ಪಾಲನ್ಪುರ: ಕೆಲಸದಾಕೆಯ ಮೇಲೆ ಇಟ್ಟ ನಂಬಿಕೆಯೇ ಪ್ರಾಣಕ್ಕೆ ಸಂಚಕಾರ ತಂದ ಅಮಾನವೀಯ ಘಟನೆಯೊಂದು ಗುಜರಾತ್ನ ಪಾಲನ್ಪುರದಲ್ಲಿ ನಡೆದಿದೆ. ತನಗೆ ಹಣಕಾಸಿನ ನೆರವು ನೀಡಿ ಉದ್ಯಮ ಬೆಳೆಸಲು ಸಹಕರಿಸಿದ ವೃದ್ಧೆಯನ್ನು ಮಾಜಿ ಮನೆಗೆಲಸದಾಕೆಯೊಬ್ಬಳು ಬರ್ಬರವಾಗಿ ಕೊಲೆ ಮಾಡಿ ಶವವನ್ನು ಮೂಟೆಯಲ್ಲಿ ಕಟ್ಟಿ ಎಸೆದಿರುವ ಘಟನೆ ಬೆಳಕಿಗೆ ಬಂದಿದೆ. ಕಳೆದ ಒಂದು ವಾರದಿಂದ ನಾಪತ್ತೆಯಾಗಿದ್ದ ಶಾಂತಿ ಬೆನ್ ಅಕೇಡಿವಾಲಾ ಎಂಬವರೇ ಕೊಲೆಯಾದ ದುರ್ದೈವಿ.

ಶಾಂತಿ ಬೆನ್ ಮತ್ತು ಆರೋಪಿ ರೇಖಾ ರಾಥೋಡ್ ನಡುವೆ ಕಳೆದ 15 ವರ್ಷಗಳಿಂದ ಗಾಢ ಪರಿಚಯವಿತ್ತು. ಮೊದಲು ಶಾಂತಿ ಬೆನ್ ಮನೆಯಲ್ಲಿ ಕೆಲಸಕ್ಕಿದ್ದ ರೇಖಾ, ನಂತರ ಅವರ ಸ್ನೇಹ ಗಳಿಸಿದ್ದರು. ಒಂದು ವರ್ಷದ ಹಿಂದೆ ರೇಖಾ ಪೀಠೋಪಕರಣಗಳ ವ್ಯವಹಾರ ಆರಂಭಿಸಲು ಮುಂದಾದಾಗ, ಶಾಂತಿ ಬೆನ್ ಅವರು ತಮ್ಮಲ್ಲಿದ್ದ ದೊಡ್ಡ ಮೊತ್ತದ ನಗದು ಮತ್ತು ಚಿನ್ನಾಭರಣಗಳನ್ನು ರೇಖಾಗೆ ಸಾಲವಾಗಿ ನೀಡಿ ಸಹಾಯ ಮಾಡಿದ್ದರು. ಆ ಹಣವನ್ನೇ ಬಳಸಿಕೊಂಡು ರೇಖಾ ಉದ್ಯಮ ಆರಂಭಿಸಿದ್ದರು. ಆದರೆ, ಇತ್ತೀಚೆಗೆ ಶಾಂತಿ ಬೆನ್ ಅವರು ಸಾಲವಾಗಿ ನೀಡಿದ್ದ ತಮ್ಮ ಹಣ ಮತ್ತು ಚಿನ್ನವನ್ನು ಮರಳಿ ಕೇಳಲು ಆರಂಭಿಸಿದಾಗ, ಅವರನ್ನೇ ಇಲ್ಲವಾಗಿಸಲು ರೇಖಾ ಸಂಚು ರೂಪಿಸಿದಳು.
ಅಮಲು ಪದಾರ್ಥ ನೀಡಿ ಭೀಕರ ಹತ್ಯೆ
ಮಾರ್ಚ್ 22 ರಂದು ರೇಖಾ “ಹಣಕಾಸಿನ ವಿಷಯವಾಗಿ ಚರ್ಚಿಸೋಣ” ಎಂದು ಶಾಂತಿ ಬೆನ್ ಅವರನ್ನು ತನ್ನ ಪೀಠೋಪಕರಣಗಳ ಮಳಿಗೆಗೆ ಕರೆಸಿಕೊಂಡಿದ್ದಳು. ಅಲ್ಲಿ ಅವರಿಗೆ ಅಮಲು ಪದಾರ್ಥ ಬೆರೆಸಿದ ಆಹಾರ ಅಥವಾ ಪಾನೀಯ ನೀಡಿ ಪ್ರಜ್ಞೆ ತಪ್ಪುವಂತೆ ಮಾಡಿದ್ದಾಳೆ. ಬಳಿಕ ರೇಖಾ ಮತ್ತು ಆಕೆಯ ನಾಲ್ವರು ಸಹಚರರು ಸೇರಿ ಶಾಂತಿ ಬೆನ್ ಅವರನ್ನು ಕ್ರೂರವಾಗಿ ಹತ್ಯೆ ಮಾಡಿದ್ದಾರೆ. ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಶವವನ್ನು ಗೋಣಿ ಚೀಲದಲ್ಲಿ ತುಂಬಿ, ಪಾಲನ್ಪುರದ ಪಾಳುಬಿದ್ದ ಶೋರೂಂ ಒಂದರ ಬೇಸ್ಮೆಂಟ್ನಲ್ಲಿ ಎಸೆದು ಪರಾರಿಯಾಗಿದ್ದರು.
ಶಾಂತಿ ಬೆನ್ ನಾಪತ್ತೆಯಾದ ನಂತರ ಅವರ ಕುಟುಂಬಸ್ಥರು ದೂರು ನೀಡಿದ್ದರು. ಪೊಲೀಸರು ತಾಂತ್ರಿಕ ದಾಖಲೆಗಳು ಮತ್ತು ಸುಳಿವುಗಳ ಆಧಾರದ ಮೇಲೆ ತನಿಖೆ ನಡೆಸಿದಾಗ ಈ ಭೀಕರ ಕೃತ್ಯ ಬಯಲಾಗಿದೆ. ಶವ ಪತ್ತೆಯಾದ ನಂತರ ಶಾಂತಿ ಬೆನ್ ಅವರ ಪುತ್ರಿ ನ್ಯಾನ್ಸಿ ಮತ್ತು ಸಹೋದರಿ ಕೈಲಾಶ್ ಬೆನ್ ಅವರು ಪೊಲೀಸ್ ಠಾಣೆಯ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ನಂಬಿಕೆಗೆ ದ್ರೋಹ ಬಗೆದ ಆರೋಪಿಗಳನ್ನು ಸಾರ್ವಜನಿಕವಾಗಿ ಪ್ರತಿಭಟನೆ ಮಾಡಬೇಕು ಮತ್ತು ಅವರಿಗೆ ಕಠಿಣ ಶಿಕ್ಷೆಯಾಗಬೇಕು ಎಂದು ಆಗ್ರಹಿಸಿ, ಅಲ್ಲಿಯವರೆಗೆ ಶವವನ್ನು ಸ್ವೀಕರಿಸಲು ನಿರಾಕರಿಸಿದ್ದರು.
ಇಬ್ಬರ ಬಂಧನ
ಪ್ರಸ್ತುತ ಪೊಲೀಸರು ಮುಖ್ಯ ಆರೋಪಿ ರೇಖಾ ರಾಥೋಡ್ ಮತ್ತು ಆಕೆಯ ಒಬ್ಬ ಸಹಚರನನ್ನು ಬಂಧಿಸಿದ್ದಾರೆ. ಇನ್ನುಳಿದ ಮೂವರು ತಲೆಮರೆಸಿಕೊಂಡಿದ್ದು, ಅವರ ಬಂಧನಕ್ಕಾಗಿ ವಿಶೇಷ ತಂಡಗಳನ್ನು ರಚಿಸಲಾಗಿದೆ. ಕೊಲೆ, ಕ್ರಿಮಿನಲ್ ಪಿತೂರಿ ಮತ್ತು ಸಾಕ್ಷ್ಯ ನಾಶಪಡಿಸಿದ ಆರೋಪದಡಿ ಪ್ರಕರಣ ದಾಖಲಾಗಿದ್ದು, ಲೂಟಿ ಮಾಡಲಾದ ಚಿನ್ನವನ್ನು ವಶಪಡಿಸಿಕೊಳ್ಳಲು ಪೊಲೀಸರು ಮುಂದಾಗಿದ್ದಾರೆ.
ಇದನ್ನೂ ಓದಿ : ಇರಾನ್ ಮೇಲೆ ಭೂಸೇನೆ ದಾಳಿ ಭೀತಿ : ಹೊರ್ಮುಜ್ ಜಲಸಂಧಿ ವಶಕ್ಕೆ ಅಮೆರಿಕ ಸಜ್ಜು!



















