ್ಲಾಘಿಸಿದ್ದರು.

ಹರ್ಷವರ್ಧನ್ ಶ್ರಿಂಗ್ಲಾ:
ಭಾರತದ ಮಾಜಿ ವಿದೇಶಾಂಗ ಕಾರ್ಯದರ್ಶಿ ಹರ್ಷವರ್ಧನ್ ಶ್ರಿಂಗ್ಲಾ, ಅಮೆರಿಕ, ಬಾಂಗ್ಲಾದೇಶ ಮತ್ತು ಥೈಲ್ಯಾಂಡ್ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸಿದ್ದಾರೆ. 2023ರಲ್ಲಿ ಭಾರತದ ಜಿ20 ಅಧ್ಯಕ್ಷತೆಯ ಮುಖ್ಯ ಸಂಯೋಜಕರಾಗಿಯೂ ಕಾರ್ಯನಿರ್ವಹಿಸಿದ್ದರು.

ಉಜ್ವಲ್ ನಿಕಮ್:
ಇವರು ಭಾರತದ ಪ್ರಮುಖ ಸರ್ಕಾರಿ ಅಭಿಯೋಜಕರು. 26/11ರ ಮುಂಬೈ ಭಯೋತ್ಪಾದಕ ದಾಳಿಯ ಪ್ರಕರಣದಲ್ಲಿ ವಿಶೇಷ ವಕೀಲರಾಗಿ ಕಾಣಿಸಿಕೊಂಡು ಜನಮಾನಸದಲ್ಲಿ ನೆಲೆಸಿದ್ದಾರೆ. ಉಗ್ರ ಕಸಬ್ಗೆ ಗಲ್ಲುಶಿಕ್ಷೆಯಾಗುವಂತೆ ಮಾಡಿ, ಸಂತ್ರಸ್ತರಿಗೆ ನ್ಯಾಯ ಒದಗಿಸುವಲ್ಲಿ ಇವರ ಪಾತ್ರ ಮಹತ್ತರವಾದದ್ದು. 2024ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಮುಂಬೈ ಉತ್ತರ ಮಧ್ಯ ಕ್ಷೇತ್ರದಿಂದ ಸ್ಪರ್ಧಿಸಿ ಸೋತಿದ್ದರು.
ಡಾ. ಮೀನಾಕ್ಷಿ ಜೈನ್:
ದೆಹಲಿ ವಿಶ್ವವಿದ್ಯಾಲಯದ ಗಾರ್ಗಿ ಕಾಲೇಜಿನಲ್ಲಿ ಇತಿಹಾಸದ ಮಾಜಿ ಸಹಾಯಕ ಪ್ರಾಧ್ಯಾಪಕರಾಗಿದ್ದ ಡಾ. ಮೀನಾಕ್ಷಿ ಜೈನ್, ಭಾರತೀಯ ಇತಿಹಾಸ ಕ್ಷೇತ್ರದಲ್ಲಿ ತಮ್ಮ ಕೊಡುಗೆಗೆ ಹೆಸರುವಾಸಿಯಾಗಿದ್ದಾರೆ. ಶಿಕ್ಷಣ, ಸಾಹಿತ್ಯ, ಇತಿಹಾಸ ಮತ್ತು ರಾಜಕೀಯ ವಿಜ್ಞಾನದಲ್ಲಿ ಇವರ ಕೊಡುಗೆ ಮಹತ್ತರ. 2020ರಲ್ಲಿ ಪದ್ಮಶ್ರೀ ಪ್ರಶಸ್ತಿಯನ್ನು ಪಡೆದಿರುವ ಇವರು, ಈ ಹಿಂದೆ ಭಾರತೀಯ ಐತಿಹಾಸಿಕ ಸಂಶೋಧನಾ ಮಂಡಳಿಯ ಸದಸ್ಯರಾಗಿಯೂ ಸೇವೆ ಸಲ್ಲಿಸಿದ್ದಾರೆ.

ರಾಷ್ಟ್ರಪತಿಗಳ ನಾಮನಿರ್ದೇಶನ ಅಧಿಕಾರ
ಸಂವಿಧಾನದ ಆರ್ಟಿಕಲ್ 80(1)(ಎ) ಅಡಿಯಲ್ಲಿ ರಾಷ್ಟ್ರಪತಿಗಳಿಗೆ ರಾಜ್ಯಸಭೆಗೆ 12 ಸದಸ್ಯರನ್ನು ನಾಮನಿರ್ದೇಶನ ಮಾಡುವ ಅಧಿಕಾರವಿದೆ. ಈ ಅಧಿಕಾರವನ್ನು ಕಲೆ, ಸಾಹಿತ್ಯ, ವಿಜ್ಞಾನ ಮತ್ತು ಸಮಾಜ ಸೇವೆ ಕ್ಷೇತ್ರಗಳಲ್ಲಿ ಅಸಾಧಾರಣ ಸಾಧನೆ ಮಾಡಿದ ವ್ಯಕ್ತಿಗಳನ್ನು ಗುರುತಿಸಿ ರಾಜ್ಯಸಭೆಗೆ ಆಯ್ಕೆ ಮಾಡುವ ಉದ್ದೇಶಕ್ಕಾಗಿ ಬಳಸಲಾಗುತ್ತದೆ. ಸಂಸತ್ತಿಗೆ ವಿವಿಧ ಕ್ಷೇತ್ರಗಳ ಪರಿಣತರನ್ನು ಮತ್ತು ಅನುಭವವನ್ನು ತರಲು ಈ ನಾಮನಿರ್ದೇಶನವು ನೆರವಾಗುತ್ತದೆ. ರಾಜಕೀಯ ಪರಿಗಣನೆಗಳನ್ನು ಮೀರಿ ಸಾಂಸ್ಕೃತಿಕ ಮತ್ತು ಸಾಮಾಜಿಕ ಔಚಿತ್ಯವನ್ನು ಹೆಚ್ಚಿಸುವ ಗುರಿಯನ್ನು ಇದು ಹೊಂದಿದೆ.
ಇದೇ ವೇಳೆ, ರಾಜ್ಯಸಭೆಗೆ ನಾಮನಿರ್ದೇಶನಗೊಂಡಿರುವ ಹರ್ಷವರ್ಧನ್ ಶ್ರಿಂಗ್ಲಾ, ಉಜ್ವಲ್ ನಿಕಮ್, ಸಿ. ಸದಾನಂದನ್ ಮಾಸ್ಟರ್, ಮತ್ತು ಮೀನಾಕ್ಷಿ ಜೈನ್ ಅವರನ್ನು ಪ್ರಧಾನಿ ನರೇಂದ್ರ ಮೋದಿ ಅವರು ಅಭಿನಂದಿಸಿದ್ದಾರೆ.



















