ಚಿತ್ರದುರ್ಗ: ಯಾವ ಪುರುಷಾರ್ಥಕ್ಕೆ ಕಾಂಗ್ರೆಸ್ ಸರ್ಕಾರ 1000 ದಿನಗಳ ಸಮಾವೇಶ ಮಾಡುತ್ತಿದೆ ಎಂಬುವುದು ಗೊತ್ತಾಗುತ್ತಿಲ್ಲಾ ಎಂದು ವಿರೋಧ ಪಕ್ಷದ ನಾಯಕ ಆರ್.ಅಶೋಕ್ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಸರ್ಕಾರ 1000 ದಿನಗಳ ಹಾವೇರಿ ಸಮಾವೇಶ ಕುರಿತು ಚಿತ್ರದುರ್ಗದಲ್ಲಿ ಮಾತನಾಡಿದ ಅಶೋಕ್, ರಾಜ್ಯದಲ್ಲಿ ಸಿಎಂ ಯಾರು ಅಂತಾ ಯಾರಿಗೂ ಗೊತ್ತಿಲ್ಲ. ಈ ಬಗ್ಗೆ ಕೇಳಿದರೆ ಮಾಧ್ಯಮದವರ ಮೇಲೆ ಸಿಡುಕುತ್ತಾರೆ. ಸಿಎಂ ಅವರಿಗೆ ಈ ಬಗ್ಗೆ ಫ್ರಸ್ಟ್ರೆಶನ್ ಆಗಿದೆ ಎಂದು ವ್ಯಂಗ್ಯವಾಡಿದ್ದಾರೆ.
ಕಾಂಗ್ರೆಸ್ ಸರ್ಕಾರ 1000 ದಿನಗಳ ಸಮಾವೇಶದ ಬದಲು ಕರಾಳ ದಿನಗಳನ್ನು ಆಚರಿಸಬೇಕು. ಕಾಂಗ್ರೆಸ್ ಸರ್ಕಾರ 1000 ದಿನಗಳ ಕರಾಳ ದಿನಗಳು ಯಾವುವೆಂದರೆ ಬಡವರ ರೇಶನ್ ಕಾರ್ಡ್ ರದ್ದಾಗಿವೆ, ಬಗರ್ ಹುಕುಂ ಸಾಗುವಳಿ ಭೂಮಿ ಕೊಟ್ಟಿಲ್ಲ. ಗುತ್ತಿಗದಾರರಿಂದ 80% ಕಮಿಶನ್ ಆರೋಪ, ಕಾಮಗಾರಿ ಬಿಲ್ ಆಗ್ತಿಲ್ಲ ಅಂತ ಆತ್ಮಹತ್ಯೆ ದಾರಿ ಹಿಡಿದಿದ್ದಾರೆ. ಅಬಕಾರಿಯಲ್ಲಿ 6 ಸಾವಿರ ಕೋಟಿಯ ಡೀಲ್. ಈ 6 ಸಾವಿರ ಕೊಟಿ ರಾಹುಲ್ ಗಾಂಧಿಗೆ ಹೋಯ್ತಾ..? ಸಿದ್ಧರಾಮಯ್ಯನಿಗೆ ಹೋಯ್ತಾ..? ಅಥವಾ ಅದೇ ಹಣದಲ್ಲಿ 1000 ದಿನದ ಸಮಾವೇಶ ಮಾಡ್ತಿದ್ದಾರಾ ಎಂದು ಪ್ರಶ್ನೆ ಮಾಡಿದ್ದಾರೆ.
ಕಳೆದ 6 ತಿಂಗಳಿಂದ ಆಸ್ಪತ್ರೆಗಳಲ್ಲಿ ಜೀವ ರಕ್ಷಕ ಔಷಧಿ ಸಿಗ್ತಿಲ್ಲ. ಈ ಸರ್ಕಾರಕ್ಕೆ ಏನು ಕಚ್ಚಿದೆ ಅಂತ ನನಗೂ ಅರ್ಥ ಆಗ್ತಿಲ್ಲ. ಈಗಾಗಲೇ ಓರ್ವ ಮಂತ್ರಿ ರಾಜೀನಾಮೆ ನೀಡಿದ್ದಾರೆ. ಇನ್ನೂ ಅಬಕಾರಿ ಮಂತ್ರಿ ರಾಜಿನಾಮೆಗೆ ಹೋರಾಟ ಮಾಡ್ತಿದ್ದೀವಿ. ಡಿಕೆಶಿ ದೆಹಲಿಗೆ ರಾಜಕೀಯದ ಗನ್ ಹಿಡಿದು ಬಂದಿದ್ದಾರೆ. ಅವ್ರು, ಅವರ ತಮ್ಮ ಇಬ್ಬರೂ ಬೀದಿಗೆ ಇಳಿದಿದ್ದಾರೆ. ರಾಜಕೀಯವಾಗಿ ಯಾರನ್ನ ಯಾರು ಶೂಟ್ ಮಾಡ್ತಾರೆ ನೋಡಬೇಕು ಎಂದು ಲೇವಡಿ ಮಾಡಿದ್ದಾರೆ.
ಶಕ್ತಿ ಯೋಜನೆಗೆ ಸ್ಮಾರ್ಟ್ ಕಾರ್ಡ್ ಕೊಡುವ ವಿಚಾರವಾಗಿ ಮಾತನಾಡಿ, ಮೊದಲು ಸಿಎಂ ಎಲ್ಲರಿಗೂ ಫ್ರೀ ಅಂದ್ರು. ಈಗ ಸ್ಮಾರ್ಟ್ ಕಾರ್ಡ್ ಕೊಡ್ತೀವಿ ಅಂತಿದಾರೆ. ಈ ಕಾರ್ಡ್ ಕೊಡೋದ್ರಲ್ಲಿ 6 ತಿಂಗಳು ಕಳೀತಾರೆ. ಸಿಕ್ಕಿದವರಿಗೆ ಸಿಕ್ತು, ಇಲ್ಲದವರಿಗೆ ಇಲ್ಲ, ಸರ್ಕಾರ ಪಾಪರ್ ಆಗಿದೆ. ಶಕ್ತಿ ಯೋಜನೆ ಹೆಸರಲ್ಲಿ ಬಸ್ಗಳ ಸಂಖ್ಯೆ ಕಡಿಮೆ ಮಾಡ್ತಿದಾರೆ.
ಶಾಲಾ ಮಕ್ಕಳನ್ನು ಲಾರಿಯಲ್ಲಿ ಪ್ರವಾಸಕ್ಕೆ ಕರೆದೊಯ್ದಿದ್ದಾರೆ. ಸರ್ಕಾರ ದಿವಾಳಿ ಆಗಿದ್ದಕ್ಕೆ, ಮಾನ ಮರ್ಯಾದೆ ಇರಲಾರದಕ್ಕೆ ಇದಕ್ಕಿಂತ ಉದಾಹರಣೆ ಬೇಕಾ. ಈ ನಾಲಾಯಕ ಸರ್ಕಾರ ಬದುಕಿದ್ರೂ, ಸತ್ರೂ ಒಂದೇ. ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ : ಪ್ರಧಾನಿ ಕಾರ್ಯಾಲಯ ‘ಸೇವಾ ತೀರ್ಥ’ಕ್ಕೆ ಸ್ಥಳಾಂತರ | ಪಿಎಂಒಗೆ ಹೊಸ ವಿಳಾಸ



















